Thursday, June 19, 2025
Google search engine
Homeಜಿಲ್ಲಾಗೋಕಾಕ ರೋಡ್ ರೈಲು ನಿಲ್ದಾಣ ಮೇ. 22 ರಂದು ಪ್ರಧಾನಿ ನರೇಂದ್ರ ಮೋದಿ ...
spot_img

ಗೋಕಾಕ ರೋಡ್ ರೈಲು ನಿಲ್ದಾಣ ಮೇ. 22 ರಂದು ಪ್ರಧಾನಿ ನರೇಂದ್ರ ಮೋದಿ ವರ್ಚ್ಯುವುಲ್ ಮೂಲಕ ಲೋಕಾರ್ಪಣೆ

ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಮಾರುಕಟ್ಟೆಯ ಆಕರ್ಷಣೆ ಹಾಗೂ ಗೋಕಾಕ ಫಾಲ್ಸ್, ಗೊಡಚಿನಮಲ್ಕಿ ಫಾಲ್ಸ್ ದಂತ ಪ್ರವಾಸಿ ಕೇಂದ್ರದ ದೃಷ್ಟಿಯಿಂದ ವಿಶೇಷ ಮಹತ್ವ ಪಡೆದುಕೊಂಡಿರುವ ಗೋಕಾಕ ರೋಡ್ ರೈಲು ನಿಲ್ದಾಣವನ್ನು ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಅತ್ಯಾಧುನಿಕ ಸೌಲಭ್ಯಗಳಿಂದ ನವೀಕೃತಗೊಳಿಸಲಾಗಿದೆ.  ಇದೇ ದಿನಾಂಕ 22 ರಂದು ಮುಂಜಾನೆ 11  ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚ್ಯುವುಲ್ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ.

ಬೆಳಗಾವಿ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾಗಿರುವ ಗೋಕಾಕ ರೋಡ್ ನಿಲ್ದಾಣ 17 ಕೋಟಿ ರೂ. ವೆಚ್ಚದಲ್ಲಿ  ಜಾಗತಿಕ ಮಟ್ಟದ ಸೌಲಭ್ಯಗಳ ಮೂಲಕ ನವೀಕೃತಗೊಂಡು ವಿಶೇಷ ಗಮನ ಸೆಳೆಯುತ್ತಿದೆ.

ಸುಸಜ್ಜಿತ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದ್ದು, ಟಿಕೇಟ್ ಕೌಂಟರ್, ಪ್ಲಾಟ್ ಫಾರ್ಮ್, ಶೌಚಾಲಯ ನವೀಕರಿಸಲಾಗಿದೆ. 12 ಮೀಟರ್ ಅಗಲವುಳ್ಳ ಮೇಲ್ಸೇತುವೆ ನಿರ್ಮಿಸಲಾಗಿದೆ. ಸೂಕ್ತವಾದ ಸಂಕೇತಗಳನ್ನು ಅಳವಡಿಸಲಾಗಿದೆ. ರೈಲುಗಳ ಸಂಚಾರದ ಮಾಹಿತಿ ತಿಳಿಸಲು ಡಿಜಿಟಲ್‌ ಪರದೆಯ ವ್ಯವಸ್ಥೆ ಕಲ್ಪಿಸಲಾಗಿದೆ. ನಿಲ್ದಾಣವನ್ನು ಅತ್ಯಾಕರ್ಷಕವಾಗಿ ಅಭಿವೃದ್ಧಿ ಪಡಿಸಲಾಗಿದೆ.

ಹುಬ್ಬಳ್ಳಿಯ ನೈರುತ್ಯ ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕಣವಾಡಿ ಮಾತನಾಡಿ, ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ರಾಜ್ಯದ 61 ರೈಲ್ವೆ ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ನೈರುತ್ಯ ರೈಲ್ವೆ ವಿಭಾಗದಲ್ಲಿ 53 ನಿಲ್ದಾಣಗಳು ಬರುತ್ತವೆ. ಮೊದಲ ಹಂತವಾಗಿ 5 ನಿಲ್ದಾಣಗಳು ಲೋಕಾರ್ಪಣೆಗೆ ಸಿದ್ಧವಾಗಿದ್ದು, ಈ ಪೈಕಿ ಗೋಕಾಕ್ ರೋಡ್ ನಿಲ್ದಾಣವನ್ನು ಕೂಡ ನಾಳೆ ಗುರುವಾರ ಪ್ರಧಾನಿ ಮೋದಿಯವರು ಜನರ ಸೇವೆಗೆ ಉದ್ಘಾಟಿಸಲಿದ್ದಾರೆ. ಸ್ಥಳೀಯ ಕಲೆ, ವಾಸ್ತುಶಿಲ್ಪದ ಆಧಾರದ ಮೇಲೆ ನವೀಕರಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಇದು ಹೊಂದಿದೆ ಎಂದು ವಿವರಿಸಿದರು.

ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿ ಮಾತನಾಡಿ, ಪ್ರವಾಸೋಧ್ಯಮ, ಶಿಕ್ಷಣ, ಆರೋಗ್ಯ ಸಂಸ್ಥೆಗಳು ಸೇರಿ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಗೋಕಾಕ್ ತಾಲ್ಲೂಕು ಹೊಂದಿದೆ. ಹಾಗಾಗಿ, ನವೀಕೃತ ರೈಲು ನಿಲ್ದಾಣದಿಂದ ರೈತರಿಗೆ, ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಅದೇ ರೀತಿ ಎಲ್ಲಾ ರೈಲುಗಳು ಇಲ್ಲಿ ನಿಲುಗಡೆ ಆಗಬೇಕು. ಬಂದ್ ಆಗಿರುವ ಪಂಢರಪುರ ರೈಲನ್ನು ಪುನಃ ಆರಂಭಿಸುವಂತೆ ಕೋರಿದರು.

ಕೋಟ್:

ಪ್ರಮುಖ ರೈಲು ನಿಲ್ದಾಣವಾಗಿರುವ ಗೋಕಾಕ ರೋಡ್ ನಿಲ್ದಾಣ ನವೀಕರಣದಿಂದ ವ್ಯಾಪಾರಸ್ಥರಿಗೆ, ರೈತರಿಗೆ, ಕಾರ್ಮಿಕರಿಗೆ, ಪ್ರವಾಸಿಗರಿಗೆ ತುಂಬಾ ಅನುಕೂಲವಾಗಲಿದೆ. ವಿಶ್ರಾಂತಿ ಕೊಠಡಿಗಳು, ಟೀಕೆಟ್ ಕೌಂಟರ್, ಹೋಟೆಲ್, ಶೌಚಾಲಯ, ವಿಶೇಷ ಅತಿಥಿಗಳ ಕೊಠಡಿ, ಟೀಕೆಟ್ ಬುಕ್ಕಿಂಗ್, ಲಿಫ್ಟ್ ಸೇರಿ ಎಲ್ಲ ರೀತಿ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ ಬೆಳಿಗ್ಗೆ 9ರಿಂದ 12 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.

-ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ

RELATED ARTICLES
- Advertisment -spot_img

Most Popular

error: Content is protected !!