Thursday, June 19, 2025
Google search engine
Homeಜಿಲ್ಲಾಆರತಿ ಬೆಳಗಿ, ಸಿಹಿ ತಿನ್ನಿಸಿ ಹೆಮ್ಮೆಯಿಂದ ದೇಶ ಸೇವೆಗೆ ಕಳುಹಿಸಿ ಕೊಟ್ಟ ತಾಯಿ
spot_img

ಆರತಿ ಬೆಳಗಿ, ಸಿಹಿ ತಿನ್ನಿಸಿ ಹೆಮ್ಮೆಯಿಂದ ದೇಶ ಸೇವೆಗೆ ಕಳುಹಿಸಿ ಕೊಟ್ಟ ತಾಯಿ

ಬೆಳಗಾವಿ: ಪತಿ ಗ್ರಾಮದಲ್ಲಿ ನೀರು ಪೂರೈಕೆ ಕಾಯಕ ಮಾಡಿದರೆ, ಪತ್ನಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ. ಈ ದಂಪತಿ  ಪುತ್ರ ಭಾರತೀಯ ಸೇನೆಗೆ ಸೇರ್ಪಡೆಯಾಗಿ ಒಂದು ವರ್ಷ ಆಗಿದೆ. ರಜಾ ದಿನಗಳನ್ನು ಹೆತ್ತವರು, ಸಹೋದರಿಯರ ಜೊತೆಗೆ ಕಳೆಯಲು ಬಂದಿದ್ದ ಯೋಧನಿಗೆ ಸೇನಾ ಅಧಿಕಾರಿಗಳಿಂದ ಬುಲಾವ್ ಬಂದ ಹಿನ್ನೆಲೆಯಲ್ಲಿ ರಜೆ ಮೊಟಕುಗೊಳಿಸಿದ್ದು, ಮನೆಯವರೆಲ್ಲಾ ಆರತಿ ಬೆಳಗಿ, ಸಿಹಿ ತಿನ್ನಿಸಿ ಜಯಶಾಲಿ ಆಗಿ ಬಾ ಮಗನೇ ಎಂದು ಬೀಳ್ಕೊಟ್ಟಿದ್ದಾರೆ.

ಹೌದು, ಬೈಲಹೊಂಗಲ ತಾಲ್ಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ 21 ವರ್ಷದ ಯೋಧ ಬಸವಂತಪ್ಪ ರುದ್ರಪ್ಪ ಕಲ್ಲಿ ಭಾನುವಾರ ರಾತ್ರಿ ರಾಜಸ್ಥಾನದ ಜೈಸಲ್ಮೇರ್ ಕಡೆ ಪ್ರಯಾಣ ಬೆಳೆಸಿದರು. ಬಸವಂತಪ್ಪ ಸೇನಾ ವಾಹನದ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಸವಂತಪ್ಪ ತಂದೆ ರುದ್ರಪ್ಪ ಒಕ್ಕುಂದ ಗ್ರಾಮ ಪಂಚಾಯತಿಯಲ್ಲಿ ನೀರು ಪೂರೈಕೆ ಕೆಲಸ ಮಾಡುತ್ತಿದ್ದರೆ, ತಾಯಿ ನಿರ್ಮಲಾ ಅದೇ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಗಿದ್ದಾರೆ. ಈ ದಂಪತಿಗೆ ಒಬ್ಬನೆ ಗಂಡು ಮಗ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತಮಗೆ ಒಬ್ಬನೇ ಗಂಡು ಮಗನಿದ್ದರೂ ಕೂಡ ಸೈನ್ಯಕ್ಕೆ ಕಳಿಸುವ ಮೂಲಕ ಈ ದಂಪತಿ ದೇಶಾಭಿಮಾನ ಮೆರೆದಿರುವುದು ವಿಶೇಷ.

ಭಾನುವಾರ ರಾತ್ರಿ ಮನೆಯಲ್ಲಿ ಮಗನಿಗೆ ಆರತಿ ಬೆಳಗಿ, ಸಿಹಿ ತಿನ್ನಿಸಿದ ಬಸವಂತಪ್ಪ ತಂದೆ, ತಾಯಿ, ಅಜ್ಜಿ ಮತ್ತು ಸಹೋದರಿಯರು ಸಂತಸದಿಂದ ಕಳಿಸಿ ಕೊಟ್ಟರು.

ಇದೇ ವೇಳೆ ಮಾತನಾಡಿದ ಯೋಧ ಬಸವಂತಪ್ಪ ಕಲ್ಲಿ, ಚಿಕ್ಕ ವಯಸ್ಸಿನಿಂದ ಸೇನೆಗೆ ಸೇರಬೇಕು ಎಂಬುದು ನನ್ನ ಆಸೆ ಆಗಿತ್ತು. ಕಠಿಣ ಅಭ್ಯಾಸ ಮಾಡಿ ಭರ್ತಿ ಆಗಿದ್ದೇನೆ. ಈಗ ರಜೆ ಮೇಲೆ ಊರಿಗೆ ಬಂದಿದ್ದೆ. ಸೇನಾ ಅಧಿಕಾರಿಗಳು ಕರೆ ಮಾಡಿ ಯುದ್ಧದ ವಾತಾವರಣ ಸೃಷ್ಟಿಯಾಗಿದ್ದು, ತಕ್ಷಣ ಕರ್ತವ್ಯಕ್ಕೆ ಮರಳುವಂತೆ ಸೂಚಿಸಿದರು. ಹಾಗಾಗಿ, ರಜೆ ಅರ್ಧಕ್ಕೆ ಮೊಟಕುಗೊಳಿಸಿ ಹೋಗುತ್ತಿದ್ದೇನೆ ಎಂದರು.

