ಬೆಳಗಾವಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ತೆಗೆದುಕೊಳ್ಳುವ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿದ್ದೇವೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಸೋಮವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಹ ಕೇಂದ್ರ ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಒಮ್ಮತದ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ನಮಗೆ ಮೊದಲು ದೇಶ ಮುಖ್ಯ. ಕೇಂದ್ರ ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಪಾಕಿಸ್ತಾನದವರು ಪ್ರಚೋಧನೆ ಕೊಡುವ ಕೆಲಸ ಮಾಡಿದ್ದು ಖಂಡನೀಯ ಎಂದರು.
ದೇಶದಲ್ಲಿ ಇಂಥ ಘಟನೆಗಳು ಆಗಬಾರದು. ಇಂಥ ಘಟನೆಯಾದಾಗ ಖಂಡಿಸಬೇಕಿತ್ತು. ಇದನ್ನು ಖಂಡಿಸಿರುವ ಕೇಂದ್ರ ಸರಕಾರ ಭಯೋತ್ಪಾದಕರ ಮೇಲೆ ಕ್ರಮ ಜರುಗಿಸಬೇಕು.ಸಿಎಂ ಯುದ್ಧ ಬೇಡ ಎಂಬುದರ ಹೇಳಿಕೆಗೆ ಅವರೇ ನಿನ್ನೆ ಉತ್ತರ ಕೊಟ್ಟಿದ್ದಾರೆ. ಇದರಲ್ಲಿ ರಾಜಕೀಯ ಮಾಡಬಾರದು. ಅದು ಯಾವುದೇ ಪಕ್ಷ ಇರಲಿ ಎಂದರು.
ಕೇಂದ್ರ ಸರಕಾರದ ಬೆಲೆ ಏರಿಕೆಯ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರ ಸರಕಾರ ಎಲ್ಲದರ ಮೇಲೂ ಬೆಲೆ ಏರಿಕೆ ಮಾಡಿದೆ. ಇದರ ಅವಶ್ಯಕತೆ ಏನಿದೆ. ಇದರ ಹಣ ಎಲ್ಲಿ ಹೋಗುತ್ತಿದೆ ಎಂದು ಕಾರಣ ಕೊಡಬೇಕು. ರಾಷ್ಟ್ರದ ಹಿತ ದೃಷ್ಟಿಯಿಂದ ಬೆಲೆ ಏರಿಕೆಯನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ಪಡಿತರಿಗೆ ಜೋಳ ಕೊಡುವ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅಕ್ಕಿ ಹೆಚ್ಚು ಉಪಯೋಗಿಸದ ಪ್ರದೇಶದಲ್ಲಿ ಮೂರು ಕೆ.ಜಿ. ಜೋಳ ಕೊಡುವ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ ಎಂದರು.
ರಾಜ್ಯದಲ್ಲಿ ಬಡವರು ಉಪವಾಸ ಇಲ್ಲದೆ ಇರಬಾರದು ಎಂದು ರಾಜ್ಯ ಸರಕಾರ ನಾನಾ ಯೋಜನೆಯನ್ನು ರೂಪಿಸಿದೆ. ಬಡವರಿಗೆ ದವಸ ಧಾನ್ಯಗಳನ್ನು ನೀಡಬೇಕು ಹಾಗೂ ನರೇಗಾ ಯೋಜನೆಯಲ್ಲಿ ಉದ್ಯೋಗ ಕೊಡಬೇಕು ಎಂಬುದು ನಮ್ಮ ಮುಖ್ಯ ಯೋಜನೆ ಆಗಿದೆ ಎಂದರು.