ಬೆಳಗಾವಿ: ಇಡೀ ಪಂಚಮಸಾಲಿ ಸಮುದಾಯವನ್ನು ಯತ್ನಾಳ ಅವರಿಗೆ ಬರೆದು ಕೊಟ್ಟಿಲ್ಲ. 13ರಂದು ಬೆಳಗಾವಿಯಲ್ಲಿ ಯತ್ನಾಳ ಪರವಾಗಿ ಹಮ್ಮಿಕೊಂಡಿರುವ ಪ್ರತಿಭಟನೆ ಅದು ವಯಕ್ತಿಕ ಎನ್ನುವ ಮೂಲಕ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ಕೊಟ್ಟರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶೇ.80ರಷ್ಟು ಪಂಚಮಸಾಲಿಗರು ಬಿಜೆಪಿಯಲ್ಲಿದ್ದಾರೆ ಅಂತಾ ಹೇಳಿದ್ದು ನನ್ನ ಮನಸ್ಸಿಗೆ ಬಹಳಷ್ಟು ನೋವಾಗಿದೆ. ಶ್ರೀಗಳು ಆ ರೀತಿ ಮಾತನಾಡಬಾರದಿತ್ತು. ಪಂಚಮಸಾಲಿ ಹೋರಾಟದಲ್ಲಿ ನಾವೆಲ್ಲಾ ಪಕ್ಷಾತೀತವಾಗಿ ಪಾಲ್ಗೊಂಡಿದ್ದೇವು. ಮೀಸಲು ಕ್ಷೇತ್ರ ಸೇರಿ ಇನ್ನುಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಗೆಲ್ಲಲು ಲಿಂಗಾಯತ ಪಂಚಮಸಾಲಿಗರು ಕಾರಣ ಎಂದು ಅಸಮಾಧಾನ ಹೊರ ಹಾಕಿದರು.
ನೀವು ಅವರ ಪ್ರತಿಭಟನೆಗೆ ಬೆಂಬಲಿಸುತ್ತಿರಾ ಎಂಬ ಪ್ರಶ್ನೆಗೆ, ನಾನು ಕಾಂಗ್ರೆಸ್ ಪಕ್ಷ, ಅವರು ಬಿಜೆಪಿಯವರು. ಸಮಾಜ ಮತ್ತು ಪಕ್ಷ ಬೇರೆ ಬೇರೆ. ಹಾಗಾಗಿ, ಅವರ ಪ್ರತಿಭಟನೆಗೆ ನಾವು ಬೆಂಬಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಖಾರವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರಿಸಿದರು.
ಪಕ್ಷದ ಆಂತರಿಕ ವಿಚಾರದಲ್ಲಿ ಸ್ವಾಮೀಜಿಗಳು ತಲೆ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಸರ್ಕಾರಕ್ಕೆ ಮುಂಚೆಯಿಂದಲೂ ಸ್ವಾಮೀಜಿ ಮತ್ತು ಮಠಮಾನ್ಯರು ಮಾರ್ಗದರ್ಶನ ಕೊಡಬೇಕು. ಎಲ್ಲಾದರೂ, ಏನಾದರೂ ತಪ್ಪಿದರೆ ಸಲಹೆ ನೀಡಬೇಕು. ಅದು ಇತಿಮಿತಿಯಲ್ಲಿ ಇರಬೇಕು. ಅದು ಅತೀ ಆಗಬಾರದು ಎಂದು ಅಸಮಾಧಾನ ಹೊರ ಹಾಕಿದರು.
ಹಾಲಿನ ದರದ ಬಗ್ಗೆ ರೈತರಿಗೆ ಸಂತೋಷ ಸುದ್ದಿ ಕೊಟ್ಟಿದ್ದೇವೆ. 4 ರೂ. ಏರಿಸಿರುವ ಹಣವನ್ನು ನೇರವಾಗಿ ರೈತರಿಗೆ ಪಾವತಿಸುತ್ತೇವೆ. ಆ ಹಣವನ್ನು ಕೆಎಂಎಫ್ ಇಟ್ಟುಕೊಳ್ಳುವುದಿಲ್ಲ. ಈ ಮೂಲಕ ನಮ್ಮದು ರೈತಪರ ಸರ್ಕಾರ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥಿಸಿಕೊಂಡರು.
ಗೃಹಲಕ್ಷ್ಮೀ ಯೋಜನೆಯ ಜನೆವರಿ ತಿಂಗಳ ಕಂತಿನ ಹಣವನ್ನು ಟ್ರೇಜರಿಗೆ ಕಳಿಸಿದ್ದೇವೆ. ಇದು ಯುಗಾದಿ ಮತ್ತು ಈದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಖುಷಿಯ ವಿಚಾರ. ಇನ್ನು ಫೆಬ್ರುವರಿ ತಿಂಗಳ ಹಣವನ್ನು ಶೀಘ್ರವೇ ಕೊಡುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.
ಯತ್ನಾಳ ಅವರು ನಾಲಿಗೆ ಹರಿ ಬಿಡುವುದರಿಂದ ಬಿಜೆಪಿ ಉಚ್ಛಾಟಿಸಿದೆ. ಬಹಳಷ್ಟು ಗೌರವಾನ್ವಿತರು ಮತ್ತು ನಮ್ಮ ಸಮಾಜದ ಹಿರಿಯರು ಅಂತಾ ನಮ್ಮ ಚೌಕಟ್ಟಿನಲ್ಲಿ ನಾವಿದ್ದೇವು. ಆದರೆ, ಅವರು ಮಾತಾಡೋ ರೀತಿ ನೋಡಿದರೆ ನಾಲಿಗೆ ಮತ್ತು ತಲೆಗೆ ಕನೆಕ್ಷನ್ ತಪ್ಪಿದೆ ಎಂದು ಟಾಂಗ್ ಕೊಟ್ಟರು.
ವಿಜಯದಶಮಿಗೆ ಯತ್ನಾಳ ಹೊಸ ಪಕ್ಷ ಕಟ್ಟುವುದಕ್ಕೆ ಅವರಿಗೆ ಒಳ್ಳೆಯದಾಗಲಿ. ಭಗವಂತನ ಆಶೀರ್ವಾದ ಅವರ ಮೇಲಿರಲಿ. ಆದಷ್ಟು ಬೇಗನೇ ಹೊಸ ಪಕ್ಷವನ್ನು ಕಟ್ಟಿ ರಾಜ್ಯದಲ್ಲಿ ಸಂಘಟನೆ ಮಾಡಲಿ ಎಂದು ಹಾರೈಸಿದರು.
ಸಚಿವ ಕೆ.ಎನ್.ರಾಜಣ್ಣ ಹನಿಟ್ರ್ಯಾಪ್ ಕೇಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಯಾವ ಹನಿನೂ ಇಲ್ಲ. ಯಾವ ಟ್ರ್ಯಾಪ್ ನೂ ಇಲ್ಲ. ಈಗಾಗಲೇ ಗೃಹ ಸಚಿವರಿಗೆ ಅವರು ದೂರು ಕೊಟ್ಟಿದ್ದಾರೆ. ಸದನದಲ್ಲಿ ಜವಾಬ್ದಾರಿಯಿಂದ ರಾಜಣ್ಣ ಮಾತನಾಡಿದ್ದಾರೆ. ಸತ್ಯಾಸತ್ಯತೆ ಹೊರಗೆ ಬರಬೇಕು ಎಂದು ಅಭಿಪ್ರಾಯಪಟ್ಟರು.
ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಹಗರಣದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಇದಕ್ಕೆ ನೀವು ಜಾರ್ಜ್ ಅವರ ಬಳಿಯೇ ಪ್ರತಿಕ್ರಿಯೆ ಪಡೆಯುವುದು ಬಹಳ ಒಳ್ಳೆಯದು. ಬಿಜೆಪಿಯವರಿಗೆ ಮಾತನಾಡಲು ಏನೂ ಇಲ್ಲ. ಹಾಗಾಗಿ, ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಾವ ಹಗರಣವೂ ನಡೆದಿಲ್ಲ. ಎಲ್ಲವೂ ಕಾನೂನು ರೀತಿಯ ಪ್ರಕ್ರಿಯೆಯಲ್ಲಿ ಆಗಿದೆ. ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಈ ಪ್ರಶ್ನೆಗೆ ಜಾರ್ಜ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ ರಾಜ್ಯಗಳಲ್ಲಿ ಕೊಟ್ಟಿರುವ ಕಂಪನಿಗೆ ಕರ್ನಾಟಕದಲ್ಲೂ ಗುತ್ತಿಗೆ ಕೊಡಲಾಗಿದೆ. ಅಲ್ಲಿ ಏನು ದರ ಇದೆಯೋ ಇಲ್ಲಿಯೂ ಅಷ್ಟೇ ಇದೆ. ಟೆಂಡರ್ ನಲ್ಲಿ ಯಾರು ಕಡಿಮೆ ಬಿಡ್ ಮಾಡಿರುತ್ತಾರೆ. ಅವರಿಗೆ ಟೆಂಡರ್ ಕೊಟ್ಟಿದ್ದೇವೆ ಎಂದು ವಿರೋಧಿಗಳಿಗೆ ತಿರುಗೇಟು ಕೊಟ್ಟರು.