ಬೆಳಗಾವಿ: ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಕೇಂದ್ರ ಸರಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಡೆಸಿದ್ದ ಸಮಾವೇಶದಲ್ಲಿ ಪೋಲಿಸ್ ಅಧಿಕಾರಿಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಎತ್ತಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳವಾರ ಜಿಲ್ಲಾ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಚೆನ್ನಮ್ಮ ವೃತದಿಂದ ಜಿಲ್ಲಾ ಕಚೇರಿವರೆಗೆ ಮುಖ್ಯಮಂತ್ರಿ ವಿರುದ್ಧ ಘೋಷಣೆ ಮುಖಾಂತರ ಆಕ್ರೋಶ ಹೊರಹಾಕಿದರು.
ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳುವ ಪೊಲೀಸ್ ರ ಮೇಲೆಯೇ ಮುಖ್ಯಮಂತ್ರಿಗಳು ದರ್ಪ ತೋರಿ ಹಲ್ಲೆ ಮಾಡಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ. ಪೊಲೀಸ್ ಅಧಿಕಾರಿಗಳನ್ನೂ ಒಳಗೊಂಡಂತೆ ಸರ್ಕಾರಿ ಅಧಿಕಾರಿಗಳ ಮೇಲೆ ಈ ಸರ್ಕಾರ ನಡೆಸುತ್ತಿರುವ ಇಂತಹ ದಬ್ಬಾಳಿಕೆಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಅಧಿಕಾರಗಳನ್ನು ನೈತಿಕವಾಗಿ ಕುಸಿಯುವಂತೆ ಮಾಡುತ್ತದೆ.
ಸರ್ಕಾರದ ವ್ಯವಸ್ಥೆಯಲ್ಲಿ ಇರುವ ವ್ಯಕ್ತಿಗಳು ಅಧಿಕಾರಿಗಳ ಮೇಲೆ ದರ್ಪ ತೋರುವ ಕಾರಣಕ್ಕೆ ರಾಜ್ಯದಲ್ಲಿ ಹಲವಾರು ಸರ್ಕಾರಿ ನೌಕರರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ್ದೇವೆ, ಹಾಗೂ ಹಲವಾರು ಬಾರಿ ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿ ‘ನಿಷ್ಪಕ್ಷಪಾತವಾಗಿ ಕಾರ್ಯ ಮಾಡಲು ಆಗುವುದಿಲ್ಲ.
ಸರ್ಕಾರಿ ಅಧಿಕಾರಿಗಳು ರಾಜ್ಯದ ಮುಖ್ಯಮಂತ್ರಿಗಳ ಗುಲಾಮರಲ್ಲ, ರಾಜ್ಯದಲ್ಲಿರುವುದು ಸರ್ವಾಧಿಕಾರಿ ಸರ್ಕಾರ ಅಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾದ ಮುಖ್ಯಮಂತ್ರಿಯೇ ಗೂಂಡಾಗಿರಿಯನ್ನು ಮಾಡಲು ಮುಂದಾದರೆ ರಾಜ್ಯದ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಪಾಠ ಕಲಿಸಲು ಸಿದ್ಧರಿದ್ದಾರೆ. ಮಾಡಿರುವ ತಪ್ಪಿಗೆ ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆಯನ್ನು ಯಾಚಿಸಬೇಕು.
ಬೇರೆಯವರಿಗೆ ಸಂವಿಧಾನದ ಪಾಠ ಹೇಳುವ ಸಿದ್ದರಾಮಯ್ಯ ಸ್ವತಃ ತಾನು ಸಂವಿಧಾನಬದ್ದವಾಗಿ ನಡೆದುಕೊಳ್ಳಬೇಕು. ಸಾರ್ವಜನಿಕ ಜೀವನಕ್ಕೆ ಶೋಭೆಯಲ್ಲದ ಇಂತಹ ಒರಟುತನವನ್ನು ಕೈಬಿಟ್ಟು ತಮ್ಮ ಹುದ್ದೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಗ್ರಹಿಸಿದರು.