ಬೆಳಗಾವಿ: ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆ ಪ್ರಚುರಪಡಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಅನುಭವ ಮಂಟಪ-ಶರಣರ ವೈಭವ ರಥಯಾತ್ರೆ’ಯು ಭಾನುವಾರ ಬೆಳಗಾವಿಗೆ ಆಗಮಿಸಿತು.
ನಗರದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ರಥಯಾತ್ರೆಗೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಬರಮಾಡಿಕೊಂಡರು. ಈ ವೇಳೆ ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿ ಮತ್ತಿತರರು ಇದ್ದರು.
ಅನುಭವ-ಮಂಟಪ ಮಾದರಿ ರಥದಲ್ಲಿ ಜಗಜ್ಯೋತಿ ಬಸವೇಶ್ವರ, ಭಗವಾನ್ ಬುದ್ಧ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಶಿವಶರಣೆ ಅಕ್ಕ ಮಹಾದೇವಿ, ಸಂತ ಶಿಶುನಾಳ ಶರೀಫ, ಗುರುನಾನಕ, ಭಗವಾನ ಮಹಾವೀರ, ನಾರಾಯಣ ಗುರು, ಏಸು ಕ್ರಿಸ್ತರ ಪ್ರತಿಮೆಗಳನ್ನೊಳಗೊಂಡಿದೆ. ಏಪ್ರಿಲ್ 29 ಹಾಗೂ 30ರ ವರೆಗೆ ಕೂಡಲಸಂಗಮದಲ್ಲಿ ಆಯೋಜಿಸಿರುವ ಬಸವ ಜಯಂತಿ ಅಂಗವಾಗಿ ಅನುಭವ ಮಂಟಪ- ಬಸವಾದಿ ಶರಣರ ವೈಭವ ಕಾರ್ಯಕ್ರಮದ ಅಂಗವಾಗಿ ಈ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದೆ. ಬೆಳಗಾವಿಗೆ ಆಗಮಿಸಿದ ಈ ರಥಯಾತ್ರೆಯನ್ನು ಜಿಲ್ಲಾಡಳಿತ ಮತ್ತು ವಿವಿಧ ಬಸವಪರ ಸಂಘಟನೆಗಳು ಸ್ವಾಗತಿಸಿದವು. ಬಳಿಕ ಇಲ್ಲಿಂದ ಮುಂದೆ ಬೀಳ್ಕೊಡಲಾಯಿತು.
ಮಾಧ್ಯಮಗಳ ಜೊತೆಗೆ ಮಾತನಾಡಿದ ಹುಣಶಿಕೊಳ್ಳಮಠದ ಸಿದ್ಧಬಸವದೇವರು, ಸರ್ವ ಧರ್ಮಗಳನ್ನು ಪ್ರತಿಬಿಂಬಿಸುವ ಈ ರಥಯಾತ್ರೆ ಹಮ್ಮಿಕೊಂಡಿರುವ ಸರ್ಕಾರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಈ ಬಾರಿ ಕೂಡಲಸಂಗಮದಲ್ಲಿ ಬಹಳ ಅದ್ಧೂರಿಯಾಗಿ ರಾಜ್ಯ ಸರ್ಕಾರ ಬಸವ ಜಯಂತಿ ಆಚರಿಸುತ್ತಿದೆ. ನಾವೆಲ್ಲರೂ ಅದರಲ್ಲಿ ಭಾಗಿಯಾಗಲಿದ್ದೇವೆ ಎಂದು ಹೇಳಿದರು.
ಈ ವೇಳೆ ಲಿಂಗಾಯತ ಮುಖಂಡರಾದ ಶಂಕರ ಗುಡಸ, ಬಸವರಾಜ ರೊಟ್ಟಿ, ಅಶೋಕ ಬೆಂಡಿಗೇರಿ, ರತ್ನಪ್ರಭಾ ಬೆಲ್ಲದ, ಮಲಗೌಡ ಪಾಟೀಲ, ಈರಣ್ಣ ದೇಯಣ್ಣವರ, ಮುರುಘೇಂದ್ರಗೌಡ ಪಾಟೀಲ ಸೇರಿ ಮತ್ತಿತರರು ಇದ್ದರು.