ಬೆಂಗಳೂರು: ಮುಡಾ ಹಗರಣದ (Muda Scam) ತನಿಖೆ ನಡೆಸಿರುವ ಲೋಕಾಯುಕ್ತ (Lokayukta) ಇದೀಗ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಕ್ಲೀನ್ ಚಿಟ್ ನೀಡಿದೆ ಎನ್ನುವ ಮಾಹಿತಿ ಮಾಧ್ಯಮಗಳಿಗೆ ಸಿಕ್ಕಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ತಮಗೇನೂ ಗೊತ್ತಿಲ್ಲರೀ ಎಂದು ಪ್ರತಿಕ್ರಿಯಿಸಿದ್ದಾರೆ. ಲೋಕಾಯುಕ್ತ ವರದಿ ಕುರಿತು ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಸೋಮವಾರ ಕೋರ್ಟ್ ಗೆ ವರದಿ ಸಲ್ಲಿಸುತ್ತಾರೆ ಎಂಬ ಮಾಹಿತಿ ಇದೆ. ನನಗೆ ಅನ್ನಿಸುವ ಪ್ರಕಾರ ಕ್ಲೀನ್ ಚಿಟ್ ಅಂತಾ ಇದೆ. ಪ್ರಕರಣವನ್ನು ಮುಚ್ಚಿ ಹಾಕಲು ಲೋಕಾಯುಕ್ತ ಪ್ರಯತ್ನ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರು.
ನಾವು ಮೊದಲಿನಿಂದಲೂ ಸಿಬಿಐ ತನಿಖೆಗೆ ಆಗ್ರಹಿಸಿದ್ದೆವು
ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು, ತನಿಖೆಯ ವರದಿಯನ್ನು ಸೋಮವಾರ (ಜನವರಿ 27) ರಂದು ಕೋರ್ಟ್ಗೆ ಸಲಲ್ಲಿಸಲಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ಮೊದಲಿನಿಂದಲೂ ಸಿಬಿಐ ತನಿಖೆಗೆ ಆಗ್ರಹ ಮಾಡಿತ್ತು. ಅಧಿಕಾರಿಗಳು ಯಾಕೆ ಅವರ ಕುಟುಂಬಕ್ಕೋಸ್ಕರ ಕೆಲಸ ಮಾಡಿದ್ದಾರೋ ಗೊತ್ತಿಲ್ಲ? ಪ್ರಕರಣವನ್ನು ಮುಚ್ಚಿ ಹಾಕಲು ಲೋಕಾಯುಕ್ತ ಅಧಿಕಾರಿಗಳು ಪ್ರಯತ್ನ ಮಾಡಿದ್ದಾರೆ ಎಂದರು.
ಲೋಕಾಯುಕ್ತ ಕೇಸ್ ಮುಚ್ಚಿ ಹಾಕುತ್ತಾರೆ ಎಂದು ಮೊದಲಿನಿಂದ ಹೇಳಿದ್ದೆವು
ಇಡಿ ಕೂಡ ತನಿಖೆ ನಡೆಸುತ್ತಿದೆ. ಸಾವಿರಕ್ಕೂ ಹೆಚ್ಚು ಸೈಟ್ ಗಳು ಮುಡಾಗೆ ವಾಪಸ್ ಬರಬೇಕು. ಈವರೆಗೂ ಲೋಕಾಯುಕ್ತ ಒಂದು ಸೈಟ್ ಕೂಡ ಮುಟ್ಟುಗೋಲು ಹಾಕಿಲ್ಲ. ಇಡಿ ಅವರು ಅಷ್ಟೊಂದು ಆಸ್ತಿ ಸೀಜ್ ಮಾಡಿದ್ದಾರೆ. ಈ ಲೋಕಾಯುಕ್ತ ಯಾಕೆ ಸೀಜ್ ಮಾಡುತ್ತಿಲ್ಲ?. ಮೊದಲಿನಿಂದಲೂ ನಾವು ಲೋಕಾಯುಕ್ತ ಕೇಸ್ ಮುಚ್ಚಿ ಹಾಕುತ್ತಾರೆ ಅಂತಾ ಹೇಳಿದ್ದೆವು. ಹೀಗಾಗಿಯೇ ಸಿಬಿಐ ತನಿಖೆಗೆ ನಾವು ಮತ್ತು ಜೆಡಿಎಸ್ ಒತ್ತಾಯಿಸಿದ್ದೆವು ಎಂದರು.