ಬೆಳಗಾವಿ:-ಹಳೆ ಪಿಂಚಣಿ ಅನುಷ್ಠಾನ, ಅನುದಾನಿತ ಶಾಲೆಗಳಲ್ಲಿ ಖಾಲಿ ಹುದ್ದೆ ಭರ್ತಿ, ಬಡ್ತಿಯಲ್ಲಾದ ದೋಷ ಸರಿಪಡಿಸುವದು ಸೇರಿದಂತೆ ಶಿಕ್ಷಕರ ಸರ್ವ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಾಯುವ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹಣುಮಂತ ನಿರಾಣಿ ದಿ.12ರಂದು ಬೆಳಗಾವಿಯಲ್ಲಿ ಜರುಗಿದ ಬೆಳಗಾವಿ ಜಿಲ್ಲಾ ಘಟಕದ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ರಾಜು ಶೇಠ ಮಾತನಾಡಿ ಪ್ರಮುಖವಾಗಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುವುದರ ಜೊತೆಗೆ ಬದಲಾಗುತ್ತಿರುವ ಪದ್ಧತಿಗಳಿಗೆ ಅನುಗುಣವಾಗಿ ಶಾಲೆಗಳಿಗೆ ಆಧುನಿಕ ವ್ಯವಸ್ಥೆಗಳ ಸ್ಪರ್ಶ ನೀಡಲು ಶ್ರಮಿಸುತ್ತಿರುವುದಾಗಿ ಹೇಳಿದ ಅವರು ತನ್ನ ಮೊದಲ ಆದ್ಯತೆ ಶಿಕ್ಷಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ಎಸ್ಎಂ ಪಾಟೀಲ ಮಾತನಾಡಿ ಸಂಘ ಶಿಕ್ಷಕರ ಬೇಕು ಬೇಡಿಕೆಗಳನ್ನು ಈಡೇರಿಸಲು ಶಕ್ತಿ ಒದಗಿಸುವದರ ಜೊತೆಗೆ ಎಲ್ಲಾ ಹಂತಗಳಲ್ಲೂ ಶಿಕ್ಷಣದ ಗುಣಮಟ್ಟ ಮತ್ತು ವ್ಯವಸ್ಥೆಗಳ ಉನ್ನತೀಕರಣಕ್ಕಾಗಿ ಶ್ರಮಿಸುತ್ತಿದೆ ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ ಮಾತನಾಡಿ ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರಗಳ ಜನಪ್ರತಿನಿಧಿಗಳು ಶಿಕ್ಷಣ, ಮತ್ತು ಶಿಕ್ಷಕರ ಅಶೋತ್ತರಗಳಿಗೆ ಸ್ಪಂದಿಸುತ್ತಿದ್ದಾರೆ ಅದೇ ರೀತಿ ಅತೀ ಅವಶ್ಯಕವಾದ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮತ್ತು ಖಾಲಿ ಹುದ್ದೆಗಳ ಭರ್ತಿಯತ್ತ ವಿಶೇಷ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳಗಾವಿಯ ಉಪ ನಿರ್ದೇಶಕ ಮೋಹನಕುಮಾರ ಹಂಚಾಟಿ, ಬಿಇಓಗಳಾದ ಎಸ್ ಪಿ ದಾಸಪ್ಪನವರ, ಮೋಹನ ದಂಡಿನ, ಸಂಘದ ಸಂಘಟನಾ ಕಾರ್ಯದರ್ಶಿ ತುಕಾರಾಂ ಬಾಗೆನ್ನವರ, ಉಪಾಧ್ಯಕ್ಷ ಶಿವಾನಂದ ಮಳಗಲಿ, ಎಂ ಎಸ್ ತಲ್ಲೂರ, ಎಲ್ಎಸ್ ಬಹದ್ದೂರಿ, ಬಿಎಸ್ ಗಾಣಿಗೇರ, ಬಿ ಆರ್ ಸಿ ಎಂ.ಎಸ್. ಮೇದಾರ, ಪರಶುರಾಮ ಪಾಂಡವ ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಘಟಕಗಳ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಕಾರ್ಯದರ್ಶಿ ಅಶೋಕ ಖೋತ ಸ್ವಾಗತಿಸಿದರು. ಸುಮಿತ್ರಾ ಕರವಿನಕೊಪ್ಪ ನಿರೂಪಿಸಿದರು. ಶಿವಾನಂದ ತಲ್ಲೂರ ನಿರ್ವಹಿಸಿದರು.ಕೊನೆಯಲ್ಲಿ ವೀರೇಶ ಗಣಾಚಾರಿ ವಂದಿಸಿದರು.