ಹು-ಧಾ: ಜ 09: ಅಂಬೇಡ್ಕರ ಅಂದ್ರೆ ನಮಗೆ ಪ್ರಾಣ, ನಮಗೆ ಉಸಿರು. ವಿಶ್ವಮಾನ ಎಂದು ಖ್ಯಾತಿ ಪಡೆದಿರೋ ನಮ್ಮ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದರೆ ಸಹಿಸಿಕೊಳ್ಳುವ ಮಾತೇ ಇಲ್ಲ ಎಂದು ಕೈ ಶಾಸಕ ಪ್ರಸಾದ್ ಅಬ್ಬಯ್ಯ ಗುಡುಗಿದ್ದಾರೆ.
ಧಾರವಾಡ ನಗರದಲ್ಲಿ ದಲಿತ ಪರ ಸಂಘಟನೆಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ಹೊರಹಾಕಿ ಬಳಿಕ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಂದೊಮ್ಮೆ ನಮಗೆ ಅವಮಾನ ಆದರೆ ಸಹಿಸಿಕೊಳ್ಳಬಲ್ಲೆವು, ಆದರೆ ಅಂಬೇಡ್ಕರಗೆ ಅವಮಾನ ಮಾಡಿದ್ರೆ ಸಹಿಸಿಕೊಳ್ಳುವುದಿಲ್ಲ.
ಸಾವಿರಾರೂ ವರ್ಷಗಳಿಂದ ಅಸ್ಪೃಶ್ಯತೆ ಇತ್ತು. ನಾವು ಯಾರು ಮನುಷ್ಯರೆಂಬ ಭಾವನೆ ಇರಲಿಲ್ಲ. ಆದರೆ ಅಂತಹ ಸಮಯದಲ್ಲಿ ಸಂವಿಧಾನ ಮೂಲಕ ನಮ್ಮ ರಕ್ಷಣೆ ಮಾಡಲು ಬಂದವರು ಅಂಬೇಡ್ಕರ. ಎಲ್ಲ ಹಕ್ಕುಗಳು ಕೊಡಲು ಬಂದವರು ಅಂಬೇಡ್ಕರ.
ನಾವು ಮನಷ್ಯರಾಗಿ ಬಾಳುವ ಶಕ್ತಿ ಕೊಟ್ಟಿರೋದು ಅಂಬೇಡ್ಕರ್ ಅವರ ಸಂವಿಧಾನ. ನಾವು ನೋಡಿದ ದೇವರಾಗಿದ್ದಾರೆ ಅವರು. ನಮಗೆ ಅಂಬೇಡ್ಕರ ಕೊಟ್ಟ ಸಂವಿಧಾನವೇ ಸ್ವರ್ಗ, ಅಮಿತ್ ಶಾ ಬೇಕಿದ್ರೆ ಬೇರೆ ಸ್ವರ್ಗಕ್ಕೆ ಹೋಗಲಿ. ಸಂವಿಧಾನ, ಸ್ವಾತಂತ್ರ್ಯ ಸೇನಾನಿ ಗೌರವಿಸಬೇಕು. ಆದರೆ ಇದನ್ನು ಅಮಿತ್ ಶಾ ಪಾಲಿಸುತ್ತಿಲ್ಲ. ನೀವು ಅಧಿಕಾರಕ್ಕೆ ಬಂದಿರೋದು ಅಂಬೇಡ್ಕರ ಕೊಟ್ಟಿರೋ ಭಿಕ್ಷೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡದ ಜ್ಯುಬಲಿ ವೃತ್ತ, ಸುಭಾಸ್ ರಸ್ತೆ ಸೇರಿದಂತೆ ವಿವಿಧ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿಯೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಬೈಕ್ ರ್ಯಾಲಿಗಳನ್ನು ನಡೆಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ವಿವಿಧ ವಾದ್ಯಗಳನ್ನು ಬಾರಿಸುವ ಮೂಲಕ ಹಾಗೂ ಧ್ವನಿವರ್ದಕಗಳ ಮೂಲಕ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ಅಲ್ಲದೆ ಚಕ್ಕಡಿಗಳ ಮೂಲಕವೂ ಮೆರವಣಿಗೆ ನಡೆಸಲಾಯಿತು. ನಗರದ ಪ್ರಮುಖ ಸ್ಥಳಗಳಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡು, ನಂತರ ಹೃದಯಭಾಗವಾದ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ವ್ಯಾಪಕ ಬಿಗಿ ಭದ್ರತೆ:
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅವಳಿ ನಗದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಚೆನ್ನಮ್ಮ ವೃತ್ತ ಸೇರಿದಂತೆ ವಿವಿಧ ಸ್ಥಳ ಹಾಗೂ ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ಇತ್ತು.