ಬೆಳಗಾವಿ: ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಿನಿಂದ ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣಗಳ ಬಗ್ಗೆ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ರಾಜ್ಯದಲ್ಲಿ ಫೈನಾನ್ಸ್ ಕಿರುಕುಳ ಎನ್ನುವುದು ವಿಪರೀತ ಹಂತಕ್ಕೆ ತಲುಪಿದ್ದು, ಇದೀಗ ರಾಜ್ಯ ಸರ್ಕಾರವು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಿರುಕುಳ ಕೊಡುವ ವರದಿಗಳು ಬರ್ತಿವೆ. ತೊಂದರೆ ಕೊಟ್ಟರೆ ದೂರು ದಾಖಲು ಮಾಡುವಂತೆ ತಿಳಿಸಿದ್ದೇವೆ. ಫೈನಾನ್ಸ್ ಕಿರುಕುಳದ ಬಗ್ಗೆ ಗೊಂದಲ ಇದೆ. ಸಾಲ ಪಡೆಯೋದು, ಕಿರುಕುಳ ಕೋಡೊದು ಬೇರೆ ವಿಚಾರ. ಸಬ್ಸಿಡಿ ಹೆಸರಿನಲ್ಲಿ ಸಾವಿರಾರು ಜನರಿಗೆ ಸಾಲ ಕೊಟ್ಟಿದ್ದಾರೆ ಎಂದರು.
ಹಣ ತುಂಬುವ ವಿಚಾರದಲ್ಲಿ ಈಗ ಸಂಘರ್ಷ ಆರಂಭವಾಗಿದೆ. ಅಲ್ಲದೆ ಈಗಾಗಲೇ ಡಿಸಿ ನೇತೃತ್ವದಲ್ಲಿ ಒಂದು ಸಭೆ ನಡೆಸಿದ್ದೇನೆ. ಎರಡು ತಿಂಗಳ ಸಮಯ ಕೇಳಿದ್ದೇವೆ. ಈ ನಿಟ್ಟಿನಲ್ಲಿ ಒಂದು ನಿರ್ದಿಷ್ಟ ಪರಿಹಾರವನ್ನು ಕಂಡುಕೊಳ್ಳಲಾಗವುದು. ಇನ್ನೊಂದು ತಿಂಗಳಲ್ಲಿ ಸಾಧ್ಯವಿರುವ ಪರಿಹಾರ ತೆಗೆದುಕೊಳ್ಳಿದ್ದೇವೆ ಎಂದು ಭರವಸೆ ನೀಡಿದರು.
ಶಿರೂರನಲ್ಲಿ ಮೈಕ್ರೋ ಫೈನಾನ್ಸ್ಗೆ ಸಂಬಂಧಿಸಿದಂತೆ ಮಹಿಳೆ ಆತ್ಮಹತ್ಯೆ ಪ್ರಕರಣ ನಡೆದಿದೆ. ದೂರು ದಾಖಲು ಮಾಡಲು ಸೂಚನೆ ನೀಡಲಾಗಿದೆ. ಮಧ್ಯವರ್ತಿಗಳೊಂದಿಗೆ ಫೈನಾನ್ಸ್ ಅವರು ಸೇರಿದ್ದಾರೆ ಎನ್ನುವ ಆರೋಪ ಇದೆ. ಮಧ್ಯವರ್ತಿಗಳಿಗೆ ಹಣ ಕೊಟ್ಟಿದ್ದಾರೆ, ಪೊಲೀಸ್ ತನಿಖೆ ನಡೆಸುವಂತೆ ಸೂಚನೆ ಕೊಡಲಾಗಿದೆ. ಈ ಸಂಬಂಧ ವರದಿ ಬಂದ ಕೂಡಲೇ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ತಾರಿಹಾಳದಲ್ಲಿ ಒಂದು ತಿಂಗಳ ಬಾಣಂತಿ ಅವರನ್ನು ಮನೆಯಿಂದ ಹೊರಹಾಕಿ ಮನೆ ಹರಾಜಿಗಿಟ್ಟ ಪ್ರಕರಣದ ಬಗ್ಗೆ ಮಾತನಾಡಿದ ಸಚಿವರು, ಕುಟುಂಬಸ್ಥರು ದೂರು ಕೊಟ್ಟರೆ, ಫೈನಾನ್ಸ್ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಇನ್ನು ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸಭೆ ನಡೆಸಲಿದ್ದಾರೆ ಎಂದರು.