ಅಪ್ಪ, ಅವ್ವ, ಅಜ್ಜಿ ಧೈರ್ಯದಿಂದ ಕೆಲಸಕ್ಕೆ ಹೋಗು. ನಿನಗೆ ವಹಿಸಿದ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸು. ಮನೆತನ, ಊರು ಮತ್ತು ದೇಶಕ್ಕೆ ಕೀರ್ತಿ ತೆಗೆದುಕೊಂಡು ಬರುವಂತೆ ಹಾರೈಸಿ, ಆಶೀರ್ವದಿಸಿದರು ಎಂದಿದ್ದಾರೆ. ನನಗೆ ಇದು ಮೊದಲ ಯುದ್ಧದ ಅನುಭವ. ನನಗೂ ತುಂಬಾ ಕುತೂಹಲ ಇದೆ. ನಮ್ಮ ಅಮಾಯಕ ಜನರನ್ನು ಹತ್ಯೆ ಮಾಡಿರುವ ಉಗ್ರರನ್ನು ಅವರದೇ ನಾಡಿಗೆ ಹೋಗಿ ನಾವು ಸಂಹಾರ ಮಾಡುತ್ತೇವೆ ಎಂದು ಬಸವಂತ ಎಚ್ಚರಿಸಿದರು.

ಸ್ವಲ್ಪ ದುಃಖವೂ ಇದೆ. ಆದರೂ ಗಟ್ಟಿ ಧೈರ್ಯ ಮಾಡಿ ಮಗನನ್ನು ಖುಷಿಯಿಂದ ಕಳಿಸುತ್ತಿದ್ದೇವೆ. ಮೇಲಧಿಕಾರಿಗಳು ಹೇಳಿದ ಕೆಲಸ ಒಳ್ಳೆಯ ರೀತಿ ಮಾಡಿ, ಯುದ್ಧದಲ್ಲಿ ಗೆದ್ದು ಬರುವಂತೆ ಆಶೀರ್ವದಿಸಿದ್ದೇವೆ. ನಮಗೆ ಒಬ್ಬನೆ ಗಂಡು ಮಗನಿದ್ದರೂ ಅವನ ಆಸೆಯಂತೆ ದೇಶ ಸೇವೆ ಮಾಡಲು ಸೈನ್ಯಕ್ಕೆ ಕಳಿಸಿದ್ದೇವೆ ಎನ್ನುತ್ತಾರೆ ಬಸವಂತಪ್ಪ ತಾಯಿ ಗ್ರಾ.ಪಂ. ಅಧ್ಯಕ್ಷೆ ನಿರ್ಮಲಾ ಕಲ್ಲಿ.

ಸಹೋದರಿ ನಾಗರತ್ನಾ ಮಾತನಾಡಿ, ಪಾಕಿಸ್ತಾನಿ ಉಗ್ರರು ನಮ್ಮ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿ ಹಾಕಿದ್ದರು. ಅದಕ್ಕೆ ತಕ್ಕ ಉತ್ತರ ನೀಡಬೇಕಿದೆ. ಹಾಗಾಗಿ, ನಮ್ಮ ಭಾರತೀಯ ಸೇನೆ ಜಯಶಾಲಿ ಆಗಬೇಕೆಂದು ನಮ್ಮ ಅಣ್ಣನನ್ನು ಖುಷಿಯಿಂದ ಕಳಿಸುತ್ತಿದ್ದೇವೆ ಎಂದರು.

ಒಬ್ಬನೆ ಗಂಡು ಮಗನಿರುವ ತಂದೆ-ತಾಯಿ ಬಹುತೇಕರು ಮಗ ನಮ್ಮ ಕಣ್ಮುಂದೆ ಇರಲಿ ಎಂದು ಬಯಸುತ್ತಾರೆ. ಆದರೆ, ಈ ದಂಪತಿ ಮಗ ರಾಷ್ಟ್ರಸೇವೆ ಮಾಡಲಿ ಎಂದು ಭಾರತೀಯ ಸೇನೆಗೆ ಸೇರಿಸಿರುವುದು ಶ್ಲಾಘನೀಯ. ಈಗ ಪಾಕಿಸ್ತಾನದ ವಿರುದ್ಧ ಯುದ್ಧ ಸೃಷ್ಟಿಯಾಗಿದ್ದರಿಂದ ರಜೆ ಮೊಟಕುಗೊಳಿಸಿ ಸೈನಿಕ ಕರ್ತವ್ಯಕ್ಕೆ ಮರಳುತ್ತಿದ್ದಾನೆ. ಆತನನ್ನು ಕುಟುಂಬಸ್ಥರು ಮತ್ತು ನಾವೆಲ್ಲಾ ಗ್ರಾಮಸ್ಥರು ಸೇರಿಕೊಂಡು ಪ್ರೀತಿಯಿಂದ ಕಳಿಸಿ ಕೊಡುತ್ತಿದ್ದೇವೆ ಎಂದು ಗ್ರಾಮಸ್ಥ ಮಡಿವಾಳಪ್ಪ ತಡಸಲ್ ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!