ಬೆಳಗಾವಿ: ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಖಭಂಗ ಬೆಳಗಾವಿ ಮೇಯರ್, ಪಾಲಿಕೆ ಬಿಜೆಪಿ ಸದಸ್ಯನ ಸದಸ್ಯತ್ವ ರದ್ದು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆಯನ್ನು ನೀಡಿದ್ದು, ಸೋಮವಾರಕ್ಕೆ ವಿಚಾರಣೆ ಮುಂದೂಡಲಾಗಿದೆ.
ಸಾಮಾಜೀಕ ಸುಜಿತ್ ಮುಳಗುಂದ್ ಸಲ್ಲಿಸಿದ ದೂರು ನಂತರ, ಪ್ರಾದೇಶಿಕ ಆಯುಕ್ತ ಸಂಜೀವ ಶೆಟ್ಟೆನವರ್ ಅವರು ವಿಚಾರಣೆ ನಡೆಸಿ ಮಹಾಪೌರ ಮಂಗೇಶ್ ಪವಾರ್ ಹಾಗೂ ನಗರಸೇವಕ ಜಯಂತ ಜಾಧವ್ ಅವರನ್ನು ಅನರ್ಹರು ಎಂದು ಘೋಷಿಸಿದ್ದರು.
ಈ ನಿರ್ಧಾರಕ್ಕೆ ವಿರುದ್ಧವಾಗಿ ನಗರಸೇವಕರು ನಗರಾಭಿವೃದ್ಧಿ ಇಲಾಖೆಯ ಮೊರೆ ಹೋಗಿದ್ದರು. ಆದರೆ, ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಅವರು ಪ್ರಾದೇಶಿಕ ಆಯುಕ್ತರ ನಿರ್ಧಾರವನ್ನು ಎತ್ತಿ ಹಿಡಿದು ನಗರಸೇವಕರ ಅರ್ಜಿಗಳನ್ನು ತಿರಸ್ಕರಿಸಿದ್ದರು.
ಮಹಾನಗರ ಪಾಲಿಕೆ ಚುನಾವಣೆಗೆ ಮೊದಲು ಮಂಗೇಶ್ ಪವಾರ್ ಮತ್ತು ಜಯಂತ ಜಾಧವ್ ‘ಖಾವು ಕಟ್ಟಾ’ಯಲ್ಲಿ ಕೆಲವು ಅಂಗಡಿಗಳನ್ನು ತಮ್ಮ ಪತ್ನಿಯರ ಹೆಸರಿನಲ್ಲಿ ಪಡೆದಿದ್ದರು. ಸದಸ್ಯರಾಗಿ ಆಯ್ಕೆಯಾದ ನಂತರ ಅವುಗಳನ್ನು ಮಹಾನಗರ ಪಾಲಿಕೆಗೆ ಹಿಂದಿರುಗಿಸುವ ಅಗತ್ಯವಿತ್ತು. ಆದರೆ, ಇಬ್ಬರೂ ತಮ್ಮ ಪತ್ನಿಯರ ಹೆಸರಿನಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ಪಾಲಿಕೆಯ ಪ್ರತ್ಯಕ್ಷ ಅಥವಾ ಪರೋಕ್ಷ ಲಾಭ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಈ ಕುರಿತು ಮಂಗಳವಾರ ಹೈಕೋರ್ಟ್ನಿಂದ ತಡೆಯಾಜ್ಞೆ ಆದೇಶ ಬರುತ್ತದೆ ಎಂಬ ವಿಶ್ವಾಸವನ್ನು ಶಾಸಕ ಅಭಯ ಪಾಟೀಲ್ ಈಗಾಗಲೇ ವ್ಯಕ್ತಪಡಿಸಿದ್ದರು. ಅವರು ಹೇಳಿದಂತೆ, ಈಗ ಹೈಕೋರ್ಟ್ನಿಂದ ಸ್ಥಗಿತ ದೊರಕಿದ್ದು, ಪವಾರ್ ಮತ್ತು ಜಾಧವ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.