Wednesday, June 18, 2025
Google search engine
Homeಜಿಲ್ಲಾಬೆಳಗಾವಿಯಿಂದ ದಿಲ್ಲಿವರೆಗೆ ಇಂದಿಗೂ ಬಿ. ಶಂಕರಾನಂದ ವ್ಯಕ್ತಿತ್ವ , ಪರಿಚಯ ಹಚ್ಚಹಸಿರಾಗಿದೆ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ
spot_img

ಬೆಳಗಾವಿಯಿಂದ ದಿಲ್ಲಿವರೆಗೆ ಇಂದಿಗೂ ಬಿ. ಶಂಕರಾನಂದ ವ್ಯಕ್ತಿತ್ವ , ಪರಿಚಯ ಹಚ್ಚಹಸಿರಾಗಿದೆ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಬೆಳಗಾವಿ: ಮಾಜಿ ಕೇಂದ್ರ ಸಚಿವ, ದಿವಂಗತ ಬಿ. ಶಂಕರಾನಂದ ಅವರು ಏಳು ಬಾರಿ ಸಂಸದರಾಗಿ ಪ್ರತಿನಿಧಿಸಿದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಚಿಕ್ಕ ವಯಸ್ಸಿನಲ್ಲಿಯೇ ಸಂಸದೆಯಾಗಿ ಆಯ್ಕೆಯಾಗಿದ್ದು ನನ್ನ ಸೌಭಾಗ್ಯ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದರು.

ನಗರದ ಕ್ಲಬ್ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಕೇಂದ್ರ ಸಚಿವ, ದಿವಂಗತ ಬಿ. ಶಂಕರಾನಂದ ಅವರ ಜನ್ಮಶತಮಾನೋತ್ಸವ ಅಂಗವಾಗಿ ಕ್ಲಬ್ ರಸ್ತೆಗೆ  ದಿವಂಗತ ಬಿ. ಶಂಕರಾನಂದ ಅವರ ಹೆಸರು ಮರು ನಾಮಕರಣ ಮತ್ತು ಪ್ರತಿಮೆ ಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಿವಂಗತ ಬಿ. ಶಂಕರಾನಂದ ಅವರ ವ್ಯಕ್ತಿತ್ವ ಅವರ ಪರಿಚಯ ಇಂದಿಗೂ ಬೆಳಗಾವಿಯ ಜಿಲ್ಲೆಯ ಹಳ್ಳಿಗಳಿಂದ ದೆಹಲಿಯವರೆಗೂ ಹಚ್ಚಹಸಿರಾಗಿದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರವನ್ನು ಇಂದಿಗೂ ಅವರ ಹೆಸರಿನಲ್ಲಿ ದೆಹಲಿಯಲ್ಲಿ ಗುರುತಿಸಲಾಗುತ್ತದೆ ಎಂದು ತಿಳಿಸಿದರು.

ಮಾಜಿ ರಾಜ್ಯಸಭಾ ಸದಸ್ಯ, ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ ಅವರು ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿ, ಬೆಳಗಾವಿಯ ಕೀರ್ತಿಯನ್ನು ಇಡೀ ದೇಶದ ಮಟ್ಟದಲ್ಲಿ ಬೆಳಗಿದ ಹೆಮ್ಮೆಯ ಸುಪುತ್ರ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿ. ಶಂಕರಾನಂದ ಅವರದ್ದು ಸರಳ ಸಜ್ಜನಿಕೆಯ ವ್ಯಕ್ತಿತ್ವ. ಅವರೆಂದು ತಮ್ಮ ಅಧಿಕಾರವನ್ನು ದುರುಪಯೋಗ ಪಡೆಸಿಕೊಳ್ಳಲಿಲ್ಲ. ತಮ್ಮ ರಾಜಕೀಯ ಜೀವನದಲ್ಲಿ ಯಾರಿಗೂ ತೊಂದರೆ ಕೊಡಲಿಲ್ಲ. ಹಲವು ಯೋಜನೆಗಳನ್ನು ಬೆಳಗಾವಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ನನ್ನನ್ನು ಕೂಡ ರಾಜಕೀಯಕ್ಕೆ ಗುರುತಿಸಿದ್ದು ಬಿ. ಶಂಕರಾನಂದ ಅವರು ಎಂದು ತಿಳಿಸಿದರು.

