ಬೆಳಗಾವಿ: ಕರ್ನಲ್ ಸೋಫಿಯಾ ಖುರೇಶಿ ಅವರ ಮಾವನ ಮನೆ ಮೇಲೆ ಆರ್.ಎಸ್.ಎಸ್. ನೇತೃತ್ವದಲ್ಲಿ ದಾಳಿ ಆಗಿದೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಫೋಸ್ಟ್ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ಪ್ರಾಥಮಿಕ ಕೆನಡಾದಿಂದ ಮಾಡಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ
ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಇರುವ ಸೋಫಿಯಾ ಖುರೇಷಿ ಅವರ ಮಾವ ಗೌಸಸಾಬ್ ಬಾಗೇವಾಡಿ ನಿವಾಸದ ಮೇಲೆ ದಾಳಿ ಮಾಡಲಾಗಿದೆ ಎಂದು ಅನೀಸ್ ಉದ್ದೀನ್ ಎಂಬಾತನ ಎಕ್ಸ್ ಖಾತೆಯಿಂದ ಪೋಸ್ಟ್ ಹಾಕಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಡಾ.ಭೀಮಾಶಂಕರ ಗುಳೇದ ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ತಿಳಿಸಿದ್ದಾರೆ. ಇನ್ನು ಸುಳ್ಳು ಸುದ್ದಿ ಹರಡುತ್ತಿದ್ದಂತೆ ಬೆಳಗಾವಿ ಜಿಲ್ಲಾ ಪೊಲೀಸರು ಎಚ್ಚೆತ್ತುಕೊಂಡಿದ್ದು, ಕೊಣ್ಣೂರಿನಲ್ಲಿರುವ ಗೌಸಸಾಬ್ ಬಾಗೇವಾಡಿ ಅವರ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಗೋಕಾಕ ಸಿಪಿಐ ಸುರೇಶ ಆರ್.ಬಿ. ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅನಗತ್ಯ ಸಾರ್ವಜನಿಕರನ್ನು ಭೇಟಿಯಾಗದಂತೆ ಸೋಫಿಯಾ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಮನೆ ಬಳಿಯಲ್ಲಿ ಬೀಗಿ ಭದ್ರತೆ ನಿಯೋಜಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಿದ ಅನೀಸ್ ಉದ್ದೀನ್ ಕೆನಡಾದ ವ್ಯಕ್ತಿ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಜಿಲ್ಲಾ ಸಾಮಾಜಿಕ ಜಾಲತಾಣ ನಿಯಂತ್ರಣ ಅಧಿಕಾರಿಗಳು ಆತನ ಪೋಸ್ಟ್ ಗೆ ಪ್ರತಿಯಾಗಿ ಉತ್ತರ ಕೊಟ್ಟಾಗ ಆ ಪೋಸ್ಟ್ ಡಿಲಿಟ್ ಮಾಡಿದ್ದಾನೆ. ನಾವು ಇದು ಸುಳ್ಳು ಎಂದು ಹೇಳಿದಾಗ ಆತ ಪೋಸ್ಟ್ ಡಿಲಿಟ್ ಮಾಡಿದ್ದಾನೆ. ಈತನ ಬಗ್ಗೆ ಮಾಹಿತಿ ನೀಡುವಂತೆ ಎಕ್ಸ್ ಖಾತೆಗೆ ಕೋರಲಾಗಿದೆ. ಒಂದು ವೇಳೆ ಆತ ಭಾರತದವನಾಗಿದ್ದರೆ ಆತನ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಕರ್ನಲ್ ಸೋಫಿಯಾ ಖುರೇಷಿ ಮತ್ತು ಅವರ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರು ಸೇನೆಯಲ್ಲಿ ಇರುವುದರಿಂದ ಅವರ ಕುಟುಂಬಸ್ಥರಿಗೆ ಸೂಕ್ಷ್ಮತೆ ಬಗ್ಗೆ ಅರಿವಿದೆ. ಆದರೂ ಅವರ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೋಮು ಗಲಭೆ, ಸಮುದಾಯದ ನಡುವೆ ವಿಷ ಬೀಜ ಬಿತ್ತುವ ಕಿಡಿಗೇಡಿಗಳ ಮೇಲೆ ಹದ್ದಿನ ಕಟ್ಟಿದ್ದೇವೆ. ಈ ರೀತಿ ಪೋಸ್ಟ್ ಮಾಡುವ ಎಚ್ಚರಿಕೆ ವಹಿಸುವಂತೆ ಡಾ.ಭೀಮಾಶಂಕರ ಗುಳೇದ ಸೂಚಿಸಿದ್ದಾರೆ.