ಬೆಳಗಾವಿ: ಬೆಳಗಾವಿಯ ಅನಗೋಳದಲ್ಲಿ ಛತ್ರಪತಿ ಸಂಬಾಜೀ ಮಾಹಾರಾಜರ ಪ್ರತಿಮೆ ಅನಾವರಣ ವೇಳೆ ಮಹಾರಾಷ್ಟ್ರ ಸಚಿವ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದ ವಿವಾದ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅನೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸುತ್ತಿದೆ.
ಇಂದು ಕರ್ನಾಟಕ ರಕ್ಷಣಾ ವೇದಿಕೆ ಟಿಎ ನಾರಾಯಾಣಗೌಡ ಬಣದಿಂದ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರತಿಮೆ ಅನಾವರಣ ಕಾರ್ಯಕ್ರಮ ಆಯೋಜನೆ ಮಾಡಿದ ಶಾಸಕ ಅಭಯ ಪಾಟೀಲ್, ಮೇಯರ್ ಸವಿತಾ ಕಾಂಬಳೆ, ಉಪ ಮೇಯರ್ ಆನಂದ ಚವ್ಹಾನ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಾಯಿತು.
ಈ ಕಾರ್ಯಕ್ರಮದ ಆಯೋಜಕರಾಗಿದ್ದ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ್ ಪಾಟೀಲ್, ಮೇಯರ್, ಉಪ ಮೇಯರ್ ಹಾಗೂ ಕೆಲ ನಗರ ಸೇವಕರನ್ನು ಅಮಾನತ್ತು ಮಾಡಬೇಕು. ಪಾಲಿಕೆಯಲ್ಲಿ ಇರುವ ಮೇಯರ್ ಉಪ, ಮೇಯರ್ ಕಚೇರಿಗೆ ಬಿಗ ಹಾಕುತ್ತೇವೆ ಎಂದು ಹೋರಾಟಗಾರರು ಆಕ್ರೋಶ ಹೊರ ಹಾಕಿದರು.