ಮೂಡಲಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನ ಸಮಾನತೆಯ ಪಂಕ್ತಿ ಹಾಗೂ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕ್ಷೇತ್ರದಲ್ಲಿ ಸದಾ ಕೆಲಸ ಮಾಡುತ್ತಿದ್ದು, ಎಲ್ಲ ಜಾತಿ, ಜನಾಂಗದವರಿಗೂ ಸರಿಸಮಾನವಾಗಿ ಅವಕಾಶ ಕಲ್ಪಿಸಲಾಗಿದೆ. ಜತೆಗೆ, ಅವರ ಕೆಲಸ ಕಾರ್ಯಗಳನ್ನು ಕೂಡ ಸರಿಸಮಾನ ದೃಷ್ಟಿಯಿಂದ ಮಾಡಿರುವ ತೃಪ್ತಿ ನನ್ನದಾಗಿದೆ ಎಂದು ಬೆಮುಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಕುಲಗೋಡ ಗ್ರಾಮದ ಎನ್.ಎಸ್.ಎಫ್ ಶಾಲಾ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ದಲಿತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಎಲ್ಲ ಸಮಾಜವನ್ನು ಒಂದುಗೂಡಿಸುವ ಮೂಲಕ ಸಾಮಾಜಿಕ ನ್ಯಾಯದಡಿ, ಡಾ.ಅಂಬೇಡ್ಕರ್ ಅವರ ಸಂವಿಧಾನದ ತತ್ವದಡಿ ಕೆಲಸ ಮಾಡುತ್ತಿರುವೆ. ಅದರಂತೆಯೇ ಡಾ.ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯವನ್ನು ಇಲ್ಲಿ ಕಲ್ಪಿಸಲಾಗಿದ್ದು, ಇವರ ಮಾರ್ಗದರ್ಶನಗಳೇ ಇಲ್ಲಿ ಕಾರ್ಯನಿರ್ವಹಣೆಗೆ ದಾರಿದೀಪವಾಗಿವೆ ಎಂದು ಹೇಳಿದರು.
ಡಾ.ಅಂಬೇಡ್ಕರ್ ಅವರು ಹೇಳಿದಂತೆಯೇ ಕ್ಷೇತ್ರದಲ್ಲಿ ಸಮಾನತೆಯನ್ನು ತರಲಾಗಿದ್ದು, ಎಲ್ಲ ಜಾತಿ, ಧರ್ಮದವರನ್ನು ಸರಿಸಮಾನವಾಗಿ ಕಾಣಲಾಗುತ್ತಿದೆ. ಜತೆಗೆ ಅವರ ಆಸೆ ಆಶೋತ್ತರಗಳಿಗೆ ಸ್ಪಂದನೆ ಮಾಡುತ್ತಿದ್ದು, ಸಮಾನತೆಯ ಅಧಿಕಾರ ನೀಡಲಾಗಿದೆ ಎಂದ ಅವರು, ಕಳೆದ 25 ವರ್ಷಗಳಿಂದ ಆರು ಬಾರಿ ಶಾಸಕನಾಗಿ ಇಲ್ಲಿ ಕೆಲಸ ಮಾಡುತ್ತಿರುವೆ. ನಮ್ಮದು
ಸಣ್ಣ ಜಾತಿ ಇದ್ದರೂ ಕ್ಷೇತ್ರದಲ್ಲಿರುವ ಎಲ್ಲ ಜಾತಿ ಜನಾಂಗದವರು ಜನರು ನನ್ನನ್ನು ಎಂದಿಗೂ ಕೈಬಿಟ್ಟಿಲ್ಲ. ಹೀಗಾಗಿ ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಅವರು ಬೋಧಿಸಿದ ತತ್ವ ಪರಿಪಾಲನೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರು ಅವರ ಅನುಭಮ ಮಂಟಪದಲ್ಲಿ ಎಲ್ಲ ಜನಾಂಗದವರು ಇರಲೆಂದುಆಶಿಸಿದ್ದರು. ಅದರಂತೆಯೇ ಎಲ್ಲ ಜನಾಂಗದವರಿಗೆ ಅವಕಾಶಕೊಟ್ಟಿದ್ದರು. ಅಂತೆಯೇ ಈ ಕ್ಷೇತ್ರದಲ್ಲಿಯೂ ಮುಂದುವರಿದ ಜನಾಂಗವಿರಲಿ, ಹಿಂದುಳಿದವರು ಇರಬಹುದು ಎಲ್ಲರಿಗೂ ಸಮಾನ ಅವಕಾಶ ಕೊಡಲಾಗಿದೆ. ಇಲ್ಲಿಯಂತೆಯೇ ಎಲ್ಲ 223 ಕ್ಷೇತ್ರಗಳಲ್ಲಿ ಹೀಗೆ ಅವಕಾಶ ಕೊಟ್ಟರೆ ಅಲ್ಲಿಯೂ ಸಮಾನತೆ ತರಲು ಸಾಧ್ಯವಾಗುತ್ತದೆ. ಜತೆಗೆ ಕ್ಷೇತ್ರಗಳು ಸುಧಾರಣೆಯಾಗುತ್ತವೆ.
