ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ ದುರಸ್ಥಿ ಕೆಲಸ ಮುಗಿಸಿ ಮನೆ ಕಡೆ ಹೊರಟಿದ್ದವರ ಮೇಲೆ ಆಯಿಲ್ ಟ್ಯಾಂಕರ್ ಹಾಯ್ದ ಪರಿಣಾಮ ಸ್ಥಳದಲ್ಲೆ ಮೂವರು ಸಾವನ್ನಪ್ಪಿ, ಟ್ಯಾಂಕರ್ ಚಾಲಕ ಸೇರಿ ನಾಲ್ವರಿಗೆ ಗಾಯವಾಗಿರುವ ಧಾರುಣ ಘಟನೆ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಮೇಲೆ ಕಾರ್ಮಿಕರು ದುರಸ್ಥಿ ಕೆಲಸ ಮುಗಿಸಿ ಇನ್ನೇನು ಮನೆ ಕಡೆ ಹೋಗಬೇಕು ಅನ್ನುವಷ್ಟರಲ್ಲಿ ಟ್ಯಾಂಕರ್ ರೂಪದಲ್ಲಿ ಬಂದ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ವೇಗವಾಗಿ ಬಂದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂರು ಜನ ಸ್ಥಳದಲ್ಲೆ ಉಸಿರು ಚೆಲ್ಲಿದ್ದಾರೆ. ರಾಮಚಂದ್ರ ಜಾಧವ(45), ಆತನ ಪುತ್ರ ಮಹೇಶ ಜಾಧವ(18) ಹಾಗೂ ಮತ್ತೋರ್ವ ಕಾರ್ಮಿಕ ರಮೇಶ(38) ಮೃತ ದುರ್ದೈವಿಗಳು.
ಭೀಮವ್ವ(55) ಎಂಬುವವರ ಎರಡು ಕಾಲುಗಳು ಕಟ್ ಆಗಿದ್ದು, ಲಕ್ಷ್ಮೀಬಾಯಿ ಜಾಧವ್(28) ಅನುಶ್ರೀ(18), ಮಂಗಳೂರು ಮೂಲದ ಲಾರಿ ಚಾಲಕ ದಿನೇಶ ಶೆಟ್ಟಿ(45)ಗೂ ಗಂಭೀರವಾದ ಗಾಯಗಳಾಗಿದೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮೃತರು ಹಾಗೂ ಗಾಯಾಳುಗಳು ಕಲಬುರ್ಗಿ ಮೂಲದವರೆಂದು ಮಾಹಿತಿ ಲಭ್ಯವಾಗಿದೆ.
ಟ್ಯಾಂಕರ್ ಗೇರು ಬೀಜದ ಆಯಿಲ್ ತುಂಬಿಕೊಂಡು ಹೊರಟಿತ್ತು. ಚಾಲಕನ ನಿಯಂತ್ರಣ ತಪ್ಪಿ ಕಾರ್ಮಿಕರ ಮೇಲೆ ಹರಿದಿದೆ. ಬಳಿಕ ಸರ್ವೀಸ್ ರಸ್ತೆಯಲ್ಲಿ ಟ್ಯಾಂಕರ್ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಂಡ-ಮಗನ ಕಳೆದುಕೊಂಡ ಮಹಿಳೆ ಕಣ್ಣೀರು:ಮೃತ ರಾಮಚಂದ್ರ ಜಾಧವ ಪತ್ನಿ ಗಾಯಾಳು ಲಕ್ಷ್ಮೀಬಾಯಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಬೆಳಿಗ್ಗೆ 7 ಗಂಟೆಗೆ ಕೆಲಸಕ್ಕೆ ಬಂದಿದ್ದೇವು. ಇಂದು ಭಾನುವಾರ ಆಗಿದ್ದರಿಂದ ಮಧ್ಯಾಹ್ನ 12ಕ್ಕೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದೇವು. ಅಷ್ಟರಲ್ಲಿ ಟ್ಯಾಂಕರ್ ಚಾಲಕ ಫೋನಿನಲ್ಲಿ ಮಾತಾಡುತ್ತಿದ್ದ. ಹಾಗೇ ನೋಡ ನೋಡುತ್ತಿದ್ದಂತೆ ಬಂದು ಗುದ್ದಿಯೇ ಬಿಟ್ಟ. ಅಪಘಾತದಲ್ಲಿ ನನ್ನ ಗಂಡ, ಮಗ ಮತ್ತು ಇನ್ನೊಬ್ಬರು ಸತ್ತಿದ್ದಾರೆ. ಒಟ್ಟು 6 ಮಂದಿ ಕೆಲಸಕ್ಕೆ ಬಂದಿದ್ದೇವು. ಅದರಲ್ಲಿ ಮೂವರು ಮೃತಪಟ್ಟಿದ್ದಾರೆ. ನನಗೆ ಮತ್ತು ಇನ್ನಿಬ್ಬರಿಗೆ ಗಾಯವಾಗಿದೆ. ಕೆಲಸಕ್ಕೆ ಬಂದು 8 ತಿಂಗಳು ಆಯಿತು. ಈಗ ನನಗೆ ಆಸರೆಯಾಗಿದ್ದ ಗಂಡ ಮತ್ತು ಮಗ ನನ್ನ ಅನಾಥ ಮಾಡಿ ಹೋಗಿ ಬಿಟ್ಟರು ಎಂದು ಕಣ್ಣೀರು ಹಾಕಿದರು.