ಬೆಳಗಾವಿ: ಐಪಿಎಲ್ ಪ್ಲೇ ಆಫ್ನಲ್ಲಿ ಪಂಜಾಬ್ಗೆ ಸೋಲುಣಿಸಿದ ಆರ್ಸಿಬಿ ತಂಡ ಭರ್ಜರಿಯಾಗಿ ಫೈನಲ್ಗೆ ಪ್ರವೇಶ ಪಡೆದಿದೆ. 18 ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಭಿಮಾನಿಗಳ ಕಪ್ ಗೆಲುವಿನ ಕನಸಿಗೆ ಇನ್ನೊಂದೇ ಮೆಟ್ಟಿಲು ಬಾಕಿ ಇದೆ. ಈ ಬಾರಿ ಕಪ್ ನಮ್ಮದೇ ಎನ್ನುವ ಸಂದೇಶ ಸಾರಲು ಮುಂದಾಗಿರುವ ಬೆಳಗಾವಿಯ ಅಭಿಮಾನಿಯೋರ್ವ “ಆರ್ಸಿಬಿ ಫ್ಯಾನ್ಸ್ ಹಬ್ಬ” ಎಂದು ಘೋಷಿಸಿ ಒಂದು ದಿನ ರಜೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವುದು ಫುಲ್ ವೈರಲ್ ಆಗಿದೆ.
ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ ಎಂಬ ಯುವಕ ಆರ್ಸಿಬಿ ಅಭಿಮಾನಿಯಾಗಿದ್ದು, ಆರ್ಸಿಬಿ ಕಪ್ಪು ಗೆದ್ದ ದಿನ ಪ್ರತಿ ವರ್ಷ ರಜೆ ನೀಡಬೇಕು. ಎಲ್ಲಾ ಜಿಲ್ಲೆಯಲ್ಲೂ ಆಚರಣೆ ಮಾಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಆರ್ಸಿಬಿ ಫೈನಲ್ ತಲಪುತ್ತಿದ್ದಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ವಿಶೇಷ ಮನವಿ ಮಾಡಿದ್ದಾರೆ. ಸದ್ಯ ಅಭಿಮಾನಿಯ ಮನವಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪತ್ರದಲ್ಲಿ ಏನಿದೆ..?ಐಪಿಎಲ್ ಪಂದ್ಯದಲ್ಲಿ ಒಂದು ವೇಳೆ ಆರ್ಸಿಬಿ ತಂಡ ಫೈನಲ್ಗೆ ಹೋಗಿ ಕಪ್ ಗೆದ್ದರೇ ಆ ದಿನ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆ ದಿನವನ್ನು ‘ಕರ್ನಾಟಕ ರಾಜ್ಯ ಆರ್ಸಿಬಿ ಫ್ಯಾನ್ಸ್ ಹಬ್ಬ’ ಅಂತ ಅಧೀಕೃತವಾಗಿ ಘೋಷಿಸಿ ಪ್ರತಿವರ್ಷ ಸರ್ಕಾರ ರಜೆ ನೀಡಬೇಕು. ಏಕೆಂದರೆ ಆರ್ಸಿಬಿ ಫ್ಯಾನ್ಸ್ಗಳ ಬಹುದಿನದ ಕನಸು ನನಸಾಗಲಿದ್ದು, ಕರ್ನಾಟಕ ರಾಜ್ಯೋತ್ಸವನ್ನು ಪ್ರತಿ ಜಿಲ್ಲೆಯಲ್ಲಿ ಯಾವ ರೀತಿ ಆಚರಿಸುತ್ತೇವೋ ಅದೇ ರೀತಿ ಆರ್ಸಿಬಿ ಫ್ಯಾನ್ಸ್ ಹಬ್ಬ ಆಚರಿಸುವುದಕ್ಕೆ ಕರ್ನಾಟಕ ಸರ್ಕಾರ ಅನುವು ಮಾಡಿಕೊಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ.
ಇದನ್ನು ಕರ್ನಾಟಕ ಸರ್ಕಾರ ಗಣನೀಯವಾಗಿ ತೆಗೆದುಕೊಂಡು ರಜೆ ಮತ್ತು ಆರ್ಸಿಬಿ ಫ್ಯಾನ್ಸ್ ಹಬ್ಬ ಆಚರಿಸುವುದಕ್ಕೆ ಪರವಾಣಿಗೆ ಕೊಡಬೇಕೆಂದು ಎಲ್ಲಾ ಆರ್ಸಿಬಿ ಫ್ಯಾನ್ಸ್ ಪರವಾಗಿ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಆರ್ಸಿಬಿ ಅಭಿಮಾನಿಯ ಈ ಪತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.