ರಾಯಬಾಗ: ಮೇಖಳಿ ಗ್ರಾಮದ ರಾಮ ಮಂದಿರ ಮಠದ ಸ್ವಯಂ ಘೋಷಿತ ಲೋಕೇಶ್ವರ ಸ್ವಾಮಿಯಿಂದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿ ನೀಡಿದ ದೂರಿನ ಆಧಾರದಲ್ಲಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ’ (ಪೋಕ್ಸೋ) ಅಡಿಯಲ್ಲಿ ಮೂಡಲಗಿಯಲ್ಲಿ ಪ್ರಕರಣ ದಾಖಲಾಗಿದೆ.
ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡ ಮೂಡಲಗಿ ಪೊಲೀಸ್ ಅಧಿಕಾರಿಗಳು ಆರೋಪಿ ಲೋಕೇಶ್ವರ ಸ್ವಾಮಿಯನ್ನು ಮೇ 22 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಗ್ರಾಮವಂದರ ಕುಟುಂಬಸ್ಥರು ಎರಡು ವರ್ಷಗಳಿಂದ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮ ಮಂದಿರ ಮಠಕ್ಕೆ ಆಗಾಗ ಹೋಗಿಬರುತ್ತಿರುವುದರಿಂದ ಲೋಕೇಶ್ವರ ಸ್ವಾಮಿ ಪರಿಚಯವಾಗಿತ್ತು. ಮೇ 13ರಂದು ಬಾಲಕಿ ತನ್ನ ಗ್ರಾಮದ ತಾಯಿಯ ತವರು ಮನೆಗೆ ಹೋಗಿ ಮರಳಿ ತಮ್ಮ ಮನೆಗೆ ಬರುವ ಸಂದರ್ಭದಲ್ಲಿ ಲೋಕೇಶ್ವರ ಸ್ವಾಮಿ ಒಂದು ಕಾರಿನಲ್ಲಿ ಬಂದು ಬಾಲಕಿ ಪಕ್ಕದಲ್ಲಿ ಕಾರು ನಿಲ್ಲಿಸಿ ನಾನು ನಿಮ್ಮ ಮನೆಗೆ ಕಡೆಗೆ ಹೋಗುತ್ತಿರುವುದಾಗಿ ಹೇಳಿ ಬಾಲಕಿಯನ್ನು ಕಾರಿನಲ್ಲಿ ಕುಳಿಸಿಕೊಂಡು ಬಾಲಕಿಯ ಮನೆ ಬಂದರು ಕಾರನ್ನು ನಿಲ್ಲಿಸದೆ ಮಹಾಲಿಂಗಪೂರ ಮಾರ್ಗವಾಗಿ ಅತೀ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಬಾಲಕಿ ಎಷ್ಟೇ ಬೇಡಿಕೊಂಡರು ಬಾಲಕಿಗೆ ನೀನು ಗಲಾಟೆ ಮಾಡಿದರೆ ಕೊಲೆ ಮಾಡುವ ಬೆದರಿಕೆ ಹಾಕಿ ಸುಮ್ಮನೆ ಇರುವಂತೆ ಗದರಿಸಿದ್ದಾನೆ.
ನಂತರ ಮಹಾಲಿಂಗಪೂರದಿಂದ ಬಾಗಲಕೋಟ ಮಾರ್ಗವಾಗಿ ಹೋಗುವ ದಾರಿಯ ಮಧ್ಯೆ ಕಾರು ನಿಲ್ಲಿಸಿ, ಮತ್ತೊಬ್ಬ ಓರ್ವ ವ್ಯಕ್ತಿ ಕಾರನ್ನು ಚಲಾಯಿಸಿಕೊಂಡು ರಾಯಚೂರನ ಲಾಡ್ಜ್ ಗೆ ಕರೆದುಕೊಂಡು ಹೋಗಿ ರಾತ್ರಿ ವೇಳೆ ಬಾಲಕಿ ಎಷ್ಟೇ ಬೇಡಿಕೊಂಡರು ಒತ್ತಾಯ ಮಾಡಿ ಎರಡು ದಿನಗಳ ಕಾಲ ದೈಹಿಕ ಸಂಪರ್ಕ ಮಾಡಿದ್ದಾನೆ. ಮತ್ತೇ ಮೇ 15 ರಂದು ರಾಯಚೂರಿನಿಂದ ಹೊರಟು ಬಾಗಲಕೋಟೆಯ ಆನಂದ ಲಾಡ್ಜ್ ಮಾಡಿ ಅಲ್ಲಿಯೂ ಸಹ ದೈಹಿಕ ಸಂಪರ್ಕ ಮಾಡಿದ್ದಾನೆ.
