ಬೆಳಗಾವಿ: ಬೆಳಗಾವಿಯ “ದಿ ಹಿಂದೂ” ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ರಿಷಿಕೇಶ ಬಹದ್ದೂರ್ ದೇಸಾಯಿ ಅವರಿಗೆ ನಾಡಿನ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿ ಒಲಿದು ಬಂದಿದೆ.
ರಿಷಿಕೇಶ್ ಬಹದ್ದೂರ್ ದೇಸಾಯಿ ಅವರು ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸಾಧನೆ ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅವರಿಗೆ ಈ ಬಾರಿಯ ಪ್ರಶಸ್ತಿ ಪ್ರಕಟಿಸಿದೆ. ಮೂಲತಃ ಬೀದರ್ ನವರಾದ ರಿಷಿಕೇಶ ಬಹದ್ದೂರ್ ದೇಸಾಯಿ ಅವರು ವಿಜಯ ಕರ್ನಾಟಕ, ದಿ ಹಿಂದೂ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಬೆಳಗಾವಿ ಪತ್ರಿಕೋದ್ಯಮದ ಹಿರಿಯ ಮಾರ್ಗದರ್ಶಕ ಪತ್ರಕರ್ತರಾಗಿರುವ ರಿಷಿಕೇಶ ಬಹದ್ದೂರ್ ದೇಸಾಯಿ ಅವರು ಪತ್ರಿಕೋದ್ಯಮ ವಲಯದಲ್ಲೇ ಅತ್ಯಂತ ಸ್ನೇಹಶೀಲ ಹಾಗೂ ಅಜಾತಶತ್ರು ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ತಮ್ಮ ಸ್ನೇಹಶೀಲ ಗುಣಗಳಿಂದ ಅವರು ಎಲ್ಲರ ಸ್ನೇಹ ಸಂಪಾದಿಸಿದ್ದಾರೆ.
ಪತ್ರಿಕೋದ್ಯಮ, ಕಾನೂನು ಪದವೀಧರರಾಗಿರುವ ಅವರು, ಬೀದರ್, ಬೆಂಗಳೂರು, ಮೈಸೂರು, ಬೆಳಗಾವಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ದಿ ಹಿಂದೂ ಪತ್ರಿಕೆಯಲ್ಲಿ ಬೆಳಗಾವಿಯಲ್ಲಿ ಹಿರಿಯ ಸಹಾಯಕ ಸಂಪಾದಕರು, ಬೀದರ್ ನಲ್ಲಿ ವಿಶೇಷ ವರದಿಗಾರರು, ಟೈಮ್ಸ್ ಆಫ್ ಇಂಡಿಯಾದಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಪ್ರಧಾನ ವರದಿಗಾರರಾಗಿ, ವಿಜಯ ಟೈಮ್ಸ್ ಪತ್ರಿಕೆಯಲ್ಲಿ ಮೈಸೂರಿನಲ್ಲಿ ಬ್ಯುರೋ ಚೀಫ್ ಹಾಗೂ ಬೆಂಗಳೂರಿನಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ, ಏಷ್ಯನ್ ಏಜ್ ಪತ್ರಿಕೆಯಲ್ಲಿ ಬೆಂಗಳೂರಿನ ಹಿರಿಯ ವರದಿಗಾರರಾಗಿ ಅವರು ತಮ್ಮ ಸಂಶೋಧನಾ ಹಾಗೂ ಶ್ರೇಷ್ಠ ಬರಹಗಳಿಂದ ಜನರ ಮನ ಗೆದ್ದಿದ್ದಾರೆ. ಜೊತೆಗೆ ಸಂವಾದ- ಚರ್ಚೆಗಳಲ್ಲಿ ಭಾಗವಹಿಸುತ್ತಾ ತಮ್ಮ ಅಭಿಪ್ರಾಯವನ್ನು ನಿರ್ಭೀತಿಯಿಂದ ತಿಳಿಸುವ ಮೂಲಕ ನಾಡಿನೆಲ್ಲೆಡೆ ಜನಪ್ರಿಯರಾಗಿದ್ದಾರೆ.