ಅಥಣಿ: ಪ್ರತಿವರ್ಷ ಸ್ವಾತಂತ್ರ್ಯ ಸಿಕ್ಕ ದಿನವನ್ನು ಭಾರತೀಯರಾದ ನಾವು ಹೆಮ್ಮೆಯಿಂದ ನೆನೆಯಬೇಕಿದೆ. ಸ್ವಾತಂತ್ರ್ಯ ದಿನಾಚರಣೆಯ ನಿಜವಾದ ಮಹತ್ವ ತಿಳಿಯಬೇಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಪ್ರಾಣತೆತ್ತ, ಬಲಿದಾನವಾದ ಎಲ್ಲ ವೀರರನ್ನು ನೆನೆದು, ಅವರಿಗೆ ನಮನ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ತಿಳಿಸಿದರು.
ಭಾರತ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಗುರುವಾರ (ಆ.15) ಅಥಣಿ ತಾಲೂಕಾಧಿಕಾರಿಗಳ ಕಚೇರಿಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಆಗಸ್ಟ್ 15 ರಂದು ದೇಶಭಕ್ತಿಯ ಉತ್ಸಾಹ, ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮ, ನಾಯಕರ ಭಾಷಣ ದೇಶದ ಎಲ್ಲೆಡೆ ಇರುತ್ತದೆ. ಹಾಗೆಯೇ ನಾವು ಇಂದು ಇಲ್ಲಿ ಎಲ್ಲರೂ ಸೇರಿರುವುದು ಸ್ವಾತಂತ್ರ್ಯ ದಿನ ಆಚರಣೆಗೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪು ಮಾಡಿಕೊಂಡು, ಅವರಿಗೆ ಸ್ಮರಿಸಬೇಕಾಗಿದೆ.
ಸ್ವತಂತ್ರದ ಮಹತ್ವದ ಜತೆಗೆ, ನಮ್ಮ ಜವಾಬ್ದಾರಿಗಳೇನು ಎಂಬುದನ್ನು ಅರ್ಥ ಮಾಡಿಕೊಂಡು, ದೇಶಕ್ಕೆ ನಾವು ಸಹ ಏನಾದರೂ ಕೊಡುಗೆ ನೀಡಬೇಕು ಎಂದರು.
ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ದೇಶಕ್ಕೆ ಸ್ವಾತಂತ್ರ ತಂದುಕೊಡಲು ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ತಿಲಕ್ ರವರು, ಶಾಸ್ತ್ರೀಜಿ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹೀಗೆ ಅನೇಕರು ಹೋರಾಟ ಮಾಡಿದ್ದಾರೆ. ತಮ್ಮ ಜೀವನವನ್ನು ದೇಶದ ಜನರ ಸಂತೋಷಕ್ಕಾಗಿ ಮೀಸಲಿಟ್ಟರು. ಅವರೆಲ್ಲರ ತ್ಯಾಗಗಳನ್ನು ಸ್ಮರಿಸಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಬೇಕಿದೆ.
ಇಂದು ನಮ್ಮ ಸಮಾಜದಲ್ಲಿರುವ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಲು ನಾವು ಜ್ಞಾನವನ್ನು ಹೆಚ್ಚಿಸಿಕೊಂಡು ಅನೇಕ ಒಳ್ಳೆ ಕೆಲಸಗಳನ್ನು ಮಾಡಬೇಕಿದೆ. ಅದಕ್ಕಾಗಿ ನಾವೆಲ್ಲರು ಒಮ್ಮತದಿಂದ ಪಣತೊಡೋಣ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಗೂ ಅಥಣಿ ಪಂಚಾಯತ್ ಆಡಳಿತಾಧಿಕಾರಿ ಬಸವರಾಜ ಹೆಗ್ಗನಾಯಕ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಥಣಿ ತಾಲ್ಲೂಕು ಕಾರ್ಯನಿರ್ವಾಹಕಾಧಿಕಾರಿ ಶಿವಾನಂದ ಕಲ್ಲಾಪುರ, ಪಂಚಾಯತ್ ರಾಜ್ಯ ಸಹಾಯಕ ನಿರ್ದೇಶಕ ಜಿ.ಎಸ್ ಮಠದ, ನರೇಗಾ ಸಹಾಯಕ ನಿರ್ದೇಶಕ ಕೋತವಾಲ್ ಸೇರಿದಂತೆ ಅಥಣಿ ತಾಲೂಕಾ ಪಂಚಾಯತ್ ಹಾಗೂ ನರೇಗಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
***