ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಹಾಗೂ ಸಿಎಂ ಬದಲಾವಣೆ ವಿಚಾರ ಬಗ್ಗೆ ಕಾಂಗ್ರೆಸ್ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ನಾಯಕರು ಪರೋಕ್ಷವಾಗಿ ಆರೋಪ–ಪ್ರತ್ಯಾರೋಪ ಮಾಡುತ್ತಲೇ ಇದ್ದಾರೆ. ಅದರಲ್ಲೂ ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಖಡಕ್ ಸಂದೇಶ ನೀಡಿದ್ದಾರೆ. ಇದರಿಂದ ಕೈ ಪಾಳಯ ಫುಲ್ ಸೈಲೆಂಟ್ ಆಗಿದೆ.
ಕೆಪಿಸಿಸಿ ಅಧ್ಯಕ್ಷರ ವಿಚಾರದಲ್ಲಿ ನಡೆಯುತ್ತಿದ್ದ ರಾಜಕಾರಣಕ್ಕೆ ಖರ್ಗೆ ಬ್ರೇಕ್
ಜನವರಿ 21ರಂದು ನಡೆಯಲಿರುವ ಗಾಂಧಿ ಭಾರತ ಕಾರ್ಯಕ್ರಮಕ್ಕಾಗಿ ಕಾಂಗ್ರೆಸ್ ನಾಯಕರು ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ವಿಚಾರದಲ್ಲಿ ನಡೆಯುತ್ತಿದ್ದ ರಾಜಕಾರಣಕ್ಕೆ ಖರ್ಗೆ ಬ್ರೇಕ್ ಹಾಕಿದ್ದಾರೆ. ಇದರಿಂದ ಈಗ ಕೈ ನಾಯಕರು ಫುಲ್ ಸೈಲೆಂಟ್ ಆಗಿದ್ದಾರೆ. ಇನ್ನು ಕಾಂಗ್ರೆಸ್ನ ಕಾರ್ಯಕ್ರಮಕ್ಕೆ ಬಿಜೆಪಿ ವ್ಯಂಗ್ಯವಾಡಿದೆ.
ಕಾಂಗ್ರೆಸ್ನಲ್ಲಿ ನಡೆಯುತ್ತಿದ್ದ ಖುರ್ಚಿ ಟಾಕ್ ಫೈಟ್ ಸದ್ಯಕ್ಕೆ ಬ್ರೇಕ್ ತೆಗೆದುಕೊಂಡಂತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಗಪ್ಚುಪ್ ಅನ್ತಿದ್ದ ಹಾಗೆ ಎಲ್ಲರೂ ಸೈಲೆಂಟ್ ಆಗಿದ್ದಾರೆ ಎನ್ನಲಾಗ್ತಿದೆ. ಈ ನಡುವೆ ಗಾಂಧಿ ಭಾರತ ಕಾರ್ಯಕ್ರಮದ ತಯಾರಿಗಾಗಿ ಬೆಳಗಾವಿಯಲ್ಲಿ ಬೀಡುಬಿಟ್ಟಿರುವ ಡಿಕೆ ಶಿವಕುಮಾರ್ ಕುಂದಾನಗರಿಯಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಸತೀಶ್ ಜಾರಕಿಹೊಳಿ ವಿರೋಧಿ ಬಣ ಒಗ್ಗೂಡಿಸಲು ಮುಂದಾದ್ರಾ ಡಿಕೆಶಿ?
ಬೆಳಗಾವಿ ರಾಜಕಾರಣದಲ್ಲಿ ಪದೇ ಪದೇ ಮೂಗು ತೂರಿಸ್ತಾರೆ ಅಂತಾ ಸುರ್ಜೇವಾಲ ಎದುರು ಸತೀಶ್ ಜಾರಕಿಹೊಳಿ ದೂರು ಕೊಟ್ಟಿದ್ದಾರೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ವಿರೋಧಿ ಬಣದದಲ್ಲಿ ಗುರ್ತಿಸಿಕೊಂಡಿರುವ ಮಾಜಿ ಶಾಸಕ ಫಿರೋಜ್ ಸೇಠ್ ಮನೆಗೆ ಭೇಟಿ ನೀಡಿದ್ದ ಡಿಸಿಎಂ, ಮಹತ್ವದ ಚರ್ಚೆ ನಡೆಸಿದ್ದಾರೆ. ಜೈ ಗಾಂಧಿ, ಜೈ ಭೀಮ, ಜೈ ಸಂವಿಧಾನ ಕಾರ್ಯಕ್ರಮಕ್ಕೆ ಆಹ್ವಾನಿಸುವ ನೆಪದಲ್ಲಿ ಭೇಟಿ ಮಾಡಿ ಚರ್ಚೆ ಮೂಲಕ ಸತೀಶ್ ಜಾರಕಿಹೊಳಿ ವಿರೋಧಿ ಬಣ ಒಗ್ಗೂಡಿಸಲು ಮುಂದಾದ್ರಾ..? ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ.
