ಬೆಳಗಾವಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 18 ವರ್ಷಗಳ ಕನಸು ನನಸಾದ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಆರ್.ಸಿ.ಬಿ. ಗೆಲ್ಲುತ್ತಿದ್ದಂತೆ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ರಕ್ಷಣಾವೇದಿಕೆ ನಾರಾಯಣಗೌಡ ಬಣ ವತಿಯಿಂದ ಇವತ್ತಿನ ಫೈನಲ್ ಪಂದ್ಯದ ನೇರಪ್ರಸಾರ ವೀಕ್ಷಿಸಲು ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಆರ್.ಸಿ.ಬಿ. ಗೆಲ್ಲುವವರೆಗೆ ಕುಳಿತ ಜಾಗದಿಂದ ಕದಲಿಲ್ಲ. ಅತ್ತ ಆರ್.ಸಿ.ಬಿ. ಬ್ಯಾಟಿಂಗ್ ಮಾಡುವಾಗ ಫೋರ್, ಸಿಕ್ಸರ್ ಬೀಳುತ್ತಿದ್ದಂತೆ ಇತ್ತ ಅಭಿಮಾನಿಗಳ ಚಿತ್ಕಾರ ಮುಗಿಲು ಮುಟ್ಟುತ್ತಿತ್ತು. ಬಳಿಕ ಪಂಜಾಬ್ ತಂಡ ಬ್ಯಾಟಿಂಗ್ ಮಾಡುವಾಗ ಅವರ ಒಂದೊಂದು ವಿಕೆಟ್ ಉರುಳುತ್ತಿದ್ದಂತೆ ಆರ್.ಸಿ.ಬಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರುತ್ತಿರಲಿಲ್ಲ.
ಪಂದ್ಯವು ರೋಚಕತೆಯಿಂದ ಸಾಗುತ್ತಿತ್ತು, ಅಂತಿಮವಾಗಿ 6 ರನ್ ಗಳಿಂದ ಆರ್.ಸಿ.ಬಿ. ಗೆಲ್ಲುತ್ತಿದ್ದಂತೆ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಅಭಿಮಾನಿಗಳು ಅದ್ಧೂರಿ ವಿಜಯೋತ್ಸವ ಆಚರಿಸಿದರು. ಸತತ ಎರಡು ಗಂಟೆಗೂ ಅಧಿಕ ಕಾಲ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದರು. ಕೈಯಲ್ಲಿ ಕನ್ನಡ ಬಾವುಟ ಹಿಡಿದು, ಬಾನೆತ್ತರದಲ್ಲಿ ಸಿಡಿಮದ್ದುಗಳನ್ನು ಹಾರಿಸಿ ಸಂಭ್ರಮಿಸಿದ್ದು ಕರ್ನಾಟಕ ರಾಜ್ಯೋತ್ಸವ ನೆನಪಿಸಿತು.
ಚನ್ನಮ್ಮ ವೃತ್ತದಲ್ಲಿ ಮಾತನಾಡಿದ ಯುವ ದಂಪತಿ, ನಮಗೆ ತುಂಬಾ ಖುಷಿ ಆಗುತ್ತಿದೆ. ಗಂಡ-ಹೆಂಡತಿ ಬಂದು ಮ್ಯಾಚ್ ಮುಗಿಯೋವರೆಗೂ ನೋಡಿದೇವು. ಈ ಸಲ ಕಪ್ ನಮ್ಮದೇ ಎನ್ನುತ್ತಿದ್ದೇವು. ಇಂದು ಅದು ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
18 ವರ್ಷಗಳಿಂದ ಆರ್.ಸಿ.ಬಿ. ಕಪ್ ಗೆಲ್ಲಬೇಕು ಅಂತಾ ಕಾಯುತ್ತಿದ್ದೇವು. ಅಂತಿಮವಾಗಿ ಇಂದು ನಮಗೆ ಗೆಲುವಾಗಿದೆ. ಇನ್ಮುಂದೆ ನಾವು ಗೆಲ್ಲುತ್ತಾನೆ ಇರುತ್ತೇವೆ. ಮ್ಯಾಚ್ ಸಖತ್ ಎಂಜಾಯ್ ಮಾಡಿದೇವು. ಜೈ ಆರ್.ಸಿ.ಬಿ., ಜೈ ವಿರಾಟ್ ಕೊಹ್ಲಿ ಎನ್ನುವುದು ಅಭಿಮಾನಿ ನಂದಿನಿ ಮಡಿವಾಳ ಅಭಿಪ್ರಾಯ.