ಮುದ್ದೇಬಿಹಾಳ: ಕಾಂಗ್ರೇಸ್ ನವರು ನನ್ನ ಬಗ್ಗೆ ಇಲ್ಲ ಸಲ್ಲದ ಹೇಳಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಕಾಂಗ್ರೆಸ್ನವರು ನನ್ನ ಮೇಲೆ ಸಾಕಷ್ಟು ಅಪಪ್ರಚಾರ ಮಾಡುತ್ತಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನೆಂಬ ಭಾವನೆಯಿಂದ 11 ಚುನಾವಣೆಯಲ್ಲಿ ಗೆಲ್ಲಿಸಿದಂತೆ ಈ ಬಾರಿಯೂ ಗೆಲ್ಲಿಸಬೇಕು. ಇದು ನನ್ನ ಕೊನೆಯ ಚುನಾವಣೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.
ಗ್ರಾಮದ ಬಸ್ ನಿಲ್ದಾಣ ಬಳಿಯ ಮೈದಾನದಲ್ಲಿ ನಡೆದ ಯರಝರಿ ಮಹಾಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಅಭಿವೃದ್ಧಿ ಮಾಡಿಲ್ಲ ಎಂದು ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ ಹಾಗಾದರೇ ಜಲ ಜೀವನ್ ಮಿಷನ್ ಯೋಜನೆಯಿಂದ ಕುಡಿವ ನೀರಿನ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು ಯಾರು.
ಕಾಂಗ್ರೆಸ್ ಸರಕಾರ ಪಾಪಿಷ್ಟ ಸರಕಾರ ಇಂತಹ ಸರಕಾರವನ್ನು ಜೀವನದಲ್ಲಿ ನೋಡಿಲ್ಲ. 25 ಸಾವಿರ ಕೋಟಿ ರೂ.ಗಳ ದಲಿತರ ಅನುದಾನವನ್ನು ಸರಕಾರ ಬೇರೆ ಕೆಲಸಕ್ಕೆ ಬಳಸಿದೆ. ಜಿಲ್ಲೆಯಲ್ಲಿ ಬರಗಾಲ ಬಿದ್ದಿದೆ. ಕುಡಿವ ನೀರಿಲ್ಲ, ಜನರು ಸತ್ತಿದ್ದಾರೊ ಇಲ್ಲವೋ ಎಂಬುದನ್ನು ಸರಕಾರ ತಿರುಗಿ ನೋಡುತ್ತಿಲ್ಲ ಎಂದು ಆರೋಪಿಸಿದರು.
ಮಾಜಿ ಎಂಎಲ್ಸಿ ಅರುಣ ಶಹಾಪುರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ನಿಂದ ಬಂಜಾರಾ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ಮಂತ್ರಿ ಸ್ಥಾನ ನೀಡಿಲ್ಲ. ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡದೆ ಸಮಾಜವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಿಎಂ, ಡಿಸಿಎಂ ಮುಂದೆ ಆರೋಪಿಸಿದ್ದಾರೆ. ಆದರೆ ಬಿಜೆಪಿ ಸರಕಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದೆ.
ಸಮಾಜವನ್ನು ಅಭಿವೃದ್ಧಿ ಮಾಡಿದೆ ಆದರೆ ಬಂಜಾರಾ ಸಮಾಜವನ್ನು ಜಿಗಜಿಣಗಿ ಅವರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಜಿಗಜಿಣಗಿ ಅವರ ವ್ಯಕ್ತಿತ್ವ ಶ್ಲಾಘಿಸುವಂತಹದ್ದಾಗಿದ್ದು ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಮಾತನಾಡಿ, ನಾವೆಲ್ಲರೂ ದೇಶಭಕ್ತರು, ದೇಶವನ್ನು ಉಳಿಸಲು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು. 65 ವರ್ಷ ಕಾಂಗ್ರೆಸ್ ಆಡಳಿತದಿಂದ ದೇಶ ಅಧೋಗತಿಗೆ ಇಳಿದಿತ್ತು ಆದರೆ 10 ವರ್ಷಗಳಲ್ಲಿ ದೇಶ ಅಭಿವೃದ್ಧಿ ಪಥದತ್ತ ಸಾಗಿದೆ.
ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಿಶ್ವದಲ್ಲಿ ಭಾರತ ದೇಶ ಪ್ರಜ್ವಲಿಸಲು ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು. ಜಿಗಜಿಣಗಿ ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಬೇಕು. ಈ ಕುರಿತು ಮತದಾರರಿಗೆ ಕಾರ್ಯಕರ್ತರು ಜಾಗೃತಿ ಮೂಡಿಸಬೇಕು ಎಂದರು.
ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಪ್ರಭುಗೌಡ ದೇಸಾಯಿ, ಮಲಕೇಂದ್ರಗೌಡ ಪಾಟೀಲ, ಹೇಮರೆಡ್ಡಿ ಮೇಟಿ ಮಾತನಾಡಿ, ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯ ನೋಡಿದ ಕಾಂಗ್ರೆಸ್ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಊಹಾಪೋಹಗಳಿಗೆ ಕಿವಿಗೊಡಬೇಡಿ, ದೇಶದಲ್ಲಿ ಕಾಂಗ್ರೆಸ್ನಿಂದ ಇದುವರೆಗೂ ಅಭಿವೃದ್ಧಿ ಆಗಿರಲಿಲ್ಲ.
ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ವಿಶ್ವದ ಗಮನ ಸೆಳೆಯುತ್ತಿದೆ. ಕಾಂಗ್ರೆಸ್ನ ಸುಳ್ಳು ಭರವಸೆ ನಂಬಬೇಡಿ, ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳು ಬಂದ್ ಆಗಲಿವೆ. ಅಪಪ್ರಚಾರಕ್ಕೆ ಕಿವಿಗೊಡದೇ ಬಿಜೆಪಿ ಸಾಧನೆಯನ್ನು ಮತದಾರರಿಗೆ ತಿಳಿಸಿ ಎಂದರು.
ಮಂಡಲ ಅಧ್ಯಕ್ಷ ಜಗದೀಶ ಪಂಪನವರ, ಶಂಕರಗೌಡ ಶಿವಣಗಿ, ಭೀಮನಗೌಡ ಕೊಡಗಾನೂರ, ಮಹಾಂತೇಶ ಪಟ್ಟಣದ, ಸಿದ್ದು ಬುಳ್ಳಾ, ಸಾಬು ಮಾಶ್ಯಾಳ, ಅರವಿಂದ ಕಾಶೀನಕುಂಟಿ, ಲಕ್ಷ್ಮಣ ಬಿಜ್ಜೂರ ಇತರರಿದ್ದರು.