ಸಿಎಂ ಕುರ್ಚಿಯನ್ನು ಎದುರು ನೋಡ್ತಿರುವ ಡಿ.ಕೆ ಶಿವಕುಮಾರ್, ಇತ್ತೀಚಿಗೆ ತಮಿಳುನಾಡಿನಲ್ಲಿ ಪ್ರತ್ಯಂಗಿರ ಹೋಮ ಮಾಡಿಸಿದ್ರು. ಆ ಬಳಿಕ ಶೃಂಗೇರಿಯಲ್ಲಿ ಇಷ್ಟಾರ್ಥ ಪೂಜೆ ನೆರವೇರಿಸಿದ್ರು. ಇಂದು ಬೆಳಗಾವಿಯಲ್ಲಿ ಕಪಿಲೇಶ್ವರನ ಸನ್ನಿಧಿಯಲ್ಲಿ ವಿಶೇಷ ಪೂಜೆ ಮಾಡಿದ್ರು. ಬರೋಬ್ಬರಿ 101 ಲೀಟರ್ ಹಾಲಿನ ಅಭಿಷೇಕ ನೆರವೇರಿಸಿದ್ರು.
ಕಪಿಲೇಶ್ವರನ ಅನುಗ್ರಹದಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಮುಂದೆ ಸಿಎಂ ಆಗಲಿ ಎಂದು ಅರ್ಚಕ ಮಂಜುನಾಥ್ ಹಾರೈಸಿದ್ರು. ದೇವಸ್ಥಾನದ ಟ್ರಸ್ಟ್ನಿಂದ ಸನ್ಮಾನ ಮಾಡಿ ಹಾರೈಸಲಾಗಿದೆ.
ಜನವರಿ 21ರಂದು ನಡೆಯಲಿರುವ ಕಾಂಗ್ರೆಸ್ ಸಮಾವೇಶದ ಸಿದ್ಧತೆ ಬರದಿಂದ ಸಾಗಿದ್ದು, ಫುಡ್ ಕಮಿಟಿ ಚೇರ್ಮನ್ ಮುನಿಯಪ್ಪ, ವಸತಿ ಚೇರ್ಮನ್ ಸುಧಾಕರ್, ರಿಸೆಪ್ಷನ್ ಕಮಿಟಿಯಲ್ಲಿರುವ ಡಾ. ಪರಮೇಶ್ವರ್, ಸಂಘಟನೆಯಲ್ಲಿ ಸತೀಶ್ ಜಾರಕಿಹೊಳಿ ಇದ್ದಾರೆ. ರಾಹುಲ್, ಪ್ರಿಯಂಕಾ ವಾದ್ರಾ ಜನವರಿ 21 ಕ್ಕೆ ವಿಶೇಷ ವಿಮಾನದಲ್ಲಿ ಬರಲಿದ್ದು, ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡ್ತಾರೆ ಎಂದಿದ್ದಾರೆ. ಇನ್ನು ಸರ್ಕಾರಿ ಹಣದಲ್ಲಿ ಕಾಂಗ್ರೆಸ್ ಸಮಾವೇಶ ಮಾಡ್ತಿದೆ ಎಂಬ ಶೆಟ್ಟರ್ ಆರೋಪಕ್ಕೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ಬೆಳಗಾವಿಯ ಗಾಂಧಿ ಭಾರತ ಕಾರ್ಯಕ್ರಮದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಮಾತನಾಡಿ, 1924ರಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧಿಜಿ ವಹಿಸಿಕೊಂಡಿದ್ರು. ಅದರ 100ನೇ ವರ್ಷದ ಕಾರ್ಯಕ್ರಮ ಆಚರಣೆ ಮಾಡ್ತಿದ್ದೇವೆ. ಜೈಬಾಪು ಜೈಭೀಮ್ ಜೈ ಸಂವಿಧಾನ ರ್ಯಾಲಿ ಆಯೋಜಿಸಿದ್ದೆವು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಭಾಗಿಯಾಗ್ತಾರೆ ಎಂದಿದ್ದಾರೆ.
