ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕಿನಲ್ಲಿ ಮಲಪ್ರಭಾ, ಮಹದಾಯಿ ಮತ್ತು ಪಾಂಡರಿ ನದಿಗಳು ಸೇರಿದಂತೆ ಇಲ್ಲಿನ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಇದರ ಪರಿಣಾಮ ಕಾಡಂಚಿನ 15ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಹೌದು, ಪಶ್ಚಿಮಘಟ್ಟದಲ್ಲಿ ಕಳೆದ 34 ಗಂಟೆಗಳಿಂದ ನಿರಂತರವಾಗಿ ಮಳೆ ಆಗುತ್ತಿದೆ. ವರುಣರಾಯನ ಆರ್ಭಟಕ್ಕೆ ಅವಾಂತರ ಸೃಷ್ಟಿಯಾಗಿದೆ. ಖಾನಾಪುರ-ಗೋವಾ ರಾಜ್ಯ ಹೆದ್ದಾರಿಯ ಮಂತುರ್ಗಾ ಬಳಿ ಸೇತುವೆ ಮೇಲೆ ಹಾಲಾತ್ರಿ ಹಳ್ಳ ತುಂಬಿ ಹರಿಯುತ್ತಿದೆ. ಸೇತುವೆ ಜಲಾವೃತವಾದ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಬೆಳಗಾವಿ-ಚೋರ್ಲಾ, ಜಾಂಬೋಟಿ-ಜತ್ತ, ಸಿಂಧನೂರು-ಹೆಮ್ಮಡಗಾ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದೆ. ನೀರು ಕಡಿಮೆ ಆಗುವವರೆಗೆ ಈ ಮಾರ್ಗಗಳಲ್ಲಿ ಸಂಚರಿಸದಂತೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ.
ಇನ್ನು ಕುಸಮಳ್ಳಿ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ಇಲ್ಲಿಯೇ ಪಕ್ಕದಲ್ಲಿ ತಾತ್ಕಾಲಿಕ ಸರ್ವೀಸ್ ರಸ್ತೆ ನಿರ್ಮಿಸಲಾಗಿತ್ತು. ಅದು ಕುಸಿದಿದ್ದರಿಂದ ಗೋವಾಗೆ ಸಂಪರ್ಕಿಸುವ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಳಿಕ ಬೆಳಗಾವಿಯಿಂದ ಗೋವಾ ಕಡೆಗೆ ಸಾಗುವ ವಾಹನಗಳಿಗೆ ಬೈಲೂರು, ಹಬ್ಬನಾಟ್ಟಿ ಮಾರ್ಗವಾಗಿ ಅವಕಾಶ ಕಲ್ಪಿಸಲಾಗಿತ್ತು. ಈಗ ಮಾರ್ಗದ ಮೇಲೂ ನೀರು ಬಂದಿದೆ. ಹಾಗಾಗಿ, ಗೋವಾಗೆ ಹೋಗಲು ರಾಮನಗರ ಮೂಲಕ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಮಲಪ್ರಭಾ, ಪಾಂಡು, ಮಹದಾಯಿ ನದಿಗಳು ಹಾಗೂ ಕೋಟ್ನಿ, ಹಾಲಾತ್ರಿ, ಮಂಗೇತ್ರಿ, ಕುಂಬಾರ, ತಟ್ಟಿ, ಪಣಸೂರಿ, ಬೈಲ್, ಕಳಸಾ ಹಾಗೂ ಬಂಡೂರಿ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಹಾಗಾಗಿ, ನೆರಸೆ, ಮಂತುರ್ಗಾ, ಅಶೋಕನಗರ, ಗವಳಿವಾಡ, ಹೆಮ್ಮಗಡಾ ಸೇರಿ 15ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಕಾಡಂಚಿನ ಗ್ರಾಮಗಳ ಜನರು ಪ್ರತಿವರ್ಷದಂತೆ ಈ ಬಾರಿಯೂ ಸಂಕಷ್ಟ ಅನುಭವಿಸುವಂತಾಗಿದೆ.
ಅದೇ ರೀತಿ ಮಲಪ್ರಭಾ ನದಿಗೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದಲ್ಲಿರುವ ಮಾರುತಿ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಮಲಪ್ರಭಾ ನದಿ ತಟದಲ್ಲೆ ಈ ದೇವಸ್ಥಾನವಿದೆ. ಕಳೆದ ಒಂದು ವಾರದ ಹಿಂದೆ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿತ್ತು. ಈಗ ದೇವಸ್ಥಾನದ ಮೇಲ್ಭಾಗ ಅಷ್ಟೇ ಕಾಣಿಸುತ್ತಿದೆ. ಇನ್ನು ಖಾನಾಪೂರ ತಾಲೂಕಿನ ಚಿಕ್ಕಹಟ್ಟಿಹೊಳಿ ಸೇತುವೆ ಮೇಲೆ ಮಲಪ್ರಭಾ ನದಿ ಹರಿಯುತ್ತಿದೆ.
ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದಲ್ಲೂ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಇಂದು ಶಾಲಾ-ಕಾಲೇಜುಗಳಿಗೆ ರಜೆ ಇದ್ದು, ನಾಳೆಯೂ ಇದೇ ರೀತಿ ಮಳೆ ಮುಂದುವರಿದರೆ ರಜೆ ಮುಂದುವರಿಯುವ ಸಾಧ್ಯತೆಯಿದೆ.