ಚಿಕ್ಕಬಳ್ಳಾಪುರ: ಹೊಸ ವರ್ಷದ ಉಡುಗೊರೆ ಎಂದು ಚಿಕ್ಕಬಳ್ಳಾಪುರ ಶಾಸಕರು ಪ್ರತಿ ಕ್ವಾರಿ, ಕ್ರಷರ್ಗಳಿಂದ ತಲಾ ₹ 10 ಲಕ್ಷ ಪಡೆದಿದ್ದಾರೆ. ₹12 ಕೋಟಿ ಸಂಗ್ರಹಿಸಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇವರನ್ನು ಬಿಟ್ಟರೆ ಯಾರೂ ನಿಯತ್ತಾಗಿ ಇಲ್ಲ ಎನ್ನುವಂತೆ ಭಾಷಣ ಮಾಡುವರು. ಆದರೆ ಹೇಳುವುದು ಒಂದು ಮಾಡುವುದು ಒಂದು. ಈ ಬಗ್ಗೆ ಕೆಲವು ಗಣಿಗಾರಿಕೆ ನಡೆಸುವವರು ತಿಳಿಸಿದ್ದಾರೆ’ ಎಂದರು.
ಜಿಲ್ಲಾಉಸ್ತುವಾರಿ ಸಚಿವರು ಸತ್ಯಹರಿಶ್ಚಂದ್ರರ ರೀತಿ ಮಾತನಾಡುತ್ತಾರೆ. ಜಿಲ್ಲೆಯಲ್ಲಿ ಏನಾಗುತ್ತಿದೆ ಎನ್ನುವುದು ಅವರಿಗೆ ಗೊತ್ತಿಲ್ಲವೇ? ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ವಿಶೇಷವಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಣವಿಲ್ಲದೆ ಏನೂ ನಡೆಯುವುದಿಲ್ಲ. ಅಧಿಕಾರಿಗಳ ವರ್ಗಾವಣೆಗೂ ಹಣ ಪಡೆಯಲಾಗುತ್ತಿದೆ. ಇದೆಲ್ಲ ಜನರು ನೋಡುತ್ತಿದ್ದಾರೆ ಎಂದರು.
ಗಂಗಾಕಲ್ಯಾಣ ಯೋಜನೆಯ ಒಂದು ಕೊಳವೆ ಬಾವಿ ಕೊರೆಯಲು ₹ 30 ಸಾವಿರ ಕೊಡಿ ಎಂದು ಅಧಿಕಾರಿಗಳು ಫಲಾನುಭವಿಗಳಿಗೆ ಕೇಳುತ್ತಾರಂತೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಹೇಳಿದ್ದೇನೆ ಎಂದರು.