ಬೆಳಗಾವಿ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮೇ 1 ರಿಂದ ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ “ದುಡಿಯೋಣ ಬಾ… ಅಭಿಯಾನ” ಹಮ್ಮಿಕೊಳ್ಳಲಾಗಿದ್ದು, ಅರ್ಹ ಕೂಲಿಕಾರರು ಮನರೇಗಾದಡಿ ಉದ್ಯೋಗ ಪಡೆದುಕೊಳ್ಳಬಹುದು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಈ ಅಭಿಯಾನದ ಮೂಲಕ ಅರ್ಹ ಕೂಲಿಕಾರರಿಗೆ ಮನರೇಗಾ ಯೋಜನೆಯ ಕುರಿತು ಮಾಹಿತಿ ನೀಡಲಾಗುತ್ತಿದ್ದು, ನರೇಗಾ ಯೋಜನೆಯಡಿ ಕೂಲಿಕಾರರಿಗೆ 100 ದಿನಗಳ ಅಕುಶಲ ಕೆಲಸವನ್ನು ಒದಗಿಸಲು ದುಡಿಯೋಣ ಬಾ ಅಭಿಯಾನವನ್ನು ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆ.
ಅಭಿಯಾನದ ಉದ್ದೇಶಗಳು: ನರೇಗಾ ಯೋಜನೆಯಡಿ ಒಳಗೊಳ್ಳದ ಕುಟುಂಬಗಳನ್ನು ಗುರುತಿಸಿ ಅಕುಶಲ ಕೆಲಸಕ್ಕಾಗಿ ನೊಂದಾಯಿಸುವುದು, ನೊಂದಾಯಿತ ಕೂಲಿಕಾರರಿಗೆ ನಿರಂತರ ಅಕುಶಲ ಕೆಲಸವನ್ನು ಒದಗಿಸಿ ವಲಸೆ ಪ್ರವೃತ್ತಿಯನ್ನು ತಗ್ಗಿಸುವುದು, ದುರ್ಬಲ ವರ್ಗದ ಕುಟುಂಬಗಳು ಹಾಗೂ ವಿಶೇಷ ಚೇತನರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಾಗಿ ಆಯಾ ಗ್ರಾಮ ಪಂಚಾಯತಿ ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಅದೇ ರೀತಿ ಈಗಾಗಲೇ ಮನರೇಗಾ ಯೋಜನೆಯಡಿ ಉದ್ಯೋಗ ಪಡೆದುಕೊಂಡು ಕೆಲಸ ಮಾಡುತ್ತಿರುವ ಎಲ್ಲ ಕೂಲಿಕಾರರಿಗೆ ಮೇ 1 ರಿಂದಲೇ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಶಿಬಿರ ಹಮ್ಮಿಕೊಂಡು ಕೂಲಿಕಾರರ ಆರೋಗ್ಯ ಕಾಪಾಡಿಕೊಳ್ಳಲಾಗುತ್ತಿದೆ. ಕೂಲಿಕಾರರು ಸಕ್ರಿಯವಾಗಿ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು.
ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ನೋಂದಾಯಿತ ಕೂಲಿಕಾರರ ರಜಿಸ್ಟರ್ 1 ರಲ್ಲಿನ ಮಾಹಿತಿಯಂತೆ ಕುಟುಂಬವಾರು ಪರಿಶೀಲಿಸಿ, ಸೇರ್ಪಡೆ ಮಾಡಬೇಕಾದ ಅಥವಾ ಡಿಲೀಟ್ ಮಾಡಬೇಕಾದ ಹೆಸರುಗಳನ್ನು ಅಪಡೇಟ್ ಮಾಡುವ ನಿಟ್ಟಿನಲ್ಲಿ ಮನೆ ಮನೆ ಭೇಟಿ ಮಾಡಿ ಜಾಬ್ ಕಾರ್ಡ್ ಪರಿಶೀಲನೆ ಅಭಿಯಾನ ಕೂಡ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಎಲ್ಲ ಅರ್ಹ ಕೂಲಿಕಾರರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.