ಇನ್ನೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಬೆಳಗಾವಿಯ ಗಾಂಧಿ ಭಾರತ ಕಾರ್ಯಕ್ರಮದ ಬಗ್ಗೆ ಕಿಡಿಕಾರಿದ್ದಾರೆ. ಕಾಂಗ್ರೆಸ್ಗೆ ಯಾವುದೇ ಸ್ಟ್ಯಾಂಡ್ ಇಲ್ಲ. ಅದೊಂದು ಬಸ್ಟ್ಯಾಂಡ್ ಆಗಿದೆ ಎಂದಿದ್ದಾರೆ. ನಕಲಿ ಗಾಂಧಿ ನೇತೃತ್ವದ ನಕಲಿ ಕಾಂಗ್ರೆಸ್ ಇದು. ನೀವು ಗಾಂಧಿ ಹೆಸರಿನಲ್ಲಿ ಜಾತ್ರೆ ಮಾಡುತ್ತಿದ್ದಿರಿ. ಈಗ ಅಂಬೇಡ್ಕರ್ ಮತ್ತು ಗಾಂಧಿ ಹೆಸರಿನಲ್ಲಿ ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡುತ್ತಿದ್ದಿರಿ ಎಂದು ಕಿಚಾಯಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮಾತನಾಡದಂತೆ ವಾರ್ನ್ ಮಾಡಿರುವ ವಿಚಾರಕ್ಕೆ ಸಚಿವ ಎಂಬಿ ಪಾಟೀಲ್ ಮಾತನಾಡಿ, ಯಾವುದೋ ಒಂದು ಕಾರಣಕ್ಕೆ ಹೇಳಿರುತ್ತಾರೆ. ಮಾಧ್ಯಮದವರು ಏನಾದರೂ ಸೃಷ್ಠಿ ಮಾಡಿರುತ್ತೀರಿ. ಊಟಕ್ಕೆ ಹೋದರೂ ಬೇರೆ ರೀತಿ ಸೃಷ್ಠಿ ಮಾಡಿರುತ್ತೀರಿ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ.
ಇದರ ಬೆನ್ನಲ್ಲೇ ಬಿಜೆಪಿ ಹಾಗೂ ಜೆಡಿಎಸ್ನಿಂದ 25 ಶಾಸಕರು ಕಾಂಗ್ರೆಸ್ ಬರುವುದಕ್ಕೆ ರೆಡಿ ಇದ್ದಾರೆ ಎನ್ನುವ ಮೂಲಕ ಎಂಬಿ ಪಾಟೀಲ್, ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ರಂಗೇರಿದೆ. ಜೊತೆ ಜೊತೆಗೆ ಡಿ.ಕೆ ಶಿವಕುಮಾರ್ ಬೆಳಗಾವಿ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವುದು ಕೆಲವರ ಕಣ್ಣು ಕೆಂಪಾಗಿಸಿದೆ ಎಂದು ಹೇಳಬಹುದು.
ಆಪರೇಷನ್ ಹಸ್ತದ ವಿಚಾರವಾಗಿ ಮಾತನಾಡಿಸ ಸಚಿವ ಎಂಬಿ ಪಾಟೀಲ್ ಅವರು, ಬಿಜೆಪಿಯಿಂದ 25 ಶಾಸಕರು ಬರ್ತಾರೆ ಎಂದು ಹೇಳಿದ್ದೆ, ಅದು ನಿಶ್ಚಿತ,ನಾನು ಯತ್ನಾಳ್ ಹೇಳಿಕೆಗೆ ರಿಯಾಕ್ಟ್ ಮಾಡಿದ್ದೆ. 60 ಶಾಸಕರು ಕಾಂಗ್ರೆಸ್ ನಿಂದ ಬಿಜೆಪಿಗೆ ಬರ್ತಾರೆ ಎಂದು ಬಾಲೀಶವಾಗಿ ಯತ್ನಾಳ್ ಹೇಳಿದ್ರು. ಹಾಗಾಗಿ ನಾನು ಆ ಹೇಳಿಕೆ ನೀಡಬೇಕಾಯ್ತು. ಬಿಜೆಪಿಯಿಂದ ಯಾರು ಯಾರು ನಮ್ಮ ಜೊತೆ ಗುರುತಿಸಿಕೊಂಡಿದ್ದಾರೆ ಎಲ್ಲರಿಗೂ ಗೊತ್ತಿದೆ. ಬಿಜೆಪಿಯಿಂದ ಕೆಲವು ಜನ ನಮ್ಮಹತ್ರ ಬರೋದಕ್ಕೆ ಇಚ್ಛೆ ಪಟ್ಟಿದ್ದಾರೆ. ನಾವೇನು ಆಫರೇಷನ್ ಕಮಲ ಮಾಡ್ತಿಲ್ಲ ಎಂದು ಹೇಳಿದರು.
