ಬೆಳಗಾವಿ: ಹಿಡಕಲ್ ಜಲಾಶಯದ ನೀರನ್ನು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಒದಗಿಸಲು ನಮ್ಮ ಗಮನಕ್ಕೆ ಬರುವ ಮುಂಚೆಯೇ ಟೆಂಡರ್ ಆಗಿತ್ತು. ಈ ಯೋಜನೆ ಸ್ಥಗಿತಗೊಳಿಸಲು ಸೂಚನೆ ನೀಡಿದ್ದೆ, ಆದರೆ ಅದಕ್ಕೆ ಸಂಬಂಧಿಸಿದ ಇಲಾಖೆಗಳು ಯೋಜನೆ ಜಾರಿಗೆ ಅನುಮತಿ ನೀಡಿದ್ದು, ಈ ವಿಷಯವನ್ನು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ನಗರದ ಜಿಪಂ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಡಕಲ್ ಜಲಾಶಯದ ನೀರನ್ನು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಒದಗಿಸಲು ಬೆಳಗಾವಿ ಜನರಿಂದ ವಿರೋಧ ವ್ಯಕ್ತವಾಗಿದೆ. ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಈ ಯೋಜನೆಗೆ ಅನುಮತಿ ನೀಡಬಾರದೆಂದು ನನ್ನ ಬಳಿ ಮನವಿ ಮಾಡಿದ್ದಾರೆ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಈ ಯೋಜನೆ ಕುರಿತು ಚರ್ಚಿಸುವುದಾಗಿ ಹೇಳಿದರು.
ನಿಪ್ಪಾಣಿ, ಹತ್ತರಗಿ, ಸಂಕೇಶ್ವರ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಯಿಂದ ಕಳೆದ ಬಾರಿಯೂ ಸರ್ವಿಸ್ ರಸ್ತೆ ಹಾಳಾಗಿತ್ತು. ಈ ಬಗ್ಗೆ ಎನ್ಎಚ್ಐ ಅಧಿಕಾರಿಗಳಿಗೆ ಸೂಚನೆ ನೀಡಿದ ಬಳಿಕ ದುರಸ್ತಿ ಕೈಗೊಂಡಿದ್ದರು. ಈ ಬಾರಿಯೂ ಸರ್ವಿಸ್ ರಸ್ತೆ ಹಾಳಾದ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಸರ್ವಿಸ್ ರಸ್ತೆ ದುರಸ್ತಿಗೆ ಸೂಚಿಸುತ್ತೇನೆಂದರು.
ಮಹದಾಯಿ ಜಲಾನಯನ ಪ್ರದೇಶದಲ್ಲಿ ಬಂಡೂರಿ ನಾಲಾ ನೀರಾವರಿ ಯೋಜನೆಗೆ ರೈತರು ವಿರೋಧಿಸುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಭೆ ನಡೆಸಲು ತಿಳಿಸುತ್ತೇನೆ ಎಂದ ಸಚಿವರು, ಬೆಳಗಾವಿ ಜಿಲ್ಲೆಯಲ್ಲಿ ಎರಡು ಕೋವಿಡ್ ಪ್ರಕರಣ ದಾಖಲೆಯಾಗಿವೆ. ಇದಕ್ಕೆ ಆಂತಕ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ಈಗಾಗಲೇ ಮುಂಜಾಗ್ರತ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ತಾಲೂಕಿನ ಹಿರೇಬಾಗೇವಾಡಿ ಘಾಟಬಳಿ ಸರಣಿ ಅಪಘಾತ ಸಂಭವಿಸುತ್ತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರಿಗೆ ಡಿಸಿ ಅವರ ಜತೆ ಚರ್ಚಿಸಿ ಮುಂಜಾಗ್ರತೆ ಕ್ರಮ ಕುರಿತು ಸೂಚಿಸಲಾಗುವುದು. ಮಳೆ ಅವಾತಂರದಿಂದ ಸಮಸ್ಯೆ ಆಗುತ್ತಿರುವುದು ನಿಜ. ಆದರೆ, ಅಪಘಾತ ತಪ್ಪಿಸಲು ಹೆದ್ದಾರಿಯಲ್ಲಿ ಮಾರ್ಗಸೂಚಿ ಅಳವಡಿಸುವಂತೆ ಈ ಸಂಬಂಧ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಸಚಿವರು ಹೇಳಿದರು.