ಬೆಳಗಾವಿ: ಒಂದೆಡೆ ತುಂತುರು ಮಳೆ, ಮತ್ತೊಂದೆಡೆ ಆ ಮಳೆ ಹನಿಗಳ ನಡುವೆ ಹಚ್ಚ ಹಸಿರಿನ ವಾತಾವರಣ ಸವಿಯುತ್ತಾ, ಸಸಿ ನೆಡುತ್ತಿರುವ ಮಕ್ಕಳ ಪರಿಸರ ಪ್ರೇಮ ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು.
ಹೌದು ತುಂತುರು ಮಳೆ….ಅದರ ನಡುವೆ ಹಚ್ಚ ಹಸಿರಿನ ವಾತಾವರಣ ಅಲ್ಲಿ ಕಲರಫುಲ್ ಸ್ಕೌಟ್ಸ್ ಯುನಿಫಾರ್ಮ, ಸ್ಪೋಟ್ಸ್ ಯೂನಿಫಾರ್ಮ ಧರಿಸಿ ಆ ಪುಟ್ಟ ಪುಟ್ಟ
ಕೈಗಳಿಂದ ಮಣ್ಣನ್ನು ಉಂಡೆಯನ್ನಾಗಿಸಿ ಅದರಲ್ಲಿ ಬೀಜ ಇಟ್ಟು ಇದು ದೊಡ್ಡ ಮರವಾಗುತ್ತದೆ ಎಂದು ಹಲವಾರು ಆಸೆ ಹೊತ್ತ ಮಕ್ಕಳು ಸಸಿ ನೆಟ್ಟಿದ್ದಾರೆ. ಹಾಗಾದ್ರೆ ಇದು ಎಲ್ಲಿ ಅಂತಿರಾ..ಇಲ್ಲಿದೆ ಒಂದು ಇಂಟರೆಸ್ಟಿಂಗ್ ವರದಿ.
ಬೆಳಗಾವಿಯ ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಜೈನ್ ಹೆರಿಟೇಜ್ ಶಾಲೆಯ ಮಕ್ಕಳು ಸಸಿ ನೆಟ್ಟು ಅರ್ಥಪೂರ್ಣವಾದ ಪರಿಸರ ದಿನ ಆಚರಿಸಲು ಮುಂದಾಗಿದ್ದಾರೆ. ಇದೇ ಮಂಗಳವಾರ ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಯ ಸ್ಕೌಟ್ಸ್ ಗೈಡ್ಸ್ ಶಿಕ್ಷಕಿ ಪಲ್ಲವಿ ನಾಡಕರ್ಣಿ ಹಾಗೂ ಸಹ ಶಿಕ್ಷಕಿ ಕಲ್ಪನಾ ಅವರ ಮಾರ್ಗದರ್ಶನದಲ್ಲಿ ಅರಣ್ಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಕ್ಕಳು ವಿವಿಧ ಬಗೆಯ ಸಸಿಗಳನ್ನು ನೆಟ್ಟು ಸಂತಸದಿಂದ ಪರಿಸರ ದಿನವನ್ನು ಆಚರಿಸಿ ಎಲ್ಲರ ಗಮನ ಸೆಳೆದರು.
ಪರಿಸರ ದಿನದ ನಿಮಿತ್ತ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಹಮ್ಮಿಕೊಂಡಿದ್ದಾರೆ. ಗಂಧದ ಸಸಿ, ಹಲಸಿನ ಸಸಿ ಹೀಗೆ ಹತ್ತು ಹಲವಾರು ಬಗೆಯ ಸಸಿಗಳು ಹಾಗೂ ಗಿಡಗಳ ಮಹತ್ವ ಅರಿತ ಮಕ್ಕಳು ತಾವೇ ಸ್ವತಃ ಹಲವಾರು ಬಗೆಯ ಸಸಿಗಳನ್ನು ನಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಅರಣ್ಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಹಲಸಿನ ಹಣ್ಣುಗಳನ್ನು ಉಡುಗೊರೆಯಾಗಿ ನೀಡಿದರು.
ಈ ವೇಳೆ ಮಾತನಾಡಿದ ಮಕ್ಕಳು ನಮಗೆ ಹಲಸಿನ ಮರ ಹೇಗೆ ಇರುತ್ತದೆ ಎಂದು ಗೊತ್ತೆ ಇರಲಿಲ್ಲ. ಇಲ್ಲಿಗೆ ಬಂದು ಹಲವಾರು ಬಗೆಯ ಹಣ್ಣುಗಳ ಗಿಡಗಳ ಕುರಿತು ಮಾಹಿತಿಯನ್ನು ಪಡೆದುಕೊಂಡೆವು. ಪರಿಸರ ಮತ್ತು ಅರಣ್ಯ ಸಂಪತ್ತು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಈ ವೇಳೆ ಅರಣ್ಯ ಅಧಿಕಾರಿ ಆರ್ ಎಫ್ಓ ಪುರುಷೋತ್ತಮ, ಅರಣ್ಯ ಭದ್ರತಾ ಅಧಿಕಾರಿ ಛಲವಾದಿ, ಬೀಜ ಅಧಿಕಾರಿ ಪರಶುರಾಮ ಪಟ್ಟಣಶೆಟ್ಟಿ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಜೈನ್ ಹೆರಿಟೇಜ್ ಶಾಲೆಯ ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.