ಬೆಳಗಾವಿ: ಮಲ ತಂದೆ ಮತ್ತು ಆತನ ಸ್ನೇಹಿತರು ಸೇರಿಕೊಂಡು ಮೂರು ವರ್ಷದ ಮಗುವನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಸವದತ್ತಿ ತಾಲ್ಲೂಕಿನ ಹಾರೂಗೊಪ್ಪ ಗ್ರಾಮದ ಬಳಿ ನಿನ್ನೆ ರಾತ್ರಿ ನಡೆದಿದೆ.
ಬಿಹಾರ ಮೂಲದ ಕಾರ್ತಿಕ ಮುಖೇಶ ಮಾಂಜಿ(3) ಕೊಲೆಯಾದ ಬಾಲಕ. ಆತನ ಮಲೆ ತಂದೆ ಮಹೇಶ್ವರ ಮಾಂಜಿ ಕೊಲೆಗೈದ ಆರೋಪಿ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಮುರಗೋಡ ಸಿಪಿಐ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಇದು ತುಂಬಾ ದುರ್ದೈವದ ಮತ್ತು ಹೃದಯವಿದ್ರಾವಕ ಘಟನೆ. ಮೂರು ವರ್ಷದ ಮಗುವನ್ನು ಮಲ ತಂದೆ ಮತ್ತು ಆತನ ಸಂಗಡಿಗರು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಮಗುವಿನ ತಾಯಿ ರಂಗೀಲಾ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಕೊಲೆಯಾದ ಬಾಲಕನ ಮಲ ತಂದೆ ಮಹೇಶ್ವರ ಮಾಂಜಿ ಮತ್ತು ಆತನ ಸ್ನೇಹಿತರಾದ ರಾಕೇಶ ಮಾಂಜಿ, ಶಿವನಾಥ ಮಾಂಜಿ, ಮಹೇಶ ಮಾಂಜಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದೇವೆ ಎಂದರು.
ಆರೋಪಿ ಮಹೇಶ ಮಾಂಜಿ ಜೊತೆಗೆ ರಂಗೀಲಾ ಮೊದಲ ಗಂಡನ ಬಿಟ್ಟು ಎರಡನೇ ಮದುವೆ ಆಗಿರುತ್ತಾಳೆ. ಬಿಹಾರ ಮೂಲದ ಕಾರ್ಮಿಕರು ಹಾರೂಗೊಪ್ಪ ಬಳಿ ಇರುವ ಜಿನ್ನಿಂಗ್ ಮಿಲ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇವರು ಮಿಲ್ ಸಮೀಪದ ಶೆಡ್ ನಲ್ಲೆ ಇರುತ್ತಾರೆ. ಹೀಗೆ ಇರುವಾಗ ನಿನ್ನೆ ರಂಗೀಲಾ ಜೊತೆಗೆ ಮಹೇಶ್ವರ ಜಗಳ ತೆಗೆದಿದ್ದಾನೆ. ಆ ಮಗುವನ್ನು ನೀನು ಯಾಕೆ ಕರೆದುಕೊಂಡು ಬಂದೆ ಎಂದು ಹಲ್ಲೆ ಮಾಡಲು ಯತ್ನಿಸುತ್ತಾನೆ. ಅದೇ ಸಮಯದಲ್ಲಿ ಆತನ ಮೂವರು ಸ್ನೇಹಿತರು ಬರುತ್ತಾರೆ. ಆ ಮಗುವನ್ನು ಕರೆದುಕೊಂಡು ಬರಬೇಡ ಅಂತಾ ಹೇಳಿದರೂ ಕರೆದುಕೊಂಡು ಬಂದಿದ್ದಾಳೆ. ಹಾಗಾಗಿ, ಈಕೆಗೆ ಪಾಠ ಕಲಿಸಬೇಕು ಅಂತಾ ಮಹೇಶ ಆತನ ಸ್ನೇಹಿತರಿಗೆ ಹೇಳುತ್ತಾನೆ. ಬಳಿಕ ಎಲ್ಲರೂ ಕೂಡಿಕೊಂಡು ಆಕೆಯ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಆಗ ಭಯದಿಂದ ರಂಗೀಲಾ ಅಲ್ಲಿಂದ ಓಡಿ ಹೋಗುತ್ತಾಳೆ. ಆದರೆ, ಆ ಮಗು ಅಲ್ಲಿಯೇ ಇರುತ್ತದೆ ಎಂದರು.
ವೇಳೆ ಮಗುವಿನ ತಲೆಗೆ ಕಟ್ಟಿಗೆಯಿಂದ ಅವರೆಲ್ಲಾ ಹೊಡೆಯುತ್ತಾರೆ. ಒಲೆಯಲ್ಲಿದ್ದ ಕಟ್ಟಿಗೆಯಿಂದ ಆ ಮಗುವಿನ ಹಣೆ, ತಲೆ, ತೊಡೆ, ಎದೆ ಭಾಗದಲ್ಲಿ ಇಟ್ಟು ಸುಡುತ್ತಾರೆ. ಗಂಭೀರವಾಗಿ ಹಲ್ಲೆಗೊಳಗಾದ ಆ ಮಗು ಸ್ಥಳದಲ್ಲೆ ಸಾವನ್ನಪ್ಪುತ್ತದೆ. ಸ್ವಲ್ಪ ಹೊತ್ತು ಬಿಟ್ಟ ಮೇಲೆ ರಂಗೀಲಾ ಮನೆಗೆ ಬಂದು ನೋಡಿದಾಗ ಮಗು ಕೊನೆಯುಸಿರೆಳೆದಿತ್ತು. ಸ್ಥಳೀಯರೊಂದಿಗೆ ಮುರುಗೋಡ ಪೊಲೀಸ್ ಠಾಣೆಗೆ ರಂಗೀಲಾ ಆಗಮಿಸಿ ದೂರು ನೀಡಿದ್ದಾರೆ ಎಂದು ಡಾ.ಭೀಮಾಶಂಕರ ಗುಳೇದ ತಿಳಿಸಿದರು.