ಬೆಳಗಾವಿ: ಕೂಲಿಕಾರ್ಮಿಕರು ಕೆಲಸದ ಜೊತೆಗೆ ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಿ.ಎಮ್. ಬನ್ನೂರ ಅವರು ಹೇಳಿದರು.
ತಾಲ್ಲೂಕ ಪಂಚಾಯತ ಬೆಳಗಾವಿ ಹಾಗೂ ಕಾಕತಿ ಗ್ರಾಮ ಪಂಚಾಯತಿ ವತಿಯಿಂದ ಕಾಕತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಲಾ ಹೂಳ ಎತ್ತುವ ಕಾಮಗಾರಿ ನರೇಗಾ ಕಾರ್ಮಿಕರಿಗೆ ಸೋಮವಾರ ಮೇ 5 ರಂದು ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಕಾರ್ಮಿಕರಿಗೆ ಕುಟುಂಬದ ಜವಾಬ್ದಾರಿ ಮತ್ತು ಆರ್ಥಿಕ ತೊಂದರೆ ಇರುವುದರಿಂದ ಆರೋಗ್ಯದ ಕಡೆ ಗಮನಹರಿಸುವುದಿಲ್ಲ ಇದರಿಂದಾಗಿ ತಮ್ಮ ಆರೋಗ್ಯಕ್ಕೆ ತೊಂದರೆಯಾಗಿ ದುಡಿಮೆ ಇಲ್ಲದಂತಾಗಿ ಮತ್ತಷ್ಟು ತೊಂದರೆಗೆ ಒಳಗಾಗುವ ಸಂಭವ ಇರುತ್ತದೆ. ಸಮಯಕ್ಕೆ ಸರಿಯಾಗಿ ಊಟೋಪಚಾರ ಮಾಡಿಕೊಂಡು ಉತ್ತಮ ಆರೋಗ್ಯವಂತರಾಗಿ ಬಾಳಬೇಕು. ಮೇ ತಿಂಗಳಿನಲ್ಲಿ ಬಿಸಿಲು ಹೆಚ್ಚಿಗೆ ಇರುವದರಿಂದ ಹೇಚ್ಚು ನೀರು ಕುಡಿಯಬೇಕು ಜೊತೆ ಹಣ್ಣು ತರಕಾರಿಗಳನ್ನು ಹೆಚ್ಚು ಬಳಸಬೇಕು ಎಂದು ತಿಳಿಸಿದರು.
ಕೂಲಿಕಾರರು ತಮ್ಮ ಜಮೀನಿನಲ್ಲಿ ಕೃಷಿಹೊಂಡ ಕಾಮಗಾರಿ ಅನುಷ್ಠಾನ ಮಾಡಿಕೊಳ್ಳಬಹುದು. ಜತೆಗೆ ಜಾನುವಾರು, ಮೇಕೆಗಳು ಇದ್ದರೆ ದನದದೊಡ್ಡಿ, ಕುರಿದೊಡ್ಡಿ ಸಹ ನಿರ್ಮಿಸಿಕೊಳ್ಳಲು ಈ ಯೋಜನೆಯಲ್ಲಿ ಅವಕಾಶವಿದೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆದುಕೊಳ್ಳಬಹುದು. ಕೂಲಿಕಾರರು ವೈಯಕ್ತಿಕ ಬ್ಯಾಂಕ್ ಖಾತೆ ಹೊಂದಿದ್ದರೆ ಮಾತ್ರ ಸಕಾಲದಲ್ಲಿ ಕೆಲಸ ನೀಡಲು ಮತ್ತು ಕೂಲಿ ಪಾವತಿಸಲು ಸಾಧ್ಯ. ಉದ್ಯೋಗ ಚೀಟಿಯಲ್ಲಿರುವ ಕೂಲಿಕಾರರು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಿಸಬೇಕು ಎಂದರು.
ಈ ವೇಳೆ ನರೇಗಾ ಕೂಲಿಕಾರ್ಮಿಕರಿಗೆ ಆರೋಗ್ಯ ಇಲಾಖೆಯಿಂದ ವಿವಿಧ ತಪಾಸಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ವರ್ಷಾ ಲಕ್ಷ್ಮಣ ಮುಚ್ಚಂಡಿಕರ್, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅರುಣ ನಾಥಬೂವಾ, ಐಇಸಿ ಸಂಯೋಜಕ ರಮೇಶ ಮಾದರ, ಗ್ರಾಮ ಪಂಚಾಯತಿ ಮತ್ತು ವೈಧ್ಯಕೀಯ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು