ಬೆಳಗಾವಿ: ಬೆಳಗಾವಿಯಲ್ಲಿ ಸದಾಕಾಲ ಕನ್ನಡಿಗರನ್ನು ಕೆರಳಿಸುವ ರೀತಿ ಹೇಳಿಕೆ ನೀಡುವ ಎಂಇಎಸ್ ಮುಖಂಡ ಶುಭಂ ಶೇಳಕೆಯನ್ನು ರಾಜ್ಯದಿಂದ ಗಡಿಪಾರು ಮಾಡುತ್ತಿರುವ ವಿಚಾರವನ್ನು ಲೋಕಸಭೆ ಅಧಿವೇಶನದಲ್ಲಿ ಶಿವಸೇನೆ ಸಂಸದರೊಬ್ಬರು ಪ್ರಸ್ತಾಪಿಸಿದ್ದಾರೆ. ಆದರೆ, ಇದಕ್ಕೆ ಕರ್ನಾಟಕದ ಯಾವೊಬ್ಬ ಸಂಸದರು ವಿರೋಧ ವ್ಯಕ್ತಪಡಿಸದೇ ಇರುವುದು ದೊಡ್ಡ ದುರಂತ ಎಂದು ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಜಿಲ್ಲಾಧ್ಯಕ್ಷ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಿವಸೇನೆ ಸಂಸದ ಅರವಿಂದ ಸಾವಂತ ಶುಭಂ ಶೇಳಕೆ ವಿಷಯ ಪ್ರಸ್ತಾಪಿಸಿದ್ದಾರೆ. ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ಆಗುತ್ತಿದೆ. ಅವರನ್ನು ಗಡಿಪಾರು ಮಾಡುತ್ತಿದ್ದಾರೆ ಎಂದು ಸದನದಲ್ಲಿ ಗಮನಸೆಳೆದರು. ಮರಾಠಿಗರ ಪರವಾಗಿ ಅವರು ಧ್ವನಿ ಎತ್ತಿದ್ದನ್ನು ನಾವು ಶ್ಲಾಘಿಸುತ್ತೇವೆ. ಆದರೆ, ನಮ್ಮ ಕರ್ನಾಟಕದ 28 ಸಂಸದರ ಪೈಕಿ ಒಬ್ಬರೂ ಅರವಿಂದ ಸಾವಂತ ಮಾತಿಗೆ ತಕರಾರು ತೆಗೆಯಲಿಲ್ಲ. ಇದು ನಿಜಕ್ಕೂ ದೊಡ್ಡ ದುರಂತ ಎಂದರು.
ನೀವು ಹೇಳುತ್ತಿರುವುದು ಸುಳ್ಳು. ಬೆಳಗಾವಿಯಲ್ಲಿ ಗಡಿ ವಿವಾದ ಮುಂದಿಟ್ಟುಕೊಂಡು ಪದೇ ಪದೇ ಕನ್ನಡಿಗರು ಮತ್ತು ಮರಾಠಿಗರ ನಡುವಿನ ಸೌಹಾರ್ದತೆ ಕೆಡಿಸುತ್ತಿದ್ದಾರೆ ಅಂತಾ ಯಾರೂ ಧ್ವನಿ ಎತ್ತಲಿಲ್ಲ. ಇದು ನಮ್ಮ ಸಂಸದರ ವೈಫಲ್ಯ ಮತ್ತು ಪ್ರಮಾದ. ಈ ರೀತಿ ಹೇಡಿತನ ಪ್ರದರ್ಶಿಸಬಾರದಿತ್ತು. ಮರಾಠಿಗರದ್ದು ಬೆಳಗಾವಿ, ಮುಂಬೈ ಹಾಗೂ ದೆಹಲಿಯಲ್ಲಿ ತಮ್ಮ ಪ್ರಭಾವ ಬೆಳೆಸುತ್ತಿದ್ದಾರೆ. ಅವರಲ್ಲಿನ ಬದ್ಧತೆ, ಭಾಷಾಭಿಮಾನ ನಮ್ಮ ರಾಜಕಾರಣಿಗಳಿಗೆ ಇಲ್ಲ ಎಂದು ಅಶೋಕ ಚಂದರಗಿ ಕಿಡಿಕಾರಿದರು.
ನಾಳೆ ಕಲಾಪ ನಡೆಯುವ ವೇಳೆಯಾದ್ರೂ ಕರ್ನಾಟಕದ ಸಂಸದರ ಈ ಬಗ್ಗೆ ಧ್ವನಿ ಎತ್ತಬೇಕು. ಗಡಿ ವಿವಾದ 2004ರಿಂದ ಸುಪ್ರೀಂಕೋರ್ಟ್ ನಲ್ಲಿದೆ. ಅದನ್ನು ಕೆದಕುವುದರಿಂದ ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಹೇಳುವ ಧೈರ್ಯವನ್ನು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸಂಸದರು ತೋರಬೇಕು. ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಸೇರಿ ಪಕ್ಷಾತೀತವಾಗಿ ಎಲ್ಲಾ ಸಂಸದರು ಶಿವಸೇನೆ ಸಂಸದ ಅರವಿಂದ ಸಾವಂತ ಅವರ ಮಾತಿಗೆ ತಕ್ಕ ನೀಡುವಂತೆ ಅಶೋಕ ಚಂದರಗಿ ಒತ್ತಾಯಿಸಿದರು