ಎಲ್ಲರನ್ನು ಸಮಾನತೆಯಡಿ ನಾವು ನೋಡುವಂತೆ ಹೇಳಿದ್ದ ಡಾ.ಅಂಬೇಡ್ಕರ್ ಅವರ ಸಮಾನತೆ ಆಶೋತ್ತರದ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಇದೆ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಶಾಸಕರು, ಡಾ.ಅಂಬೇಡ್ಕರ್ ಅವರ ಹೆಸರನ್ನುಬಳಸಿಕೊಂಡು ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ. ಕೇವಲ ಮತ ಪಡೆಯುವ ಸಂಬಂಧ ಡಾ.ಅಂಬೇಡ್ಕರ್ ಅವರನ್ನು ಬಳಸಿಕೊಂಡಿದೆ ಹೊರತು, ಅವರ ತತ್ವಗಳನ್ನು ಅವರು ಎಂದಿಗೂ ಅನುಸರಿಸುತ್ತಿಲ್ಲ. ಏಕೆಂದರೆ ಈ ಹಿಂದೆ ಡಾ.ಅಂಬೇಡ್ಕರ್ ಅವರು ಲೋಕಸಭೆ ಸ್ಪರ್ಧೆ ಮಾಡಿದಾಗ ಅವರನ್ನು ಸೋಲಿಸಿದ್ದೆ ಇದೆ ಕಾಂಗ್ರೆಸ್.ನವರು. ಅವರ ಹೆಸರನ್ನು ಹೇಳಲು ಕೂಡ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಜರಿದರು.
ಬಿಜೆಪಿ ಎಂದಿಗೂ ಡಾ.ಅಂಬೇಡ್ಕರ್ ಅವರಿಗೆ ಗೌರವ ನೀಡುತ್ತಲೇ ಬಂದಿದೆ. ಅವರ ತತ್ವದಡಿಯೇ ಕೆಲಸ ಮಾಡುತ್ತಾ ಬಂದಿದೆ ಎಂದ ಅವರು, ಇಂದು ನಾನು ಇಲ್ಲಿ ಶಾಸಕನಾಗಿ ಬಂದು ನಿಮ್ಮೆದುರು ನಿಂತಿದ್ದೇನೆ ಎಂದರೆ ಅದಕ್ಕೆ ಕಾರಣವೇ ಸಂವಿಧಾನ. ಹೀಗಾಗಿ
ಡಾ.ಅಂಬೇಡ್ಕರ್ ಅವರು ಎಲ್ಲ ಜಾತಿ ಜನಾಂಗಕ್ಕೂ ಸಮಾನತೆ ನೀಡಿದ್ದಾರೆ. ಅದನ್ನುಕ್ಷೇತ್ರದಲ್ಲಿ ನಾವು ಕಾಣಬಹುದು. ಈ ಕ್ಷೇತ್ರದ ಜನರ ಸಹಕಾರ, ಪ್ರೀತಿ ವಿಶ್ವಾಸಎಲ್ಲವೂ ಸದಾ ನನ್ನ ಮೇಲಿದೆ. ಅದನ್ನು ನಾನು ಎಂದಿಗೂ ಉಳಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.