ಬೆಳಗಾವಿ: ಕಾರ್ಮಿಕರ ಹಣದಲ್ಲೇ, ಕಾರ್ಮಿಕರ ಆರೋಗ್ಯ ಕಾಪಾಡಲೆಂದೇ ಇರುವ ಬೆಳಗಾವಿಯ ಅಶೋಕ್ ನಗರದ ಇ.ಎಸ್.ಐ ಆಸ್ಪತ್ರೆ ಇದು. ಇಲ್ಲಿಗೆ ಬರುವ ರೋಗಿಗಳು ಚಿಕಿತ್ಸೆಗಾಗಿ ನಡೆಸಬೇಕಾದ ಅಲೆದಾಟದಲ್ಲೇ ಸುಸ್ತಾಗುತ್ತಾರೆ. ನಗರದಲ್ಲಿರುವ ಇಎಸ್ಐ ಆಸ್ಪತ್ರೆಯ ಹೆಗ್ಗಳಿಕೆ ಇದು.
ಕಾರ್ಮಿಕರಿಗೆ ವೈದ್ಯಕೀಯ ಸೇವೆಯನ್ನು ನೀಡುವ ಹಿನ್ನಲೆಯಲ್ಲಿ ಸ್ಥಾಪಿಸಲಾಗಿರುವ ಈ ಆಸ್ಪತ್ರೆಯಲ್ಲಿ (ಇ.ಎಸ್.ಐ ಆಸ್ಪತ್ರೆ) ಸಿಬ್ಬಂದಿಗಳ ಬೇಕಾಬಿಟ್ಟಿ ವರ್ತನೆಗೆ ಜನರಲ್ಲಿ ಭಯದ ಛಾಯೆ ಮೂಸಿಡಿದೆ.
ಆರೋಗ್ಯ ಸುಧಾರಣೆಗಾಗಿ ಇರುವ ಆಸ್ಪತ್ರೆಯ ಕಟ್ಟಡ ಹೊರಗಿಂದ ಸುಸಜ್ಜಿತವಾಗಿ ಕಂಡರೂ ಒಳಗೆ ಮೂಲ ಸೌಲಭ್ಯಗಳಿಲ್ಲದೆ ದುಸ್ಥಿತಿಯಲ್ಲಿವೆ. ಸಣ್ಣ ಪುಟ್ಟ ದಾಖಲೆ ದೋಷಗಳಿಗೆ ಚಿಕಿತ್ಸೆ ನಿರಾಕರಿಸಿ ಅಲೆದಾಡಿಸುತ್ತಾರೆ” ಎಂಬುದು ರೋಗಿಗಳ ದೂರು.
ಕಾರ್ಮಿಕರ ರಾಜ್ಯ ವಿಮಾ ನಿಗಮ ನಿರ್ವಹಣೆ ಮಾಡುತ್ತಿರುವ ಆಸ್ಪತ್ರೆ ಇದಾಗಿದೆ. ಈ ಆಸ್ಪತ್ರೆ ಒಳ ಹೋದರೆ ಸಾಕು ಚಿಕಿತ್ಸೆಗಾಗಿ ಮೈದಾನ ಸುತ್ತಾಡಿದ ಅನುಭವವಾಗುತ್ತದೆ. ರೋಗಿಗಳು, ಅವರ ಸಂಬಂಧಿಕರು ದಾಖಲೆ ಪತ್ರಗಳನ್ನು ಹಿಡಿದು, ಮೊಗದಲ್ಲಿದುಗುಡ ಹೊತ್ತು ಅಲೆದಾಡುವ ದೃಶ್ಯಗಳಿಲ್ಲಿ ಮಾಮೂಲು.
ಚನ್ನಮ್ಮ ವೃತ್ತದ ಬಳಿಯಲ್ಲಿರುವ ಇ.ಎಸ್.ಐ ಚಿಕಿತ್ಸಾಲಯದಿಂದ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅಶೋಕ ನಗರದ ಆಸ್ಪತ್ರೆಗೆ’ ಕಳುಹಿಸಲಾಗುತ್ತದೆ. ಬಳಿಕ ಇಲ್ಲಿ ಬಂದ ರೋಗಿಗಳನ್ನು ನೋಂದಾಯಿಸಲು, ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಬೇಕಿರುವ ಅನುಮತಿ ಪಡೆಯಲು ಅಲೆದಾಡಿಯೇ ಕಾರ್ಮಿಕರು ಹೈರಾಣಾಗುತ್ತಾರೆ.