ಜನತಾದಳದಿಂದಲೂ ಒಂದು ಗುಂಪು ಬರೋದಕ್ಕೆ ಸಿದ್ದವಾಗಿದೆ. ನಮ್ಮಿಂದ 60 ಶಾಸಕರು ಹೋಗುವ ಪ್ರಶ್ನೆ ಇಲ್ಲ, ನಮ್ಮಿಂದ 6 ಶಾಸಕರು ಹೋಗಲ್ಲ. ಆದರೆ ಬಿಜೆಪಿ,ಜೆಡಿಎಸ್ನಿಂದ 25ಶಾಸಕರು ಬರ್ತಾರೆಂದು ಹೇಳಿದ್ದೇನೆ. ಸೂಕ್ತ ಸಂಧರ್ಭದಲ್ಲಿ ಅವರು ಬರ್ತಾರೆ. ಯಾವಾಗ ಎಂದರೆ ನೋಡೊಣ ಮುಹೂರ್ತ ಕೂಡಿ ಬರಬೇಕಲ್ವಾ? ಎಂದು ಉತ್ತರಿಸಿದ್ದಾರೆ.
ಬಿಜೆಪಿ ಬಣ ರಾಜಕಾರಣ/ ಸುನಿಲ್ಕುಮಾರ್ ಪ್ರಧಾನಕಾರ್ಯದರ್ಶಿ ಸ್ಥಾನದಿಂದ ಕೈ ಬಿಡಿ ಎಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷದ ಆತಂರಿಕ ವಿಚಾರವಾಗಿದೆ. ಅವರಲ್ಲಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆಯಲ್ವಾ? ವಿಜಯೇಂದ್ರ, ಯತ್ನಾಳ್, ರಮೇಶ್ ಜಾರಕೀಹೊಳಿ ಒಬ್ಬರಿಗೊಬ್ಬರು ಏಕವಚನದಲ್ಲಿ ಮಾತಾಡ್ತಿದ್ದಾರೆ ಎಂದರು.
ವಿಜಯೇಂದ್ರ ಹೇಳ್ತಾರೆ ಸಿದ್ದರಾಮಯ್ಯ ಕುರ್ಚಿ ಅಲ್ಲಾಡುತ್ತಿದೆಯೆಂದು ಆದ್ರೆ ವಿಜಯೇಂದ್ರ ಕುರ್ಚಿ ಅಲ್ಲಾಡುತ್ತಿದೆ. ಒಂದೇ ಕಾಲಲ್ಲಿ ನಿಂತಿದೆ ಮೂರು ಕಾಲು ಹೋಗಿವೆ. ಅವರು ತಮ್ಮ ಸ್ಥಾನ ಭದ್ರಮಾಡಿಕೊಳ್ಳಲಿ ನಮ್ಮ ಬಗ್ಗೆ ಯೋಚನೆ ಬೇಡ. ನಮ್ಮಲ್ಲಿ ಒಗ್ಗಟ್ಟಾಗಿದ್ದೇವೆ. ಸಿಎಂ, ಡಿಸಿಎಂ ಎಲ್ಲರೂ ಒಂದಾಗಿದ್ದೇವೆ. ನಾವು ಐದು ವರ್ಷ ಸರ್ಕಾರ ಪೂರೈಸುತ್ತೇವೆ. ನಾವು 2028ಕ್ಕೆ ಮತ್ತೆ ಅಧಿಕಾರಕ್ಕೆ ಬರ್ತೇವೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷರ ವಾರ್ನಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷದ ಶಿಸ್ತಿನಿ ವಿಚಾರವಾಗಿ ಹೇಳಿರುತ್ತಾರೆ. ಏನೇ ಚರ್ಚೆಯಾಗಬೇಕಾದರೂ ನಾಲ್ಕು ಗೋಡೆ ಮಧ್ಯೆ ಆಗಬೇಕು. ಮಾಧ್ಯಮಕ್ಕೆ ಯಾಕೆ ಹೋಗ್ತೀರಿ ಎಂದು ಹೇಳೋದ್ರಲ್ಲಿ ತಪ್ಪೇನಿಲ್ಲ, ಹಿರಿಯರಿದ್ದಾರೆ ಅವರು.. 50 ವರ್ಷಗಳ ಸುಧೀರ್ಘ ರಾಜಕೀಯ ಅನುಭವ ಇದೆ. ನಮ್ಮವಯಸ್ಸಿನಷ್ಟು ಅವರಿಗೆ ರಾಜಕೀಯದ ಅನುಭವ ಇದೆ ಎಂದು ಎಂಬಿ ಪಾಟೀಲ್ ಹೇಳಿದರು.