ಧಾರವಾಡ (ಕರ್ನಾಟಕ ವಾರ್ತೆ)ಫೆ.೧೩: ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ನಂತರ ಜನವರಿ ೨೨, ೨೦೨೪ ರಂದು ಅಂತಿಮ ಮತದಾರ ಪಟ್ಟಿ ಪ್ರಕಟವಾಗಿದೆ. ಪ್ರತಿ ವಾರ್ಡಗಳಲ್ಲಿ ಬಿಎಲ್ಓಗಳು ಮತ್ತೋಮ್ಮೆ ಪ್ರಕಟಿತ ಮತದಾರರ ಪಟ್ಟಿಯ ಅನುಸಾರ ಪರಿಶೀಲನೆ ಕೈಗೊಂಡಿದ್ದು, ರಾಜಕೀಯ ಪಕ್ಷಗಳು ಬಿಎಲ್ಎ (ಬೂತ್ಮಟ್ಟದ ಏಜಂಟ್)ರನ್ನು ನೇಮಿಸಿ, ಅವರು ಈ ಕಾರ್ಯದಲ್ಲಿ ಪಾಲ್ಗೋಳ್ಳುವಂತೆ ಮಾಡಿದರೇ ಹೆಚ್ಚು ಅನುಕೂಲವಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಜಿಲ್ಲಾ ಪ್ರತಿನೀಧಿಗಳ ಸಭೆ ಜರುಗಿಸಿ ಮಾತನಾಡಿದರು.
ಇದು ಚುನಾವಣಾ ವರ್ಷವಾಗಿದೆ. ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಜರುಗುತ್ತಿರುವದರಿಂದ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಕಳೆದ ಜನವರಿ ೨೨ ರಂದು ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ನಂತರ ಅಂತಿಮ ಮತದಾರ ಪಟ್ಟಿ ಪ್ರಕಟವಾಗಿದೆ. ಪ್ರತಿ ಮತಗಟ್ಟೆ ಮಟ್ಟದ ಅಧಿಕಾರಿ ಮತದಾರ ಪಟ್ಟಿಯ ಅನುಸಾರ ತಮ್ಮ ವಾರ್ಡಗಳಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ಅರ್ಹ ಮತದಾರರ ಹೆಸರು ಸೆರ್ಪಡೆಗೆ ಅವಕಾಶವಿದೆ. ಈ ಕಾರ್ಯದಲ್ಲಿ ಮತಗಟ್ಟೆ ಮಟ್ಟದ ಏಜಂಟರು ತೊಡಗಿಕೊಳ್ಳಬಹುದು ಈಗಲೇ ಎಲ್ಲ ರಾಜಕೀಯ ಪಕ್ಷಗಳಿಗೆ ಪ್ರಕಟಿತ ಮತದಾರ ಪಟ್ಟಿಯ ಪ್ರತಿಯನ್ನು ಪೂರೈಸಲಾಗಿದೆ ಎಂದು ಅವರು ಹೇಳಿದರು
ಅರ್ಹ ಯಾವ ಒಬ್ಬ ಮತದಾರರು ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದರಿ ಆಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.