ಅಥಣಿ : ಭಾರತೀಯ ಪರಂಪರೆಯಲ್ಲಿ ಶರಣರಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಸಪ್ತಸಾಗರ ಗ್ರಾಮದಲ್ಲಿ ಜನಿಸಿ ನಾಡಿನ ಒಳಿತಿಗಾಗಿ ತಮ್ಮ ಬದುಕ್ಕನೇ ಸವೆಸಿದ ಶಿವಬಸವ ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕು ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ಶುಕ್ರವಾರ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಜರುಗಿದ ಶಿವಬಸವ ಗುರುಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿವಬಸವ ಶಿವಯೋಗಿಗಳು ಮಹಾನ್ ಪುರುಷರು. ಬಸವಾದಿ ಶಿವಶರಣರ ಹಾದಿಯಲ್ಲಿ ನಡೆಯುತ್ತಾ ಜನರ ಉದ್ಧಾರಕ್ಕಾಗಿ ದುಡಿದವರು. ಇಂತಹ ಮಹಾನ್ ಪೂಜ್ಯರ ಹುಟ್ಟುರಿನಲ್ಲಿ ಗುರುಮಂದಿರ ಲೋಕಾರ್ಪಣೆಗೊಳ್ಳುತ್ತಿರುವುದು ಸಂತೋಷದ ಕ್ಷಣ ಎಂದರು.
ಕಾರ್ಯಕ್ರಮದ ಅಧ್ಯಕತೆ ವಹಿಸಿ ಶೂರಪಾಲಿಯ ಶರಣೆ ಸುನಂದಮ್ಮ ತಾಯಿಯವರು ಮಹಿಳಾ ಗೋಷ್ಠಿ ಉದ್ದೇಶಿಸಿ ಮಾತನಾಡಿ. ಈ ನಾಡಿನಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನ ನೀಡಲಾಗಿದೆ. ತಾಯಿ ಹೃದಯ ಎಂಬುದು ಯಾವತ್ತೂ ಶ್ರೇಷ್ಠವಾದದ್ದು. ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಸಾಧನೆ ಶಿಖರ ಏರಬಹುದು. ಸ್ವಾಸ್ಥ್ಯ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ತುಂಬಾ ಇದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಅಥಣಿ ಮೋಟಗಿಮಠದ ಪ್ರಭು ಚೆನ್ನಬಸವ ಸ್ವಾಮೀಜಿ, ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮೀಜಿ, ಪರಮಾನಂದವಾಡಿಯ ಡಾ. ಅಭಿನವ ಬ್ರಹ್ಮಾಂನದ ಮಹಾಸ್ವಾಮೀಜಿ ಮಾತನಾಡಿದರು. ಈ ಸಂದರ್ಭದಲ್ಲಿ ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಸೇರಿದಂತೆ ಅಪಾರ ಭಕ್ತರು ಉಪಸ್ಥಿತರಿದ್ದರು.
*ಗಮನಸೆಳೆದ ತೊಟ್ಟಿಲೋತ್ಸವ ಕಾರ್ಯಕ್ರಮ*
ಶಿವಬಸವ ಗುರುಮಂದಿರ ಲೋಕಾರ್ಪಣೆ ಹಿನ್ನಲೆಯಲ್ಲಿ ಐದು ದಿನಗಳವರೆಗೆ ನಡೆಯುತ್ತಿರುವ ಪ್ರವಚನ ಕಾರ್ಯಕ್ರಮದ ಎರಡನೇ ದಿನವಾದ ಶುಕ್ರವಾರ ಗುರುಬಸವ ಶ್ರೀಗಳ ತೊಟ್ಟಿಲೋತ್ಸವ ಕಾರ್ಯಕ್ರಮ ಗಮನಸೆಳೆಯಿತು.
ಗ್ರಾಮದ ಗುರುಮಾತೆಯರು ತೊಟ್ಟಿಲಲ್ಲಿ ಬಾಲ ಶಿವಬಸವ ಶಿವಯೋಗಿಗಳಿಗೆ ಜೋಗುಳ ಹಾಡುವ ಮೂಲಕ ತೊಟ್ಟಿಲು ತೂಗಿದರು. ಈ ಸಂದರ್ಭದಲ್ಲಿ ಶಿವಬಸವ ಗುರುಮಂದಿರಕ್ಕೆ ಭೂದಾನ ಹಾಗೂ ದಾಸೋಹ ಸೇವೆ ಕೈಗೊಂಡ ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು.