ಕಲಬುರಗಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆದಲ್ಲಿ ಆ ಸ್ಥಾನವನ್ನು ಅಹಿಂದ ವರ್ಗಕ್ಕೆ ನೀಡಬೇಕೆಂಬ ಆಗ್ರಹಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರು ಹೇಳಿದ ಮೇಲೆ ನಾವೇನು ಹೇಳುವುದು? ನಮ್ಮ ಪಾತ್ರ ಏನೂ ಇಲ್ಲ. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರನ್ನು ಕರೆಸಿ ಮಾತನಾಡುತ್ತಾರೆ. ನಮಗೆ ಯಾವ ಅಧಿಕಾರವಿದೆ ಹೇಳಿ. ಅಧ್ಯಕ್ಷರ ಆಯ್ಕೆ ಹೇಗೆ ಆಗುತ್ತದೆ ಎನ್ನುವುದೂ ಗೊತ್ತಿಲ್ಲ ಎಂದು ಹೇಳಿದರು.
ನಮ್ಮ ಇಲಾಖೆಯ ಕೆಲಸಕ್ಕಾಗಿ ನವದೆಹಲಿಗೆ ತೆರಳಿದ್ದೆ. ಇದೇ ವೇಳೆ ಎಐಸಿಸಿ ಅಧ್ಯಕ್ಷರು, ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನೂ ಭೇಟಿ ಮಾಡಿದ್ದೆ. ಅವರು ಏನು ಕೇಳಬೇಕೊ ಅದನ್ನು ಕೇಳುತ್ತಾರೆ. ಸರ್ಕಾರದ ಬಗ್ಗೆ ಸ್ವಾಭಾವಿಕವಾಗಿ ಅವರು ಯೋಚನೆ ಮಾಡುತ್ತಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಚರ್ಚೆ ಮಾಡುತ್ತಾರೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆಗೆ ಬಂದಾಗ ನನ್ನ ಅಭಿಪ್ರಾಯ ಕೇಳಿದ್ದರೆ, ಈ ಬಾರಿ ಅಹಿಂದ ನಾಯಕರಿಗೆ ಅವಕಾಶ ನೀಡುವಂತೆ ಪಕ್ಷದ ವರಿಷ್ಠರಿಗೆ ಸಲಹೆ ನೀಡುತ್ತೇನೆ. ಈ ವಿಷಯವನ್ನು ಎಲ್ಲಾ ನಾಯಕರು ಚರ್ಚಿಸಬೇಕು ಎಂದರು.
ಗೃಹ ಸಚಿವ ಜಿ. ಪರಮೇಶ್ವರ್ ಯೋಜಿಸಿದ್ದ ಭೋಜನ ಕೂಟಕ್ಕೆ ಪಕ್ಷದ ನಾಯಕತ್ವ ಅನುಮತಿ ನೀಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ದಲಿತರ ಸಮಸ್ಯೆಗಳನ್ನು ದೂರವಾಣಿ ಮೂಲಕವೂ ಚರ್ಚಿಸಬಹುದು. ಭೋಜನ ಕೂಟವೇ ನಡೆಸಬೇಂದಿಲ್ಲ ಎಂದು ಹೇಳಿದರು. ಇದೇ ವೇಳೆ ಕೆಲವು ಆಪ್ತರು ದುಬೈಗೆ ಹೋಗುತ್ತಿದ್ದಾರೆ ಎಂಬ ವರದಿಗಳನ್ನು ಜಾರಕಿಹೊಳಿಯವರು ನಿರಾಕರಿಸಿದರು.
ಇದೇ ವೇಳೆ ಉದಯಗಿರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಇಂತಹ ಘಟನೆಗಳು ದಿಢೀರ್ ಆಗಿ ನಡೆದರೆ ಪೊಲೀಸರು ಏನು ಮಾಡಲು ಸಾಧ್ಯ? ಕೆಲವೊಂದು ಸಂದರ್ಭದಲ್ಲಿ ಕ್ರಮ ಕೈಗೊಳ್ಳಲು ಸಮಯ ಬೇಕಾಗುತ್ತದೆ. ಅದನ್ನು ಪೊಲೀಸರ ವೈಫಲ್ಯ ಅಂತ ಯಾಕೆ ಹೇಳ್ತೀರಾ? ಹೀಗಾಗುತ್ತೆ ಎಂದು ಪೊಲೀಸರಿಗೆ ಗೊತ್ತಿತ್ತಾ? ಎಂದು ಪ್ರಶ್ನಿಸಿದರು.
ಸರ್ಕಾರಿ ಅಧಿಕಾರಿಗೆ ಶಾಸಕ ಸಂಗಮೇಶ್ ಪುತ್ರನ ಬೆದರಿಕೆ ವಿಚಾರವಾಗಿ ಮಾತಾಡಿ, ಅವನು ಬೈದಿದ್ದಾನೆ, ಕೇಸ್ ಹಾಕಿದ್ದಾರೆ. ಇನ್ನೇನಿದ್ರೂ ಕೋರ್ಟ್ ನಲ್ಲಿ ಆಗಬೇಕು. ಎಫ್ಐಆರ್ ನಲ್ಲಿ ಹೆಸರು ಹಾಕಿಲ್ಲ ಎಂದರೆ ಅವರ ಹೆಸರು ಹಾಕಿ ಕೊಡಬೇಕಿತ್ತು. ಪೊಲೀಸರಿಗೆ ಅನುಕೂಲವಾಗುತ್ತಿತ್ತು. ಬಿಜೆಪಿ ಅವಧಿಯಲ್ಲೂ ಇಂತಹ ಘಟನೆ ಆಗಿಲ್ಲವೇ? ಎಂದು ಪ್ರಶ್ನಿಸಿದರು.