ಕಾರ್ಮಿಕರ ವೇತನದಿಂದ ಇಎಸ್ಐ ಸೌಲಭ್ಯ ಪಡೆದುಕೊಳ್ಳಲು ವೇತನದಲ್ಲಿ ಪ್ರತಿ ತಿಂಗಳ ಹಣ ಕಡಿತಗೊಳ್ಳುತ್ತದೆ. ಅದೇ ಹಣದಲ್ಲಿ ನಡೆಯುವ ಆಸ್ಪತ್ರೆಯಲ್ಲಿ ಸೌಲಭ್ಯಗಳನ್ನು ಪಡೆಯಲು ನಾವು ಪರದಾಡಬೇಕಿದೆ’ ಎಂದು ಸ್ಥಳೀಯ ಕಾರ್ಮಿಕರೊಬ್ಬರು ಬೇಸರ ತೋಡಿಕೊಂಡರು.
‘ವಿಶಾಲವಾದ ದೊಡ್ಡ ಕಟ್ಟಡವಿದ್ದರು. ಚಿಕಿತ್ಸೆ ನೀಡಲು ಬೇಕಾದ ಎಲ್ಲ ವ್ಯವಸ್ಥೆಗಳೂ ಇಲ್ಲಿವೆ. ಆದರೆ, ಸಿಬ್ಬಂದಿಯ ಬೇಜವಾಬ್ದಾರಿಯಿಂದ ಕಾರ್ಮಿಕರು ಅಲೆದಾಡಬೇಕಾದ ಸ್ಥಿತಿ ಇದೆ. ಇನ್ನೂ ಶೌಚಾಲಯ ಸ್ವಚ್ಚತೆ ಅಂತೂ ಇಲ್ಲವೇ ಇಲ್ಲ. ಅಲ್ಲಿ ದುರ್ವಾಸನೆ ರೋಗಿಗಳು ಮೂಗು ಮುಚ್ಚಿ ಅಲೆದಾಡುವುದು ಅನಿವಾರ್ಯ.
‘ವಿಪರೀತ ಆರೋಗ್ಯ ಸಮಸ್ಯೆ ಹೊತ್ತು ಆಸ್ಪತ್ರೆಗೆ ವೃದ್ಧ ಮಾವನನ್ನು ಕರೆದುಕೊಂಡು ಬಂದ ಸೊಸೆಯು ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿ ದೃಢೀಕರಣ ಪತ್ರ ಪಡೆಯಬೇಕಾಗಿದೆ. ವಾರದಿಂದ ಅಲೆದಾಡುತ್ತಿದ್ದೇನೆ’ ಎಂದು ಸಪ್ಪೆಮೋರೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.
‘ದೊಡ್ಡ ಆಸ್ಪತ್ರೆಯಾದರು. ಅನಾರೋಗ್ಯ ಪೀಡಿತರಾಗಿ ಬರುವ ಕಾರ್ಮಿಕರಿಗೆ ಸರಿಯಾದ ಚಿಕಿತ್ಸೆ ಇಲ್ಲಿ ಸಿಗುವುದಿಲ್ಲ. ದೊಡ್ಡ ಸಮಸ್ಯೆ ಇದ್ದರೆ ಬೇರೆ ಆಸ್ಪತ್ರೆಗಳಿಗೆ ರವಾನಿಸಲು ಮೀನಾಮೇಷ ಎಣಿಸುತ್ತಾರೆ ಎಂದು ಆಸ್ಪತ್ರೆಗೆ ಬಂದ ಕಾರ್ಮಿಕರೊಬ್ಬರು ದೂರಿದರು.
