ಬೆಳಗಾವಿ: ಇಲ್ಲಿನ ಗೋವಾವೆಸ್ ಬಳಿಯ ಮಹಾನಗರ ಪಾಲಿಕೆಯ ತಿನಿಸು ಕಟ್ಟೆ ಮಳಿಗೆಗಳನ್ನು ಪತ್ನಿ ಹೆಸರಿನಲ್ಲಿ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆಯ ಇಬ್ಬರು ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಪ್ರಾದೇಶಿಕ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ.
ತಿನಿಸು ಕಟ್ಟೆಗಳ ಹರಾಜಿನಲ್ಲಿ ಸದಸ್ಯ ಜಯಂತ ಜಾಧವ ಅವರು ತಮ್ಮ ಪತ್ನಿ ಸೋನಾಲಿ ಜಾಧವ ಹಾಗೂ ಮಂಗೇಶ ಪವಾರ ಅವರು ತಮ್ಮ ಪತ್ನಿ ನೀತಾ ಪವಾರ ಅವರ ಹೆಸರಿನಲ್ಲಿ ಮಳಿಗೆಗಳನ್ನು ಬಾಡಿಗೆ ಪಡೆಯಲಾಗಿದೆ.
ವಾರ್ಡ್ ನಂ. 23ರ ಜಯಂತ ಜಾಧವ ಹಾಗೂ ವಾರ್ಡ್ 41ರ ಸದಸ್ಯ ಮಂಗೇಶ ಪವಾರ ಅವರ ಸದಸ್ಯತ್ವ ರದ್ದುಗೊಳಿಸಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ಆದೇಶಿಸಿದ್ದಾರೆ.
ಪಾಲಿಕೆ ಸದಸ್ಯರಾಗುವ ಮುನ್ನವೇ ಬಾಡಿಗೆ ಪಡೆದುಕೊಂಡಿದ್ದರು. ಸದಸ್ಯರಾಗಿ ಆಯ್ಕೆಯಾದ ಬಳಿಕವೂ ಅದನ್ನು ವಾಪಸ್ಸು ನೀಡಿರಲಿಲ್ಲ. ಚುನಾಯಿತ ಸದಸ್ಯರಾಗಿದ್ದರೂ ಪಾಲಿಕೆಯಿಂದ ಲಾಭ ಪಡೆಯುತ್ತಿದ್ದಾರೆ. ಈ ಇಬ್ಬರೂ ಅನರ್ಹಗೊಳಿಸಿ ಸದಸ್ಯತ್ವ ರದ್ದುಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ ದೂರು ಸಲ್ಲಿಸಿದರು. ಇದನ್ನು ಪರಿಶೀಲನೆ ನಡೆಸಿ ಬಳಿಕ ಈ ಇಬ್ಬರೂ ಸದಸ್ಯರನ್ನು ಅನರ್ಹಗೊಳಿಸಿ ಸದಸ್ಯತ್ವ ರದ್ದುಪಡಿಸಿದ್ದಾರೆ.