ಬೆಳಗಾವಿ: ರೆಡ್ಡಿ ಸಮುದಾಯ ಧಾರ್ಮಿಕ ಚಟುವಟಿಕೆಗಳ ಜತೆಗೆ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹರಿಹರದ ಎರೆಹೊಸಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಆರ್ಶೀವಚನ ನೀಡಿದರು.
ಬೆಳಗಾವಿ ತಾಲ್ಲೂಕಿನ ಕೆ.ಕೆ.ಗುಡ್ಡದ ಮೇಲೆ ಶುಕ್ರವಾರ ಹಮ್ಮಿಕೊಂಡಿದ್ದ ವೆಂಕಟೇಶ್ವರ ದೇವಸ್ಥಾನ, ಹೇಮರಡ್ಡಿ ಮಲ್ಲಮ್ಮ ಧ್ಯಾನ ಮಂದಿರ ಮತ್ತು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಈ ಭಾಗದ ಅಧಿಕ ಸಂಖ್ಯೆಯ ಜನರು ಪ್ರತಿವರ್ಷತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಾರೆ. ಇದೀಗ ಬೆಳಗಾವಿಯಲ್ಲಿ ಚಿಕ್ಕ ತಿರುಪತಿ ನಿರ್ಮಾಣವಾಗುತ್ತಿರುವುದು ಸಂತೋಷದ ವಿಷಯ. ದೇವಸ್ಥಾನ ನಿರ್ಮಾಣ ಕಾರ್ಯ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು ಎಂದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಡ್ಡಿ ಸಮುದಾಯದಿಂದ ಜನಸ್ನೇಹಿ ಕಾರ್ಯಕ್ರಮಗಳು ನಡೆಯಬೇಕಿದೆ.ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕ, ಯುವತಿಯರಿಗೆ ಹಾಸ್ಟೆಲ್ಗಳ ಅಗತ್ಯವಿದೆ. ಹಾಗಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸಮುದಾಯದ ಮುಖಂಡರು ಮುಂದಾಗಬೇಕು. ಭವಿಷ್ಯದ ದಿನಗಳಲ್ಲಿ ವೆಂಕಟೇಶ್ವರ ದೇವಸ್ಥಾನ ಐತಿಹಾಸಿಕ ಸ್ಥಳವಾಗಿ ಪ್ರಸಿದ್ದಿ ಪಡೆದುಕೊಳ್ಳಲಿದೆ. ಮುಂಬರುವ ದಿನಗಳಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ . ಪಾಟೀಲ ಮಾತನಾಡಿ, ಸಮಾಜದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂಥ ಶಿಕ್ಷಣ ಮತ್ತು ಕೌಶಲ್ಯ ಒದಗಿಸುವ ಸಂಸ್ಥೆಗಳ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಬೇಕು. ದೇವಸ್ಥಾನ, ಕಲ್ಯಾಣಮಂಟಪ ನಿರ್ಮಿಸುವ ಜತೆಗೆ,ಸಮುದಾಯದ ಮಕ್ಕಳು ಹೆಚ್ಚಿನ ಸಾಧನೆ ಮಾಡಲು ಶಿಕ್ಷಣ ಸಂಸ್ಥೆಗಳನ್ನು ಕಟ್ಟಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ರಡ್ಡಿ ಸಮುದಾಯವು ಸಾಮರಸ್ಯಕ್ಕೆ ಹೆಸರಾಗಿದೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅವರು ದೇವಾಲಯ ನಿರ್ಮಿಸುತ್ತಿರುವುದು ನನ್ನ ಅದೃಷ್ಟ. ಈ ಕಾಮಗಾರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ.ಇದು ನನ್ನದೇ ಸಮುದಾಯದ ಕಾರ್ಯವೆಂದು ತಿಳಿದು, ಯಾವ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ. ಈ ದೇವಾಲಯವು ಪ್ರವಾಸೋದ್ಯಮ ಆಕರ್ಷಣೆಗಳಿಗೆ ಸೇರ್ಪಡೆಯಾಗಲಿದೆ.ಮುಂದಿನ ದಿನಗಳಲ್ಲಿ ಇಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರೂ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕಿಯಾದ ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 140 ದೇವಸ್ಥಾನ ಅಭಿವೃದ್ಧಿಪಡಿಸುತ್ತಿದ್ದೇನೆ. ಸಚಿವ ಎಚ್.ಕೆ.ಪಾಟೀಲ ಅವರು ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿ, ಕೇಂದ್ರ ಸರ್ಕಾರದಿಂದ 110 ಕೋಟಿ ರೂ. ಅನುದಾನ ತಂದಿದ್ದಾರೆ. ರಾಜಹಂಸಗಡ ಅಭಿವೃದ್ಧಿಗೂ ಈಗಾಗಲೇ 1 ಕೋಟಿ ರೂ.ಮಂಜೂರು ಮಾಡಿದ್ದು, ಇನ್ನೂ ಹೆಚ್ಚಿನ ಸಹಾಯ ನೀಡುವ ವಿಶ್ವಾಸವಿದೆ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಎಲ್ಲ ಸಮುದಾಯವನ್ನು ಸಮಾನವಾಗಿ ಕಾಣುವ ಮತ್ತು ಎಲ್ಲರೊಂದಿಗೆ ಬೆರೆಯುವ ರಡ್ಡಿ ಸಮುದಾಯ ಅಭಿವೃದ್ಧಿಗೆ ಎಲ್ಲ ರಿತಿಯ ಸಹಾಯಕ ಸಹಕಾರ ನೀಡಲಾಗುವುದು. ವೆಂಕೇಶ್ವರ ದೇವಸ್ಥಾನ ನಿರ್ಮಾಣಕ್ಕೆ ರಾಜ್ಯಸಭಾ ನಿಧಿಯಿಂದ 25 ಲಕ್ಷ ರೂ. ಹಾಗೂ ವೈಯಕ್ತಿಕವಾಗಿ 1ಲಕ್ಷ ರೂ. ನೀಡುತ್ತೇನೆ ಎಂದು ಘೊಷಣೆ ಮಾಡಿದರು.
ಶಾಸಕ ಆಸಿಫ್ ಸೇಠ್, ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಆರ್.ವಿ.ಪಾಟೀಲ, ಬೆಳಗಾವಿ ರಡ್ಡಿ ಸಂಘದ ಪೋಷಕಿ ಇಂದಿರಾಬಾಯಿ ಮಳಲಿ, ರೆಡ್ಡಿ ಸಂಘದ ಮತ್ತು ಬಾಲಾಜಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಮಣ್ಣ ಮುಳ್ಳೂರ, ಉಪಾಧ್ಯಕ್ಷ ಕಾಂತು ಜಾಲಿಬೇರಿ, ಡಾ.ಗಿರೀಶ ಸೋನವಾಲ್ಕರ್, ನಾರಾಯಣ ಭರಮನಿ, ಮಂಜುನಾಥ ಪಾಟೀಲ, ನಾರಾಯಣ ಕೆಂಚರಡ್ಡಿ, ಶ್ರೀನಿವಾಸ ಬೀಸನಕೊಪ್ಪ, ಬಸನಗೌಡ ಕಾಮನಗೌಡರ, ಪಾಂಡುರಂಗ ರಡ್ಡಿ, ರಮೇಶ ಜಂಗಲ, ಸಂಜೀವ ಸೊನ್ನದ, ಲತಾ ಅರಕೇರಿ, ಶಾಂತಾ ಜಂಗಲ, ಕಸ್ತೂರಿ ಭರಮನಿ, ಸುಜಾತಾ ಪಾಟೀಲ ಇತರರಿದ್ದರು.