‘ಚಿಕಿತ್ಸೆ ಪಡೆಯಲು ಹಣಪಾವತಿಸಬೇಕಿಲ್ಲ ಎಂಬ ಕಾರಣಕ್ಕೆ ಕಾರ್ಮಿಕರು ಇಲ್ಲಿಗೆ ಬರುತ್ತಾರೆ. ಕಾರ್ಮಿಕರೆಂದರೆ ಆಸ್ಪತ್ರೆಯವರಿಗೆ ಅಸಡ್ಡೆ. ಆದ್ದರಿಂದಲೇ ಈ ರೀತಿ ಉಡಾಫೆ ವರ್ತನೆ ಇದೆ. ಸಿಬ್ಬಂದಿಗಳನ್ನು ಸ್ವಲ್ಪ ಪ್ರಶ್ನೆ ಮಾಡಿದರೆ ಸಾಕು ಭದ್ರತಾ ಸಿಬ್ಬಂದಿ ಮೂಲಕಕಾರ್ಮಿಕರನ್ನು ಹೊರಗೆ ದಬ್ಬಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ದಾಖಲೆಗಳಲ್ಲಿ ಸಣ್ಣಪುಟ್ಟ ಲೋಪವಿದ್ದರೆ, ಇನಿಷಿಯಲ್(ಆರಂಭಿಕ ಅಕ್ಷರ) ಬಿಟ್ಟು ಹೋಗಿದ್ದರೆ ಅದನ್ನೇ ದೊಡ್ಡದು ಮಾಡಿ ಚಿಕಿತ್ಸೆ ನಿರಾಕರಿಸಲಾಗುತ್ತದೆ. ಈ ಎಲ್ಲ ಸಮಸ್ಯೆಗಳಿಂದ ಬೇಸತ್ತಿರುವ ಕಾರ್ಮಿಕರು ಇಎಸ್ಐ ಸೌಲಭ್ಯವೂ ಬೇಡ, ವೇತನದಲ್ಲಿ ಕಡಿತ ಆಗುವುದು ಬೇಡ ಎನ್ನುತ್ತಿದ್ದಾರೆ’ ಎಂದು ಇನ್ನೋರ್ವ ಕಾರ್ಮಿಕ ಹೇಳಿದರು.
ಅಗತ್ಯ ಔಷಧ ದಾಸ್ತಾನಿರುವುದಿಲ್ಲ. ಯಾವಾಗ ಕೇಳಿದರೂ ಸ್ಟಾಕ್ ಇಲ್ಲಎನ್ನುತ್ತಾರೆ. ಹೊಸ ಕಾಯಿಲೆಗಳಿಗೆ ಹಾಗೂ ದುಬಾರಿ ಬೆಲೆಯ ಔಷಧಗಳು ಇರುವುದೇ ಇಲ್ಲ. ಎಲ್ಲದಕ್ಕೂ ಖಾಸಗಿ ಮೆಡಿಕಲ್ ಸ್ಟೋರ್ಗಳನ್ನೇ ಅವಲಂಬಿಸಬೇಕಿದೆ. ಅಷ್ಟೇ ಅಲ್ಲದೆ ರೋಗಿಗಳಿಗೆ ಅವಧಿ ಮೀರಿದ ಔಷಧಿಗಳನ್ನು ನೀಡಿದ ಉದಾಹರಣೆಯು ಇಲ್ಲಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಬಳಿಕ ಕಂಪ್ಯೂಟರ್ ನಲ್ಲಿರುವ ಚಿತ್ರಗಳನ್ನು ರೋಗಿಗಳು ಮೋಬೈಲ್ ಮೂಲಕ ಫೋಟೋ ತೆಗೆದು ವೈದ್ಯರಿಗೆ ತೋರಿಸಬೇಕು.
ಇನ್ನೂ ಈ ಕುರಿತು ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ ಕಳಸನ್ನವರ ಜೊತೆಗೆ ಮಾತನಾಡಿದರೆ ಡೊಂಟ್ ಕೆರ್ ಎನ್ನುವ ವ್ಯಕ್ತಿತ್ವ ಅವರಲ್ಲಿ ಕಾಣುತ್ತದೆ. ಆದರೆ ಇಎಸ್ಐ ಆಸ್ಪತ್ರೆಗಳಿಗೆ ಹಣಕಾಸಿನ ಕೊರತೆ ಇಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಆದರೂ ಸರಿಯಾದ ವ್ಯವಸ್ಥೆ ಇಲ್ಲ. ಚಿಕಿತ್ಸೆ ವಿಪರೀತ ವಿಳಂಬವಾಗುವುದರಿಂದ ಕಾರ್ಮಿಕರು ರೋಸಿ ಹೋಗಿದ್ದಾರೆ.