ಬೆಂಗಳೂರು: ರಾಜ್ಯ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಒಡಾಡುತ್ತಿವೆ. ಬಿಜೆಪಿಯಲ್ಲಿ ವಿಜಯೇಂದ್ರ ಮತ್ತು ಯತ್ನಾಳ್ ಅವರದ್ದು ಒಂದು ಟೀಂ ಆದ್ರೆ, ಕಾಂಂಗ್ರೆಸ್ನಲ್ಲಿ ಡಿಕೆ ಶಿವಕುಮಾರ್ (DK Shivakumar) ಮತ್ತು ಅವರ ವಿರುದ್ಧ ಮತ್ತೊಂದು ತಂಡ ಕೆಲಸ ಮಾಡುತ್ತಿದೆ ಎಂಬ ಮಾತುಕಗಳು ಕೇಳಿಬರುತ್ತಿವೆ. ಈ ನಡುವೆ ಬಿಜೆಪಿಯಲ್ಲಿ ಗಾಲಿ ಜನಾರ್ದನ ರೆಡ್ಡಿ (Janardhana Reddy) ಮತ್ತು ಶ್ರೀರಾಮುಲು (Sriramulu) ನಡುವೆ ವೈಮಸ್ಸು ಉಂಟಾಗಿದ್ದು, ಇಬ್ಬರು ನಾಯಕರು ಒಬ್ಬರ ವಿರುದ್ದ ಮತ್ತೊಬ್ಬರು ಆರೋಪಗಳನ್ನು ಮಾಡುತ್ತಿದ್ದಾರೆ. ಇನ್ನು ಶ್ರೀರಾಮುಲು ಈ ರೀತಿ ಮಾತನಾಡಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಾರಣ ಎಂಬ ಜನಾರ್ದನ ರೆಡ್ಡಿ ಅವರ ಹೇಳಿಕೆ ಸಂಚಲನ ಮೂಡಿಸಿದೆ.
ಜನಾರ್ಧನ ರೆಡ್ಡಿ ವಿರುದ್ಧ ಶ್ರೀರಾಮುಲು ಆರೋಪಗಳನ್ನು ಮಾಡುತ್ತಿರುವುದ ಹಿಂದೆ ಡಿ ಕೆ ಶಿವಕುಮಾರ್ ಅವರ ಕೈವಾಡ ಇದೆ ಎಂಬ ಮಾತು ಕೇಳಿಬಂದಿದೆ. ಸ್ವತಃ ಜನಾರ್ದನ ರೆಡ್ಡಿ ಅವರ ಇಂತಹ ಆರೋಪ ಮಾಡಿದ್ದಾರೆ.
ಜನಾರ್ದನ ರೆಡ್ಡಿ ಹೇಳಿದ್ದೇನು?
ಮಾಜಿ ಸಚಿವ ಬಿ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಡಿ ಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಶ್ರೀರಾಮುಲು ಅವರು ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಈ ವಿಚಾರವಾಗಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜನಾರ್ದನ ರೆಡ್ಡಿ, ಪಕ್ಷ ಬಿಡೋದು ಶ್ರೀರಾಮುಲು ಅವರ ವೈಯಕ್ತಿಕ, ಹೋಗೋದಾದ್ರೆ ಅವ್ರು ಹೋಗಲಿ, ನನ್ನ ಮೇಲೆ ಆರೋಪ ಮಾಡೋದು ಎಷ್ಟು ಸರಿ? ಎಂದು ಪ್ರಶ್ನೆ ಮಾಡುವ ಮೂಲಕ ರಾಮುಲು ಕಾಂಗ್ರೆಸ್ಗೆ ಹೋಗಲು ಸಿದ್ದರಾಗಿದ್ದಾರೆ ಎಂಬ ಸೂಚನೆ ಕೊಟ್ಟಿದ್ದಾರೆ.
ಶ್ರೀರಾಮುಲುಗೆ ಡಿಕೆ ಶಿವಕುಮಾರ್ ಗಾಳ?
ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿಯನ್ನು ಮಣಿಸಲು ಹೇಗಾದರೂ ಮಾಡಿ ಶ್ರೀರಾಮುಲುರನ್ನು ಕರೆದುಕೊಳ್ಳಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಳ್ಳಾರಿ ಭಾಗದಲ್ಲಿ ಜನರು ಮಾತನಾಡುತ್ತಿದ್ದಾರೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ಪಕ್ಷ ಬಿಟ್ಟು ಹೋಗುವ ಉದ್ದೇಶ ಇದ್ದರೆ ಹೋಗಲಿ ನೇರವಾಗಿ ನನ್ನ ಮೇಲೆ ಆಪಾದನೆ ಮಾಡಿ, ಹೋಗೋದು ಸರಿ ಅಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ರಾಮುಲು ಬಂದರೆ ಸ್ವಾಗತ ಎಂದ ಕೆ ಎನ್ ರಾಜಣ್ಣ
ಈ ನಡುವೆ ತುಮಕೂರಿನಲ್ಲಿ ಮಾತನಾಡಿದ ಸಚಿವ ಕೆ ಎನ್ ರಾಜಣ್ಣ, ಶ್ರೀರಾಮುಲು ಕಾಂಗ್ರೆಸ್ಗೆ ಬಂದರೆ ಸ್ವಾಗತ ಎಂದು ಹೇಳಿದ್ದಾರೆ. ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವೆ ವೈಮನಸ್ಸು ಬಂದಿದೆ. ಶ್ರೀರಾಮುಲು ಒಬ್ಬ ಪವರ್ ಫುಲ್ ನಾಯಕ, ಅವರು ನಮ್ಮ ಸಮಾಜದಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ಬಿಎಸ್ಆರ್ ಪಾರ್ಟಿ ಕಟ್ಟಿ ಐದಾರು ಸ್ಥಾನ ಪಡೆದವರು. ಎಲ್ಲಾ ಸಮುದಾಯದವರು ಇಷ್ಟ ಪಡುತ್ತಾರೆ, ಸಂಭಾವಿತ ಮನುಷ್ಯ ಕೂಡ. ಅವರಿಗೆ ಬಿಜೆಪಿಯಲ್ಲಿ ಅಸಮಾಧಾನ ಇದ್ದು, ಕಾಂಗ್ರೆಸ್ಗೆ ಬಂದರೆ ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
ಇತ್ತ ಜನಾರ್ದನ ರೆಡ್ಡಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, ಸತೀಶ್ ಜಾರಕಿಹೊಳಿ ಅವರನ್ನು ಮಣಿಸಲು ನಾನು ಯಾರು? ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಜೀವನದಲ್ಲಿ ನನಗೆ ಪಕ್ಷ ತಾಯಿ ಇದ್ದಂತೆ, ತಾಯಿಗೆ ದ್ರೋಹ ಮಾಡುವ ಕೆಲಸ ಮಾಡಲ್ಲ. ನಾನು ಪಕ್ಷ ಬಿಡುವ ಪ್ರಶ್ನಯೇ ಇಲ್ಲ ಪ್ರಧಾನಿ ಮಂತ್ರಿಗಳನ್ನ ನಾನು ಭೇಟಿ ಮಾಡುತ್ತೇನೆ. ಮೋದಿ ಅವರಿಗೆ ನನ್ನ ಬಗ್ಗೆ ವಿಶೇಷ ಪ್ರೀತಿ ಇದೆ, ಅಮಿತ್ ಶಾ, ಗಡ್ಕರಿಗೆ ನನ್ನ ಬಗ್ಗೆ ಗೌರವ ಇದೆ ಇವರಿಗೆ ನಡೆದ ಘಟನೆ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದರು.