ಬೆಳಗಾವಿ: ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಕೊಡ ಮಾಡುವ “ಯುವ ಸಾಹಿತ್ಯ ಸಿರಿ ರಾಷ್ಟ್ರೀಯ ಪ್ರಶಸ್ತಿ” ಗೆ ಇಲ್ಲಿನ ಯುವಕವಿ ನದೀಮ ಸನದಿ ಭಾಜನರಾಗಿದ್ದಾರೆ. ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕದ ಪದಾಧಿಕಾರಿಗಳು ಹಾಗೂ ಹಿರಿಯ ಸಾಹಿತಿ ಚಿಂತಕರನ್ನೊಳಗೊಂಡ ಸಭೆಯು ನದೀಮ ಸನದಿ ಇವರನ್ನು ಯುವ ಸಾಹಿತ್ಯ ಸಿರಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. 28 ಹಾಗೂ 29 ನೇ ಜೂನ್ 2025 ರಂದು ರಾಯಚೂರಿನಲ್ಲಿ ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ನದೀಮ ಸನದಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ದಸಾಪ ರಾಜ್ಯ ಘಟಕದ ಅಧ್ಯಕ್ಷರಾದ ಡಾ ಅರ್ಜುನ ಗೊಳಸಂಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿರುವ ನದೀಮ ಸನದಿ, ನಾಡಿನ ಉದಯೋನ್ಮುಖ ಕವಿಯಾಗಿ ಈಗಾಗಲೇ ತಮ್ಮ ಛಾಪನ್ನು ಮೂಡಿಸಿದ್ದಾರೆ. ಹುಲಿಯ ನೆತ್ತಿಗೆ ನೆರಳು ಹಾಗೂ ಪ್ರತಿರೋಧ ಮತ್ತು ಪ್ರಿಯತಮೆ ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದು, ಈ ಸಂಕಲನಗಳು ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಇವರ ಒಂದು ಕವನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿ.ಕಾಂ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಪ್ರೇಮದ ಸಂವೇದನೆ ಹಾಗೂ ಬಂಡಾಯದ ಕಾವು ಎರಡೂ ಮಿಳಿತಗೊಂಡ ತೀವ್ರತೆಯನ್ನು ರೋಮ್ಯಾಂಟಿಕ್ ಸಂವೇದನೆಯಿಂದಲೇ ಆಗುಮಾಡಿರುವುದು ಇವರ ಕವಿತೆಗಳಲ್ಲಿ ಮೈದಳೆದಿದ್ದನ್ನು ವಿಮರ್ಷಕರು ಗುರುತಿಸಿದ್ದಾರೆ