ಬೆಳಗಾವಿ : ಪಕ್ಷದ ಬಹಳಷ್ಟು ನಾಯಕರಿಗೆ ಈ ಜಾತಿ ಗಣತಿಯ ಬಗ್ಗೆ ಅಸಮಾಧಾನ ಇದೆ. ಹಾಗಾಗಿ, ಸರ್ಕಾರ ಒಂದು ವಾರ ವಿಶೇಷ ಸದನ ಕರೆಯಬೇಕು. ಈ ವರದಿ ಎಷ್ಟು ವೈಜ್ಞಾನಿಕವಾಗಿದೆ..? ಅವೈಜ್ಞಾನಿಕವಾಗಿದೆ ಎಂಬುದರ ಕುರಿತು ಚರ್ಚೆ ಮಾಡೋಣ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ ಆಗ್ರಹಿಸಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿ ಗಣತಿ ವರದಿ ಬಿಡುಗಡೆ ಕುರಿತು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದರ ಅಂಕಿ ಅಂಶಗಳನ್ನು ಮಂತ್ರಿಗಳಿಗೆ ಕೊಡಲಾಗುತ್ತದೆ. ನಂತರ ಇದನ್ನು ಜಾರಿಗೊಳಿಸುವ ಕುರಿತು ನಿರ್ಧರಿಸುತ್ತೇವೆ ಎಂದು ಸಿಎಂ ಮತ್ತು ಡಿಸಿಎಂ ಹೇಳಿದ್ದಾರೆ. 2013 -14ರಲ್ಲಿ ಈ ಜಾತಿಗಣತಿ ಸಮೀಕ್ಷೆ ಆಗಿದೆ. ಲಕ್ಷಾಂತರ ಮನೆಗಳಿಗೆ ಹೋಗಿಲ್ಲ. ನನ್ನ ಮನೆಗೂ ಬಂದಿಲ್ಲ. ಇದು ಎಷ್ಟರ ಮಟ್ಟಿಗೆ ವೈಜ್ಞಾನಿಕ ಸಮೀಕ್ಷೆ ಅಂತ ಪರಿಗಣಿಸುವುದು..? ಲಕ್ಷಾಂತರ ಸಣ್ಣ ಸಣ್ಣ ಸಮುದಾಯಗಳು ಅನ್ಯಾಯಕ್ಕೊಳಗಾಗಿವೆ. ಆದ್ದರಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಆಧಾರದ ಮೇಲೆ ಸಮೀಕ್ಷೆ ನಡೆಸಬೇಕು. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದೂಳಿದ ಆ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಆರ್ಥಿಕ ತಜ್ಞ, ಅನುಭವಿ ರಾಜಕಾರಣಿ, ನಾನು 2ನೇ ದೇವರಾಜ್ ಅರಸ್ ಅಂತ ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು 1 ಲೀಟರ್ ಹಾಲಿಗೆ 9 ರೂ ಹಾಲಿನ ದರ ಏರಿಸಿದ್ದಾರೆ. ಇಡೀ ದೇಶದಲ್ಲಿ ಇಷ್ಟೊಂದು ಹಾಲಿನ ದರ ಏರಿಸಿದ ರಾಜ್ಯ ಕರ್ನಾಟಕ.ರಾಜ್ಯದಲ್ಲಿ ಬೆಲೆ ಏರಿಕೆಯ ಸಾಕಷ್ಟು ದಾಳಿಯೇ ನಡೆಯುತ್ತಿದೆ. ಮೂರು ಬಾರಿ ಹಾಲಿದ ದರ ಏರಿಕೆ ಮಾಡಲಾಗಿದೆ. ಏರಿಸಿರುವ 4 ರೂ. ರೈತರಿಗೆ ಕೊಡುತ್ತೆವೆ ಎಂದು ಹೇಳಿ ಒಂದು ಪೈಸೆ ಕೂಡ ಕೊಟ್ಟಿಲ್ಲ ಎಂದು ಆರೋಪಿಸಿದರು.
ಅದೇ ರೀತಿ ಹಾಲಿನ ಉಪ ಉತ್ಪನ್ನಗಳ ಬೆಲೆಯೂ ಸಹ ಜಾಸ್ತಿಯಾಗಿದೆ. ಕರ್ನಾಟಕದಲ್ಲಿ ಕಸದ ಮೇಲು ಸಹ ಟ್ಯಾಕ್ಸ್ ಹಾಕಲಾಗುತ್ತಿದೆ. ನೀರಿನ ಮೇಲೂ ಟ್ಯಾಕ್ಸ್ ಹಾಕಲಾಗುತ್ತಿದೆ. ತೆರಿಗೆ ಹಾಗೂ ಬೆಲೆ ಏರಿಕೆಯ ದಾಳಿ ಕರ್ನಾಟಕದಲ್ಲಿ ನಡೆಯುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಜನರ ಮನೆಯ ತೆರಿಗೆಯ ಲೂಟಿ ಆಗುತ್ತಿದೆ. ಸಾರಾಯಿ 60 ಎಮ್ ಎಲ್ ಬೆಲೆ ಡಬಲ್ ಆಗಿದೆ. 42 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಟಾರ್ಗೆಟ್ ಇಡಲಾಗಿದೆ. ಬಸ್ ಪ್ರಯಾಣ, ಮುದ್ರಾಂಕ ಶುಲ್ಕ ಸೇರಿದಂತೆ 48 ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿದ್ದಾರೆ. 20 ರೂ. ಸ್ಟಾಂಪ್ ಡ್ಯೂಟಿ 100 ರೂ ಹೆಚ್ಚಳ ಮಾಡಿದ್ದಾರೆ. ಇದನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ ಎಂದು ವಿವರಿಸಿದರು.
