ಬೆಳಗಾವಿ: ಬೆಳಗಾವಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಾಜಿ ಕೇಂದ್ರ ಸಚಿವ ದಿ. ಬಿ.ಶಂಕರಾನಂದ್ ಅವರ ಒಡೆತನದ ಆಸ್ತಿಗೆ ಕನ್ನ ಹಾಕಿರುವವರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತ್ತೊಬ್ಬರ ಆಸ್ತಿ, ಮನೆ, ಜಮೀನು ಮಾರಾಟ ಮಾಡುವ ಗ್ಯಾಂಗ್ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಈ ಗ್ಯಾಂಗ್ ಮಟ್ಟ ಹಾಕಲು ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ. ಸಾಮಾನ್ಯ ಜನರ ಅಷ್ಟೇ ಅಲ್ಲದೇ ಮಾಜಿ ಕೇಂದ್ರ ಸಚಿವ ದಿ. ಬಿ.ಶಂಕರಾನಂದ್ ಅವರ ಆಸ್ತಿ ಮೇಲೂ ಖದೀಮರ ಕಣ್ಣು ಬಿದ್ದಿದೆ. ಸದಾಶಿವನಗರದ ಡಾ.ಜಯಶ್ರೀ ಬಿ.ಶಂಕರಾನಂದ್ ಅವರ ಒಡೆತನದ ಆಸ್ತಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದ ಎಂಟು ಜನರು ಮತ್ತು ಇತರರ ವಿರುದ್ಧ ಬೆಳಗಾವಿ ಖಡೇ ಬಜಾರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದ ಸುನೀಲ ತಳವಾರ, ಅಜಂ ನಗರದ ಆಯೂಬ್ ನೂರಹಮ್ಮದ್ ಪಾರ್ಥನಹಳ್ಳಿ ರಾಜು ವರ್ಗಿಸ್, ಮಲಿಕ್ ಜಾನ್ ಮಬ್ಬಾನಿ, ಮೋಹನ ಶಿಂಧೆ, ಸುಳೇಬಾವಿ ಗ್ರಾಮದ ಇಸ್ಮಾಯಿಲ್ ಸಮಸುದ್ದೀನ್, ಅಂದಿನ ಬೆಳಗಾವಿ ಸಬ್ ರಜಿಸ್ಟಾರ್, ಜಿಲ್ಲಾ ನೋಂದಣಿ ಅಧಿಕಾರಿ ಮೇಲೆ ಪ್ರಕರಣ ದಾಖಲಾಗಿದೆ.
ಬೆಳಗಾವಿಯ ಸದಾಶಿವ ನಗರದಲ್ಲಿ ಸರ್ವೇ ಸಂಖ್ಯೆ 1416 (ಪ್ಲಾಟ್ ಸಂಖ್ಯೆ 01) ನಲ್ಲಿರುವ ಸುನೀಲ ಶಿವಪ್ಪ ತಳವಾರ ಎಂಬುವವರ ನಕಲಿ ದಾಖಲೆ 5 ಗುಂಟೆ ಖಾಲಿ ಜಾಗವನ್ನು ನೂರಹಮ್ಮದ್ ಎಂಬುವರಿಗೆ ಮಾರಾಟ ಮಾಡಿದ್ದಾರೆ. ನಕಲಿ ಸಹಿ ಮಾಡಿ ಜಾಗವನ್ನು 2024ರಲ್ಲಿ ಆಯೂಬ್ ಪ್ರಕರಣದಲ್ಲಿ ಅಧಿಕಾರಿಗಳು ಸೇರಿಕೊಂಡು ಆಸ್ತಿ ಕಬಳಿಸಿದ್ದಾರೆ. ಈ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಬಿ.ಶಂಕರಾನಂದ ಅವರ ಕುಟುಂಬಸ್ಥರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.