ಬೆಳಗಾವಿ: ವಿಜಯಪುರ ಜಿಲ್ಲೆಯ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರರ ಸಂಕಲ್ಪದಂತೆ, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಗೊಟ್ಟದ ಅಡವಿಲಿಂಗ ಮಹಾರಾಜರು ಸುಮಾರು ₹4.5 ಲಕ್ಷ ವೆಚ್ಚದಲ್ಲಿ ಸಿದ್ಧಪಡಿಸಿದ ಸೀರೆಯನ್ನು ರೇಣುಕಾ ಯಲ್ಲಮ್ಮ ದೇವಿಗೆ ಗುರುವಾರ ರಾತ್ರಿ ಅರ್ಪಿಸಿದರು.
1955ರಲ್ಲಿ ಶಿವಯೋಗೀಶ್ವರರು ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿದ್ದರು. ಆಗ ದೇವಿಗೆ ಇಂಥ ಸೀರೆ ನೀಡುವುದಾಗಿ ಬೇಡಿಕೊಂಡಿದ್ದರು. 70 ವರ್ಷಗಳ ನಂತರ, ರೇಷ್ಮೆಯಿಂದ ತಯಾರಿಸಿದ ಚಿನ್ನದ ಝರಿಗಳನ್ನು ಒಳಗೊಂಡ ಸೀರೆಯನ್ನು ದೇವಿಗೆ ಅರ್ಪಿಸಿ ಭಕ್ತಿ ಮೆರೆದರು.
ಸಕಲ ಜೀವರಾಶಿಗೆ ಒಳಿತಾಗಲೆಂದು ಪ್ರಾರ್ಥಿಸಿದರು. ನಂತರ ದೇವಿಗೆ ಉಡಿ ತುಂಬಿ ಹರಕೆ ತೀರಿಸಿದರು. ಶುಕ್ರವಾರ ಬೆಳಿಗ್ಗೆ ಮಡಿಭಜನೆ, ಧಾರ್ಮಿಕ ಸಭೆ ನೆರವೇರಿದವು.ರಾಯಚೂರು, ವಿಜಯಪುರ, ಬಳ್ಳಾರಿ ಜಿಲ್ಲೆಗಳಿಂದ ಬಂದಿದ್ದ ಕಲಾವಿದರು ಭಜನೆ ಪ್ರಸ್ತುತಪಡಿಸಿದರು.