ಬೆಳಗಾವಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಐಪಿಎಲ್-2025 ಚಾಂಪಿಯನ್ ಆದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಆರ್ಸಿಬಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ನಡೆದಿದೆ.ಮಂಗಳವಾರ ರಾತ್ರಿ ಫೈನಲ್ ಮ್ಯಾಚ್ ಮುಗಿದ ಬಳಿಕ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಸಂಭ್ರಮಾಚರಣೆ ಮಾಡುವಾಗಲೇ ಈ ದುರಂತ ಸಂಭವಿಸಿದೆ. ಆರ್ಸಿಬಿ ಅಭಿಮಾನಿ ಮಂಜುನಾಥ್ ಈರಪ್ಪ ಕುಂಬಾರ (25) ಮೃತಪಟ್ಟವರು.
ಅವರಾದಿ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಕುಣಿಯುತ್ತಲೇ ಅವರು ಕುಸಿದು ಬಿದ್ದರು. ಕೂಡಲೇ ಗೆಳೆಯರೆಲ್ಲಾ ಸೇರಿ ಸಮೀಪದ ಮಹಾಲಿಂಗಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರೊಳಗೆ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಂಜುನಾಥ್ಗೆ ಕ್ರಿಕೆಟ್ ಕ್ರೇಜ್ ಬಹಳಷ್ಟಿತ್ತು. ಆರ್ಸಿಬಿ ಎಂದರೆ ಹುಚ್ಚು ಅಭಿಮಾನ. ಫೈನಲ್ ಪಂದ್ಯ ವೀಕ್ಷಣೆಗೆ ಗ್ರಾಮದಲ್ಲಿ ಬೃಹತ್ ಎಲ್ಇಡಿ ಪರದೆಯನ್ನು ಅಳವಡಿಸಲು ಮಂಜುನಾಥ್ ಅವರೇ ಮುಂದೆ ನಿಂತು ವ್ಯವಸ್ಥೆ ಮಾಡಿದ್ದರು. ಇದಕ್ಕಾಗಿ ಕಳೆದ ನಾಲ್ಕು ದಿನಗಳಿಂದ ಓಡಾಡಿದ್ದರು. ಪಟಾಕಿ, ಗುಲಾಲು ಎಲ್ಲವನ್ನು ಖರೀದಿಸಿ ತಂದಿದ್ದರು.