Thursday, June 19, 2025
Google search engine
Homeಜಿಲ್ಲಾವೀರರಾಣಿ ಬೆಳವಡಿ‌ ಮಲ್ಲಮ್ಮ ಉತ್ಸವ ಪ್ರಾಧಿಕಾರ ರಚನೆಗೆ ಪ್ರಯತ್ನ: ಶಾಸಕ ಮಹಾಂತೇಶ ಕೌಜಲಗಿ
spot_img

ವೀರರಾಣಿ ಬೆಳವಡಿ‌ ಮಲ್ಲಮ್ಮ ಉತ್ಸವ ಪ್ರಾಧಿಕಾರ ರಚನೆಗೆ ಪ್ರಯತ್ನ: ಶಾಸಕ ಮಹಾಂತೇಶ ಕೌಜಲಗಿ

ಬೆಳಗಾವಿ, ಫೆ.28: ಬೆಳವಡಿ ಮಲ್ಲಮ್ಮನ ಉತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಸಂಚರಿಸಿದ ವೀರಜ್ಯೋತಿಯನ್ನು ಬರಮಾಡಿಕೊಂಡು ಬೆಳವಡಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ‌ ನೀಡಲಾಯಿತು.

ಬೈಲಹೊಂಗಲ‌ ಶಾಸಕರಾದ ಮಹಾಂತೇಶ ಕೌಜಲಗಿ, ಚನ್ನಮ್ಮನ‌ ಕಿತ್ತೂರು ಶಾಸಕ‌ ಬಾಬಾಸಾಹೇಬ್ ಪಾಟೀಲ ಅವರು ಜ್ಯೋತಿ ಬರಮಾಡಿಕೊಂಡು ಧ್ವಜಾರೋಹಣ ನೆರವೇರಿಸಿದರು.

ಇದಕ್ಕೂ ಮುಂಚೆ ಬೆಳವಡಿ ಗ್ರಾಮದ ರಾಣಿ ಬೆಳವಡಿ ಮಲ್ಲಮ್ಮ ವೃತ್ತದಲ್ಲಿರುವ ಬೆಳವಡಿ ಮಲ್ಲಮ್ಮನ ಆಶ್ವಾರೂಢ ಪ್ರತಿಮೆಗೆ ಉಭಯ ಶಾಸಕರು ಹಾಗೂ ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಮಹಾಂತೇಶ ಕೌಜಲಗಿ, ಚನ್ನಮ್ಮನ‌ ಕಿತ್ತೂರು ಶಾಸಕ‌ ಬಾಬಾಸಾಹೇಬ್ ಪಾಟೀಲ ಅವರು, ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ವರ್ಷದಿಂದ ವರ್ಷಕ್ಕೆ ಬೆಳವಡಿ ಉತ್ಸವವು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.

ಜಾನಪದ ಕಲಾವಾಹಿನಿಗೆ ಚಾಲನೆ:

ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾನಪದ ಕಲಾವಾಹಿನಿಗೆ ಶಾಸಕ ಬಾಬಾಸಾಹೇಬ್ ಪಾಟೀಲ ಚಾಲನೆ ನೀಡಿದರು.

ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾತಂಡಗಳ ಜಾನಪದ ಕಲಾವಾಹಿನಿಯು ಬೆಳವಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಗ್ರಾಮದ‌ ಪ್ರಮುಖರು, ಅಧಿಕಾರಿಗಳು ಸೇರಿದಂತೆ ನೂರಾರು‌ ಜನರು ಪಾಲ್ಗೊಂಡಿದ್ದರು.

ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಬೆಳವಡಿ ಮಲ್ಲಮ್ಮನ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
***

RELATED ARTICLES
- Advertisment -spot_img

Most Popular

error: Content is protected !!