ಕೇರಳ: ಪುಟ್ಟ ಬಾಲಕನೊಬ್ಬ ಅಂಗನವಾಡಿಯಲ್ಲಿ ನೀಡುವ ಆಹಾರದ ಬಗ್ಗೆ ನೀಡಿದ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿದ ಕೇರಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ಅಂಗನವಾಡಿಗಳ ಊಟದ ಮೆನುವನ್ನು ಪರಿಷ್ಕರಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ಹೌದು, ರಿಜುಲ್ ಎಸ್. ಸುಂದರ್ (ಶಂಕು) ಹೆಸರಿನ ಪುಟ್ಟ ಬಾಲಕ ಅಂಗನವಾಡಿಯಲ್ಲಿ ಊಟಕ್ಕೆ ಉಪ್ಪಿಟ್ಟು ಬದಲಾಗಿ ಬಿರಿಯಾನಿ ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಕೇರಳ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡು ಸ್ಪಂದಸಿದ್ದಾರೆ. ‘ರಾಜ್ಯ ಸರ್ಕಾರ ಅಂಗನವಾಡಿ ವಿದ್ಯಾರ್ಥಿಗಳ ಊಟ ಮೆನುವನ್ನು ಪರಿಶೀಲಿಸಲು ನಿರ್ಧರಿಸಿದೆ’ ಎಂದು ಘೋಷಿಸಿದರು.
ಬಾಲಕ ತನ್ನ ತಾಯಿಯ ಬಳಿ ಅಂಗನವಾಡಿಯಲ್ಲಿ ಉಪ್ಪಿಟ್ಟಿನ ಬದಲಾಗಿ, ಬಿರಿಯಾನಿ ಅಥವಾ ಚಿಕನ್ ಫ್ರೈ ನೀಡಬೇಕೆಂದು ಹೇಳುತ್ತಿದ್ದಾನೆ. ಮಗನ ಬೇಡಿಕೆಯನ್ನು ತಾಯಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಾಲಕನಿಗೆ ಬಿರಿಯಾನಿ ಕಳುಹಿಸಲು ಮುಂದಾದ ಜನರು!
ಅಂಗನವಾಡಿಯಲ್ಲಿ ಬಿಡಿಯಾನಿ ಅಥವಾ ಚಿಕನ್ ಫ್ರೈ ಬೇಕು ಎಂದು ಹೇಳುತ್ತಿರುವ ಬಾಲಕನ ಕೋರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೇ ತಡ, ಸಾಕಷ್ಟು ಜನರು ಬಿರಿಯಾನಿ ಕಳುಹಿಸಿಕೊಡಲು ಮುಂದಾಗಿದ್ದಾರೆ. ಈ ಬಗ್ಗೆ ಸ್ವತಃ ಬಾಲಕನ ತಾಯಿ ಸ್ಥಳೀಯ ಮಾಧ್ಯವವೊಂದಕ್ಕೆ ಪ್ರತಿಕ್ರಿಯಿಸಿ, ವಿಡಿಯೋ ವೀಕ್ಷಿಸಿದ ಸಾಕಷ್ಟು ಮಂದಿ ಬಿರಿಯಾನಿ ಕಳುಹಿಸಿಕೊಡುವ ಬಗ್ಗೆ ಕರೆ ಮಾಡಿದ್ದಾರೆ ಎಂದು ಹೇಳಿದ್ದಾರೆ.