ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿ ಬಾಣಂತಿ ಮೃತಪಟ್ಟಿರುವ ಘಟನೆ ಇಂದು ಬೆಳಗಿನ ಜಾವ ಸಂಭವಿಸಿದೆ. ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಬಾಣಂತಿ ಅಂಜಲಿ ಪಾಟೀಲ್ (31) ಮೃತಪಟ್ಟವರು. ಹೆಣ್ಣು ಮಗು ಆರೋಗ್ಯವಾಗಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಾರ್ಮಲ್ ಹೆರಿಗೆ ಆಗುತ್ತದೆ ಎಂದು ವೈದ್ಯರು ಮೊದಲು ಹೇಳಿದ್ದರು. ಆಮೇಲೆ ಸಿಜೇರಿಯನ್ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡಿಲ್ಲ. ಹಾಗಾಗಿ, ಅಂಜಲಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ದೂರಿದ್ದಾರೆ. ಆಸ್ಪತ್ರೆ ಮುಂದೆ ಮೃತ ಅಂಜಲಿ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರ ಸ್ಪಷ್ಟನೆ ಹೀಗಿದೆ; ಬಿಮ್ಸ್ ಹೆರಿಗೆ ವಿಭಾಗದ ಮುಖ್ಯಸ್ಥ ಡಾ. ವಸಂತ ಕಬ್ಬೂರ ಘಟನೆ ಕುರಿತು ಮಾಹಿತಿ ನೀಡಿದ್ದು, ನಿನ್ನೆ ಸಂಜೆ ನಾಲ್ಕು ಗಂಟೆಗೆ ಅಂಜಲಿ ಪಾಟೀಲ ಒಪಿಡಿಗೆ ಬಂದಿದ್ದರು. ಜ.22ಕ್ಕೆ ಅಂಜಲಿ ಅವರಿಗೆ ಹೆರಿಗೆ ದಿನಾಂಕ ನೀಡಲಾಗಿತ್ತು. ಒಪಿಡಿಯಲ್ಲಿ ಪರಿಶೀಲನೆ ನಡೆಸಿದಾಗ ಮಗುವಿನ ಹಾರ್ಟ್ಬೀಟ್ ಕಡಿಮೆ ಆಗಿತ್ತು. ಆ ಕಾರಣಕ್ಕೆ ಸಿಜೇರಿಯನ್ ಮೂಲಕ ರಾತ್ರಿ 11.05ಕ್ಕೆ ಹೆರಿಗೆ ಮಾಡಲಾಗಿದೆ. ಬೆಳಗ್ಗೆ 5ಕ್ಕೆ ಅಂಜಲಿ ಸಾವನ್ನಪ್ಪಿದ್ದಾರೆ. ಅವರಿಗೆ ರಕ್ತ ಹೆಪ್ಪುಗಟ್ಟಿ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅಂಜಲಿ ಸಾವಿಗೆ ಆಮ್ನಿಯೊಟೆಕ್ ಫ್ಲೂಯಿಡ್ ಎಂಬಾಲೀಸ್ ಕಾರಣ ಎಂಬುದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದರು.
ಬಿಮ್ಸ್ ನಿರ್ದೇಶಕ ಡಾ. ಅಶೋಕಕುಮಾರ ಶೆಟ್ಟಿ ಮಾತನಾಡಿ, ಇದರಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡು ಬಂದಿಲ್ಲ. ಪ್ರತಿವರ್ಷ ಸುಮಾರು 10 ಸಾವಿರ ಹೆರಿಗೆ ಆಗುತ್ತವೆ. ಅದರಲ್ಲಿ 6 ಸಾವಿರ ಹೈ ರಿಸ್ಕ್ ಸಿಜೇರಿಯನ್ ಆಗುತ್ತವೆ. ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಖಲಾದ ಗರ್ಭಿಣಿಯರು ಕೊನೆ ಘಳಿಗೆಯಲ್ಲಿ ಗಂಭೀರ ಸ್ಥಿತಿಯಲ್ಲಿ ನಮ್ಮಲ್ಲಿಗೆ ಬರುತ್ತಾರೆ. ಹಾಗಾಗಿ, ಹಿರಿಯ ವೈದ್ಯರು ಆ ಬಾಣಂತಿ ಜೀವ ಉಳಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ, ಅದು ಸಫಲವಾಗಿಲ್ಲ. ಇನ್ನು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಕಡಿಮೆ ಸಾವಿನ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.