11,400 ಕೋಟಿ ರೂ. ಎಸ್ ಸಿ, ಎಸ್ ಟಿ ಹಣವನ್ನು ತೆಗೆಯಲಾಗಿದೆ. ಸುಮಾರು 38 ಸಾವಿರ ಕೋಟಿ ರೂ. ಸರ್ಕಾರ ತೆಗೆದುಕೊಂಡಿದೆ. ಅವರ ಅಭಿವೃದ್ದಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗುತ್ತಿದೆ. ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ ಹಣವನ್ನು ಲೂಟಿ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರ ತುಷ್ಟಿಕರಣ ರಾಜ್ಯದಲ್ಲಿ ನಡೆಯುತ್ತಿದೆ. ವಿದೇಶಕ್ಕೆ ಓದಲು ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ 30 ಲಕ್ಷ ಹಣ ಕೊಡಲಾಗುತ್ತಿದೆ. ಹಿಂದೂಗಳಲ್ಲಿ ಬಡ ವಿದ್ಯಾರ್ಥಿಗಳಿಲ್ಲವೇ ಎಂದು ಎನ್.ರವಿಕುಮಾರ ಪ್ರಶ್ನಿಸಿದರು.
ಏ.16ಕ್ಕೆ ಬೆಳಗಾವಿಯಲ್ಲಿ ಜನಾಕ್ರೋಶ ಯಾತ್ರೆ: ಮಸೀದಿಗಳಿಗೆ ಮದರಸಾಗಳಿಗೆ ಹಣವನ್ನು ನೀಡಲಾಗುತ್ತಿದೆ. ಅಲ್ಲಾ ಹು ಅಕ್ಬರ್ ಎಂದು ಪೂಜೆ ಮಾಡುವ ಇಮಾಮಿಗಳಿಗೆ 6 ಸಾವಿರ ರೂ. ಕೊಡಲಾಗುತ್ತಿದೆ. ನಮ್ಮ ಪೂಜಾರಿಗಳಿಗೆ ಒಂದು ರೂ. ಕೊಡುತ್ತಿಲ್ಲ. ಮುಸ್ಲಿಂ ನವದಂಪತಿಗಳಿಗೆ 50 ಸಾವಿರ ರೂ. ಕೊಡುತ್ತಿದ್ದಾರೆ. ಇವರ ಅಲ್ಪಸಂಖ್ಯಾತರ ತುಷ್ಟಿಕರಣ ಅಸಹ್ಯ ಹುಟ್ಟಿಸುತ್ತಿದೆ. ಇದನ್ನೆಲ್ಲ ಖಂಡಿಸಿ ಎರಡನೇ ಹಂತದ ಜನಾಕ್ರೋಶ ಯಾತ್ರೆ ಬೆಳಗಾವಿಯಿಂದ ಪ್ರಾರಂಭ ಆಗುತ್ತದೆ. ಇದೇ 16ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಬೆಳಗಾವಿಯಲ್ಲಿ ಯಾತ್ರೆ ಮುಗಿದ ಬಳಿಕ ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರದಲ್ಲಿ ಯಾತ್ರೆ ಆರಂಭವಾಗಲಿದೆ ಎಂದು ಎನ್.ರವಿಕುಮಾರ ಹೇಳಿದರು.
ಎರಡನೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಈ ಸರ್ಕಾರ ಬಂದ ಮೇಲೆ ಮಟ್ಕಾ ದಂಧೆ ಜೋರಾಗಿದೆ. ಬೆಳಗಾವಿಯಲ್ಲಿ ಪೆಟ್ರೋಲ್, ಮರಳು ದಂಧೆ ಜೋರಾಗಿಯೇ ನಡೆಯುತ್ತಿದೆ. ಪೊಲೀಸರಿಗೆ ಇದು ಗೊತ್ತದ್ದು ಸುಮ್ಮನಿದ್ದಾರಾ ಎಂದು ಪ್ರಶ್ನಿಸಿದ ಎನ್.ರವಿಕುಮಾರ, ಪೆಟ್ರೋಲ್, ಡಿಸೇಲ್ ಅರ್ಧ ಬೆಲೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಕಣ್ಣಿದ್ದು ಕುರುಡಾಗಿ, ಬುದ್ದಿ ಇದ್ದು ಭ್ರಮಣೆಯಾದಂತಿದೆ. ಬಸವರಾಜ್ ರಾಯರೆಡ್ಡಿ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ರಾಜ್ಯ ಆಗಿದೆ ಅಂತ ಹೇಳಿದ್ದಾರೆ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಕೇಂದ್ರ ಸರ್ಕಾರದಿಂದ ಗ್ಯಾಸ್ ಬೆಲೆ 50 ರೂ. ಹೆಚ್ಚಳ, ಪೆಟ್ರೋಲ್ ಡಿಸೇಲ್ ದರ ಹೆಚ್ಚಳ ವಿಚಾರಕ್ಕೆ ಅದು ಕಂಪನಿಗಳ ಮೇಲೆ ಮಾತ್ರ ಹೊರೆಯಾಗಿದೆ. ಜನರ ಮೇಲೆ ಹೊರೆಯಾಗಿಲ್ಲ. ಗ್ಯಾಸ್ ಬೆಲೆ 1003 ರೂ ಇತ್ತು.ಅದನ್ನು 800 ರೂ ಗೆ ಕಡಿಮೆ ಮಾಡಲಾಗಿದೆ. ಸದ್ಯ 50 ರೂ. ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರದ ಬೆಲೆ ಏರಿಕೆಯನ್ನು ರವಿಕುಮಾರ್ ಸಮರ್ಥಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ ಸೇರಿ ಮತ್ತಿತರರು ಇದ್ದರು.