ಶಾಸಕ ಅಭಯ ಪಾಟೀಲ್ ಮಾತನಾಡಿ, ಬಿ. ಶಂಕರಾನಂದ ಸಿಎಂ ಆಗಲಿಲ್ಲ. ಆದರೇ, ಹಲವರನ್ನು ಮುಖ್ಯಮಂತ್ರಿಗಳಾಗಲೂ ಅವಕಾಶ ಮಾಡಿಕೊಟ್ಟವರು. ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಅಂಗವಾಗಿ ರಸ್ತೆ ಮರು ನಾಮಕರಣ ಮತ್ತು ಪ್ರತಿಮೆ ನಿರ್ಮಾಣಕ್ಕೆ ಪಕ್ಷಬೇಧ ಮರೆತು ಕೈ ಜೋಡಿಸಿದ್ದೇವೆ ಎಂದು ಹೇಳಿದರು.

ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಬೆಳಗಾವಿ ಜಿಲ್ಲೆಯನ್ನು ದೇಶಕ್ಕೆ ತೋರಿಸಿ ಕೊಟ್ಟಿದ್ದು ಬಿ. ಶಂಕರಾನಂದ. ಅವರು ತಮ್ಮ 35 ವರ್ಷಗಳ ಅಧಿಕಾರದ ಅವಧಿಯಲ್ಲಿ ಮೌಲ್ಯಾಧಾರಿತ ರಾಜಕೀಯವನ್ನೇ ಮಾಡಿದರು. ಸರ್ವ ಧರ್ಮದವರನ್ನು ಬೆಳೆಸಿದರು. ಹೀಗಾಗಿ ಅವರ ಕುಟುಂಬಸ್ಥರು ರಾಜಕೀಯಕ್ಕೆ ಬರಬೇಕೆಂದು ಜನರ ಆಸೆ ಇದೆ. ಆ ಆಸೆಯನ್ನು  ಅವರ ಸುಪುತ್ರ  ಪ್ರದೀಪ್ ಕಣಗಲಿ ಈಡೇರಿಸಬೇಕೆಂದು ಸಲಹೆ ನೀಡಿದರು.

ಇದೇ ವೇಳೆ ನಗರದ ಕ್ಲಬ್ ರಸ್ತೆಗೆ ಬಿ. ಶಂಕರಾನಂದ ಮಾರ್ಗವೆಂದು ಮರು ನಾಮಕರಣ ಮಾಡಿ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ನಂತರ ಬಿ. ಶಂಕರಾನಂದ ಅವರ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಸಮಾರಂಭ ನೆರವೇರಿತು.

ಬಿ.ಶಂಕರಾನಂದ ಅವರ ಸುಪುತ್ರ ಪ್ರದೀಪ್ ಕಣಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಆಸೀಫ್‌ (ರಾಜು) ಸೇಠ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಮಹಾಪೌರ ಮಂಗೇಶ್ ಪವಾರ್, ಉಪಮಹಾಪೌರ ವಾಣಿ ಜೋಷಿ, ಮಾಜಿ ಶಾಸಕ ಫಿರೋಜ್ ಸೇಠ್, ಮಾಜಿ ಮಹಾಪೌರ ಸವೀತಾ ಕಾಂಬಳೆ, ನಗರಸೇವಕ ಸಂದೀಪ್ ಜೀರಗ್ಯಾಳ, ಡಿ.ಎಸ್‌ ನಾಯಕ, ಚಂದ್ರಮ್ಮ ಕಣಗಲಿ ಸೇರಿದಂತೆ ವಿವಿಧ ಗಣ್ಯರು ಹಾಗೂ ಬಿ.ಶಂಕರಾನಂದ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು

RELATED ARTICLES
- Advertisment -spot_img

Most Popular

error: Content is protected !!