ಮೇ 16ರಂದು ಮುಂಜಾನೆ ವೇಳೆ ಬಾಲಕಿ ಮನೆಗೆ ಕರೆದುಕೊಂಡು ಹೋಗುವಂತೆ ಅಂಗಲಾಚಿ ಬೇಡಿಕೊಂಡಾಗ ಬಾಲಕಿಯನ್ನು ಮಹಾಲಿಂಗಪೂರ ಬಸ್ ನಿಲ್ದಾಣದಲ್ಲಿ ಬಿಟ್ಟು ಈ ವಿಷಯ ಯಾರಿಗೂ ಹೇಳಬೇಡಾ ಒಂದು ವೇಳೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಾಲಕಿಯನ್ನು ಹುಡುಕಿತ್ತಿರುವ ಪೋಷಕರಿಗೆ ಬಾಲಕಿ ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದಾಳೆ. ಹೆದರಿದ ಬಾಲಕಿ ಮೇ 20 ರಂದು ತನ್ನ ತಂದೆಯ ಮುಂದೆ ಲೋಕೇಶ್ವರ ಸ್ವಾಮಿ ಮಾಡಿರುವ ಕೃತ್ಯವನ್ನು ಬಾಯಿಬಿಟ್ಟಿದ್ದಾಳೆ. ಆಗ ಬಾಲಕಿಯರ ತಂದೆ ಮೇ 21 ರಂದು ಬಾಗಲಕೋಟೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಜರುಗಿರುವ ವ್ಯಾಪ್ತಿ ಮೂಡಲಗಿ ಪೊಲೀಸ್ ಠಾಣಾ ಹದ್ದಿಗೆ ಬರುವುದರಿಂದ ಆ ಪ್ರಕರಣವನ್ನು ಮೂಡಲಗಿ ಪೊಲೀಸ್ ಠಾಣೆಗೆ ಬಾಗಲಕೋಟೆಯ ಮಹಿಳಾ ಪೊಲೀಸ್ ಠಾಣಾಧಿಕಾರಿಗಳು ವರ್ಗಾಯಿಸಿದ್ದಾರೆ ಎಂದು ಮೂಡಲಗಿ ಪೊಲೀಸ ಅಧಿಕಾರಿಗಳು ತಿಳಿಸಿದ್ದಾರೆ.
ಲೋಕೇಶ್ವರ ಸ್ವಾಮಿ ಹಿನ್ನೆಲೆ : ಮೂಲತಃ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ನಿವಾಸಿಯಾದ ಲೋಕೇಶ್ವರ್ ಶಾಬಣ್ಣ ಭಂಗಿ(30) ಎಂಬಾತ ಕಳೆದ ನಾಲ್ಕು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದ 10 ಎಕರೆ ಸರ್ಕಾರಿ ಗೈರನ್ ಜಾಗದಲ್ಲಿ ಕೆಲವು ಸ್ಥಳೀಯರ ಸಹಕಾರದೊಂದಿಗೆ 2019ರಲ್ಲಿ ರಾಮ ಮಂದಿರ ಮಠ ಎಂದು ಸ್ಥಾಪನೆ ಮಾಡಿ. ಸಾಕಷ್ಟು ಅಕ್ರಮ ಚಟುವಟಿಕೆ ಮಾಡುತ್ತಿರುವ ಬಗ್ಗೆ ಈಗಾಗಲೇ ಗ್ರಾಮಸ್ಥರು ಪೊಲೀಸ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರ್ ಅವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು. ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಕೂಡಾ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದ ಕೂಡಲೇ ಸ್ವಾಮಿಯನ್ನ ಊರು ಬಿಡಿಸಲಾಗಿತ್ತು. ಕೆಲವು ತಿಂಗಳ ನಂತರ ಮತ್ತೇ ಬಂದು ತನ್ನ ಅಕ್ರಮ ಚಟುವಟಿಕೆ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಹೇಳಿಕೆ: ನಮ್ಮ ಗ್ರಾಮದ ಸುಮಾರು 10 ಎಕರೆ ಸರ್ಕಾರಿ ಗೈರನ್ ಜಾಗದಲ್ಲಿ ಮಠ ನಿರ್ಮಾಣ ಮಾಡಿ ಬೇರೆ ಪರಸ್ಥಳದಿಂದ ಜನರು ರಾತ್ರಿ ವೇಳೆ ಮಟಕಾ ದಂಧೆ ಮಾಡುತ್ತಿರುವುದರಿಂದ ಗ್ರಾಮದ ಹೆಸರಿಗೆ ದಕ್ಕೆ ಉಂಟಾಗುತ್ತಿದೆ. ಈಗಾಗಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಕ್ಕೆ ತರಲಾಗಿತ್ತು. ಆದರೂ ಏನು ಪ್ರಯೋಜನವಾಗಿಲ್ಲ. ಇನ್ನು ಚಿಕ್ಕೋಡಿ ತಾಲೂಕಿನ ಹಂಜಾನಟ್ಟಿ ಗ್ರಾಮದಲ್ಲಿ ಕೂಡಾ ಇದೇ ಸ್ವಾಮಿ ಕೃಷ್ಣಮಠ ನಿರ್ಮಾಣ ನಿರ್ಮಾಣ ಮಾಡಿತ್ತಿದ್ದಾರೆ.
ವಸಂತ ಕರಿಗಾರ ( ಮೇಖಳಿ ಗ್ರಾಮದ ನಿವಾಸಿ)
ಹೇಳಿಕೆ: ಮೇಖಳಿ ಗ್ರಾಮದಲ್ಲಿ ಇರುವ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ರಾಮ ಮಂದಿರ ಮಠದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಎರಡು ಮೂರು ದಿನಗಳ ಹಿಂದೆ ಸ್ವಾಮೀಜಿಗೆ ನೋಟಿಸ್ ಕೂಡ ನೀಡಲಾಗಿದೆ.
ಸುರೇಶ ಮುಂಜಿ ( ರಾಯಬಾಗ ತಹಶೀಲ್ದಾರ).