(ಚಿಕ್ಕೋಡಿ) ಮೇ.31: ಪ್ರಸಕ್ತ ಲೋಕಸಭಾ ಚುನಾವಣೆಯ ಮತ ಏಣಿಕೆ ಕಾರ್ಯವು ಜೂನ್ 4 ರಂದು ಆರ್.ಡಿ.ಕಾಲೇಜಿನಲ್ಲಿ ಜರುಗಲಿದೆ. ರಾಜಕೀಯ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳು ತಮ್ಮ ಚುನಾವಣಾ ಏಜಂಟರು, ಮತ ಏಣಿಕಾ ಏಜಂಟರುಗಳು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸುವಂತೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ರಾಹುಲ ಶಿಂಧೆ ಅವರು ಹೇಳಿದರು.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಮೇ.31) ರಂದು ಜರುಗಿದ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಮತ ಏಣಿಕೆ ಪ್ರಕ್ರಿಯೆಗಳ ಕುರಿತು ಅಭ್ಯರ್ಥಿಗಳ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜರುಗಿಸಿ ಅವರು ಮಾತನಾಡಿದರು.
ಮತ ಏಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು, ಚುನಾವಣಾ ಏಜಂಟರು, ಮತ ಏಣಿಕೆ ಏಜಂಟರಿಗೆ ವಾಹನ ನಿಲುಗಡೆಗೆ, ಉಪಹಾರಕ್ಕೆ ನಿಗದಿತ ಸ್ಥಳ ಗುರುತಿಸಿ, ಸಿದ್ದತೆ ಮಾಡಲಾಗಿದೆ. ಅಂದು ಮತ ಏಣಿಕಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ 144 ಕಲಂ ಅಡಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಅನಗತ್ಯ ಓಡಾಟ, ಗುಂಪು ಸೇರುವುದು ಮಾಡುವಂತಿಲ್ಲ ಎಂದು ಅವರು ಹೇಳಿದರು.
ಮತ ಏಣಿಕಾ ಕೇಂದ್ರದೊಳಗೆ ಮೊಬೈಲ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತು ತರಲು ಅವಕಾಶವಿಲ್ಲ. ಯಾವುದೇ ರೀತಿಯ ಆಯುಧ, ಗುಟಕಾ, ಬೀಡಿ ಸಿಗರೇಟ್, ಎಲೆ ಅಡಿಕೆ ತರುವುದನ್ನು ಸಹ ನಿಬರ್ಂಧಿಸಲಾಗಿದೆ. ಚುನಾವಣಾ ಆಯೋಗದ ಎಲ್ಲ ನಿಯಮಗಳನ್ನು ಪಾಲಿಸುವ ಮೂಲಕ ಮತ ಏಣಿಕೆ ಕಾರ್ಯ ನಿಯಮಾನುಸಾರ, ಸುಗಮವಾಗಿ ಜರುಗಲು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಹಕಾರ ನೀಡಬೇಕೆಂದು ಅವರು ತಿಳಿಸಿದರು.
ಜೂನ್ 4 ರಂದು ಬೆಳಿಗ್ಗೆ ಸ್ಟ್ರಾಂಗ್ ರೂಮ್ ತೆರೆಯುವುದರಿಂದ ಹಿಡಿದು ಸಂಜೆ ಇವಿಎಂ ಮಷಿನ್ಗಳು ಭದ್ರತಾ ಕೊಠಡಿಗೆ ಹೋಗುವವರೆಗಿನ ಎಲ್ಲ ಹಂತಗಳ ಕುರಿತು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ರಾಹುಲ ಶಿಂಧೆ ಅವರು ಸಭೆಯಲ್ಲಿ ವಿವರಿಸಿದರು.
ರಾಜ್ಯ ಮಟ್ಟದ ಚುನಾವಣಾ ತರಬೇತಿದಾರುರಾದ ಎನ.ವಿ.ಶಿರಗಾಂವಕರ ಅವರು ಮತ ಏಣಿಕೆ ಪ್ರಕ್ರಿಯೆ, ಹಂತಗಳ ಕುರಿತು ಸವಿವರವಾಗಿ ಅಭ್ಯರ್ಥಿಗಳಿಗೆ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಿವರಿಸಿದರು.
ಸಭೆಯಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯ ಸಹಾಯಕ ಚುನಾವಣಾಧಿಕಾರಿ ಬಸವರಾಜ ಅಡವಿಮಠ, ಅಭ್ಯರ್ಥಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.